ಸಿಎಂನಿಂದ ಮೂಲ ಕಾಂಗ್ರೆಸ್ಸಿಗರು ಮೂಲೆಗುಂಪು: ಶೆಟ್ಟರ್

Public TV
1 Min Read

ಹುಬ್ಬಳ್ಳಿ: ಸಿಎಂ ಸಿದ್ಧರಾಮಯ್ಯನವರು ಮೂಲ ಕಾಂಗ್ರೆಸಿಗರನ್ನು ಮೂಲೆಗುಂಪು ಮಾಡಿದ್ದಾರೆ. ಅವರು ವಲಸೆ ಬಂದು ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಿದ್ದಾರೆ. ಸಿದ್ದರಾಮಯ್ಯನವರದ್ದು ಮನ್ ಕಿ ಬಾತ್, ಕಾಮ್ ಕಿ ಬಾತ್ ಯಾವುದೂ ಇಲ್ಲ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ರಾಜ್ಯ ಸರ್ಕಾರ ಸಾಲಮನ್ನಾ ಹೆಸರಿನಲ್ಲಿ ರೈತರಿಗೆ ಮೋಸ ಮಾಡಿದೆ. ಹದಿನಾಲ್ಕು ಕಂಡೀಷನ್ ಹಾಕಿ ಸಾಲಮನ್ನಾ ಮಾಡಿದ್ದಾರೆ. ಡಿವೈಎಸ್‍ಪಿ ಗಣಪತಿ ಸಾವು ಪ್ರಕರಣದ ಸಾಕ್ಷಿಯನ್ನು ನಾಶ ಮಾಡಿದ್ದಾರೆ. ಕೆ.ಜೆ. ಜಾರ್ಜ್ ತಕ್ಷಣ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‍ನವರು ಬಿಜೆಪಿ ಪಕ್ಷವನ್ನ ಅನುಕರಣೆ ಮಾಡಿ ತಮ್ಮ ಪಕ್ಷದ ಸಂಘಟನೆಯನ್ನು ಮಾಡುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ. ಪಾಲಿಕೆಗೆ ಬರಬೇಕಾದ 137 ಕೋಟಿ ರೂ. ಪಿಂಚಣಿ ಹಣ ಕೂಡಲೇ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ಧಾರವಾಡ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗೆ ಬೇಕಾದ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ಜಾರಿ ವಿಚಾರವಾಗಿ ಕೆಲವೊಂದು ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿವೆ. ಯೋಜನೆ ಜಾರಿಗೆ ಬಿಜೆಪಿಯಿಂದ ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಯೋಜನೆ ವಿಚಾರದಲ್ಲಿ ಪ್ರಧಾನಿಗಳ ಅವಶ್ಯಕತೆ ಬಂದಾಗ ಬಳಸಿಕೊಳ್ಳುತ್ತೇವೆ. ಗೋವಾ ಸರ್ಕಾರದೊಂದಿಗೆ ಚರ್ಚಿಸಿ ವಿವಾದ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು. ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಯುತ್ತಿದ್ದು, ಬಹಿರಂಗವಾಗಿ ಮಾತನಾಡಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *