ಇದು ಅತ್ಯಂತ ನೋವಿನ ಸಂಗತಿ, ಬಹಳ ಬೇಸರವಾಗ್ತಿದೆ: ಯು.ಟಿ ಖಾದರ್

Public TV
1 Min Read

ಮಂಗಳೂರು: ಇದು ಅತ್ಯಂತ ನೋವಿನ ಸಂಗತಿ ಹಾಗೂ ಬಹಳ ಬೇಸರವಾಗುತ್ತಿದೆ ಎಂದು ಉಳ್ಳಾಲ ಶಾಸಕ ಯು.ಟಿ ಖಾದರ್ ಅವರು ಹೇಳಿದರು.

ಸಿದ್ಧಾರ್ಥ್ ಮೃತದೇಹ ಸಿಕ್ಕಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಿದ್ಧಾರ್ಥ್ ಅವರು ಈ ರೀತಿ ನಮಗೆ ಸಿಕ್ಕಿದ್ದು, ಒಂದು ರೀತಿಯಲ್ಲಿ ಬೇಸರ ಆಗುತ್ತಿದೆ. ಮೊದಲು ಸಿದ್ಧಾರ್ಥ್ ಮೃತದೇಹವನ್ನು ಸ್ಥಳೀಯರು ನೋಡಿದ್ದಾರೆ. ಮೃತದೇಹವನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂಬುದು ಚರ್ಚೆ ಮಾಡುತ್ತೇವೆ. ಅದಕ್ಕೂ ಮೊದಲು ಕೆಲವು ಪ್ರಕ್ರಿಯೆ ಇದೆ. ಅದನ್ನು ಮುಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಬಳಿಕ ಮೃತದೇಹವನ್ನು ಪತ್ತೆ ಮಾಡಿದ ರಿತೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾವು ನದಿಯಲ್ಲಿ ಹೋಗುವಾಗ ಬೆಳಗ್ಗೆ 7 ಗಂಟೆಗೆ ಮೃತದೇಹ ಸಿಕ್ಕಿದೆ. ಅಲ್ಲದೆ ಸಿದ್ಧಾರ್ಥ್ ಅವರನ್ನು ಹುಡುಕಲು ನಮ್ಮ ಸಂಸ್ಥೆಯಿಂದ ಸೂಚನೆ ಸಿಕ್ಕಿತ್ತು. ಮಂಗಳವಾರ ರಾತ್ರಿ ಸಿಗದ ಕಾರಣ ಇಂದು ಬೆಳಗ್ಗೆ ನೋಡಿದ ತಕ್ಷಣ ಸಿದ್ಧಾರ್ಥ್ ಅವರೇ ಎಂದು ಅನುಮಾನ ಬಂತು. ಬಳಿಕ ಅವರ ಮೃತದೇಹವನ್ನು ದಡಕ್ಕೆ ತಂದು ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ಹೇಳಿದ್ದಾರೆ.

ಸೋಮವಾರ ತಡರಾತ್ರಿಯಿಂದ ಮಂಗಳವಾರ ತಡರಾತ್ರಿವರೆಗೆ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಮುಂಜಾನೆ 4 ಗಂಟೆ ಸುಮಾರಿನಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿರುವ ಕುರಿತು ಸ್ಥಳೀಯ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಪತ್ತೆಯಾಗಿದ್ದಾರೆ. ಮಂಗಳಾದೇವಿ ದೇವಸ್ಥಾನದ ಹಿಂಭಾಗದಲ್ಲಿ ರಸ್ತೆಯಿದೆ. ಆ ರಸ್ತೆಯಲ್ಲಿ ಹೊಯಿಗೆ ಬಜಾರ್ ಎಂಬ ಪ್ರದೇಶವಿದೆ. ಇಲ್ಲಿ ನದಿ ಒಂದು ಕಡೆಯಿಂದ ಮಂಗಳೂರು ಬಂದರನ್ನು ತಲುಪುತ್ತದೆ. ಇನ್ನೊಂದು ಕಡೆಯಿಂದ ಸಮುದ್ರವನ್ನು ತಲುಪುತ್ತದೆ. ಈ ಪ್ರದೇಶದಲ್ಲಿ ಸಿದ್ಧಾರ್ಥ್ ಮೃತದೇಹ ಸಿಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *