ಹಳಿ ತಪ್ಪಿದ್ದು ರೈಲಲ್ಲ, ಸರಕಾರ: ಮತ್ತೆ ಕೇಂದ್ರದ ವಿರುದ್ಧ ಗುಡುಗಿದ ನಟ ಕಿಶೋರ್

Public TV
1 Min Read

ಕೇಂದ್ರ ಸರಕಾರದ ವಿರುದ್ಧ ಮತ್ತೆ ಗುಡುಗಿದ್ದಾರೆ ನಟ ಕಿಶೋರ್ (Kishor). ಒಡಿಶಾದಲ್ಲಿ (Odisha) ನಡೆದ ಭೀಕರ ರೈಲು (train) ದುರಂತದ ಬಗ್ಗೆ ಪೋಸ್ಟ್ ಮಾಡಿರುವ ಅವರು,  ಇನ್ನೂರಕ್ಕೂ ಹೆಚ್ಚು ಜನರ ಸಾವಿಗೆ ನೇರವಾಗಿ ಕೇಂದ್ರ ಸರಕಾರವೇ ಹೊಣೆ ಎಂದು ಅವರು ಬಣ್ಣಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಇಂಗ್ಲಿಷ್ ಪತ್ರಿಕೆಯಲ್ಲಿ ಬಂದ ವರದಿಯನ್ನು ಪೋಸ್ಟ್ ಮಾಡಿ, ಅದರೊಂದಿಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ರೈಲ್ವೆ ಮಂತ್ರಿ ಈಗ ಹೋಗಿ ನಿಂತು ಕ್ಯಾಮೆರಾ ಮುಂದೆ ಕಣ್ಣೀರು ಸುರಿಸುವ ನಾಟಕ ಬಿಟ್ಟು, ಇಂದಿಗೂ ಖಾಲಿಯಿರುವ 3 ಲಕ್ಷಕ್ಕೂ ಹೆಚ್ಚು ರೈಲ್ವೆ ನೌಕರರನ್ನು 1500ಕ್ಕೂ ಹೆಚ್ಚು ರೈಲ್ವೆ ಸುರಕ್ಷತೆಗೆ ಬೇಕಾದ ಖಾಲಿಯಾಗೇ ಉಳಿದಿರುವ ಹುದ್ದೆಗಳನ್ನು ತುಂಬಿ, ಹಳಿ ನಿರ್ವಹಣೆ ಸಮಪರ್ಕವಾಗಿಸಬಹುದಿತ್ತೆ? ಎಂದು ಕಿಶೋರ್ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ದೀರ್ಘಕಾಲದ ಗೆಳತಿಯೊಂದಿಗೆ ಹಸೆಮಣೆ ಏರಿದ ಅಭಿಷೇಕ್

ಮುಂದುವರೆದು ಬರೆದಿರುವ ಕಿಶೋರ್, ‘ಕೋಟ್ಯಂತರ ರೂಪಾಯಿ ವ್ಯಯಿಸಿ ತಿಂಗಳಿಗೊಂದು ರೈಲಿಗೆ ಹಸಿರು ನಿಶಾನೆ ತೋರಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಬದಲು, ಕವಚ ತಂತ್ರಜ್ಞಾನಕ್ಕೆ ಪ್ರಾಮುಖ್ಯತೆ ಕೊಟ್ಟು ಎಲ್ಲೆಡೆ ಅಳವಡಿಸಬಹುದಿತ್ತೆ? ಹಾಗೆ ನೋಡಿದರೆ ಕಳೆದ ಆರೇಳು ವರ್ಷಗಳಲ್ಲಿ ಸಾವಿರಕ್ಕೂ ಹೆಚ್ಚು ರೈಲುಗಳು ಹಳಿತಪ್ಪಿ ಅಪಘಾತಕ್ಕೀಡಾಗಿದ್ದರೂ, 2021ರ ಸಿಎಜಿ ರಿಪೋರ್ಟನ್ನು ಕಡೆಗಣಿಸಿ, ಸುರಕ್ಷತೆಗಿಂತ ದೇಶದ ಸ್ವತ್ತನ್ನು ಮಾರಿ ದುಡ್ಡು ಮಾಡುವುದರಲ್ಲೇ ನಿರತವಾದ ಸರ್ಕಾರವೇ ಈ ದುರಂತಕ್ಕೆ ಕಾರಣವಲ್ಲವೆ?’ ಎಂದು ಪ್ರಶ್ನೆ ಮಾಡಿದ್ದಾರೆ.

ಅಪರಾಧಿ ಸರ್ಕಾರವೇ ಅಪರಾಧದ ತನಿಖೆ ಮಾಡಿ, ಅಪರಾಧಿ ಯಾರೆಂದು ಕಂಡು ಹಿಡಿಯುತ್ತದಂತೆ. ಎಂತ ವಿಪರ್ಯಾಸ. ಇಲ್ಲಿ ಹಳಿ ತಪ್ಪಿರುವುದು ರೈಲು ಬೋಗಿಗಳಲ್ಲ, ನಮ್ಮ ಸರ್ಕಾರ. ಅಪಘಾತಗಳನ್ನೂ ದುರಂತಗಳನ್ನೂ ತಮ್ಮ ಇಮೇಜು ಬೆಳೆಸಿಕೊಳ್ಳಲು ಬಳಸುವುದನ್ನು ಬಿಟ್ಟು ಚುನಾವಣೆಯಾಚೆಗಿನ ತಮ್ಮ ಕರ್ತವ್ಯವನ್ನು ಇನ್ನಾದರೂ ನಿಭಾಯಿಸಲಿ ಎಂದು ಅವರು ಬರೆದಿದ್ದಾರೆ.

Share This Article