ರಾಜಕೀಯದಲ್ಲಿ ಯಶಸ್ವಿಯಾಗಲು ಕೇವಲ ಸಿನಿಮಾ ಖ್ಯಾತಿ, ಹಣ ಸಾಕಾಗುವುದಿಲ್ಲ: ನಟ ರಜನಿಕಾಂತ್

Public TV
1 Min Read

ಚೆನ್ನೈ: ರಾಜಕೀಯ ಪ್ರವೇಶಕ್ಕೆ ತುದಿ ಕಾಲಿನಲ್ಲಿ ನಿಂತಿರುವ ನಟ ಕಮಲ್ ಹಾಸನ್ ಅವರಿಗೆ ರಜನಿಕಾಂತ್ ಸಲಹೆಯೊಂದನ್ನು ನೀಡಿದ್ದು, ರಾಜಕೀಯದಲ್ಲಿ ಯಶಸ್ವಿಯಾಗಲು ಕೇವಲ ಸಿನಿಮಾ ಖ್ಯಾತಿ ಹಾಗೂ ಹಣ ಎರಡೇ ಸಾಕಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಯಾವುದೇ ಒಬ್ಬ ನಟ ರಾಜಕೀಯದಲ್ಲಿ ಯಶಸ್ವಿಯಾಗಲು ಕೇವಲ ಅವರ ಖ್ಯಾತಿ ಹಾಗೂ ಹಣ ಸಾಕಾಗುವುದಿಲ್ಲ, ಅದಕ್ಕಿಂತ ಹೆಚ್ಚಿನ ಅವಶ್ಯಕತೆಗಳಿವೆ. ಇದನ್ನು ನಟ ಕಮಲ್ ಹಾಸನ್ ಚೆನ್ನಾಗಿ ತಿಳಿದಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ನಾನು ಕೇಳಿದ ಮಾತನ್ನು ಇಂದು ಕಮಲ್ ನನ್ನನ್ನೇ ಕೇಳುತ್ತಿದ್ದಾರೆ ಎಂದು ರಜನಿ ಹೇಳಿದ್ದಾರೆ.

ತಮಿಳು ಚಿತ್ರ ರಂಗದ ದಂತಕತೆ ಶಿವಾಜಿ ಗಣೇಶನ್ ಅವರ ಸ್ಮಾರಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ರಜನಿ ಅದೇ ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡಿದ್ದ ಸಹನಟ ಕಮಲ್ ಅವರಿಗೆ ಸಲಹೆಯನ್ನು ನೀಡಿದರು.

ಕಮಲ್ ಹಾಸನ್ ಮಾತನಾಡಿ, ಶಿವಾಜಿ ಗಣೇಶನ್ ಅವರು ಸಿನಿಮಾ ಮತ್ತು ರಾಜಕೀಯಕ್ಕೂ ಮೀರಿದ ಪ್ರಸಿದ್ಧ ವ್ಯಕ್ತಿಯಾಗಿದ್ದಾರೆ. ಈ ಕಾರಣಕ್ಕೆ ನಾನು ಭಾಗವಹಿಸುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರೂ ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೇನೆ ಎಂದರು.

ತಮಿಳುನಾಡು ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಸ್ಮಾರಕ ಭವನವನ್ನು ಉದ್ಘಾಟಿಸಿದರು. 2015ರಲ್ಲಿ ಸಿಎಂ ಆಗಿದ್ದ ಜಯಲಲಿತಾ ಅವರು ಸ್ಮಾರಕ ನಿರ್ಮಾಣ ಘೋಷಣೆಯನ್ನು ಮಾಡಿದ್ದರು. ತಮಿಳು ಚಿತ್ರರಂಗದಲ್ಲಿ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ, ದಾದಾ ಫಾಲ್ಕೆ ಸಾಹೇಬ್ ಪ್ರಶಸ್ತಿ ವಿಜೇತರಾದ ಗಣೇಶನ್ 1950ರ ದಶಕದ ನಂತರ ಅಪಾರ ಖ್ಯಾತಿಯನ್ನು ಗಳಿಸಿದ್ದರು.

ಗಣೇಶನ್ ಪುತ್ರ ಪ್ರಭು ಮಾತನಾಡಿ ಸ್ಮಾರಕ ನಿರ್ಮಾಣ ಅಮ್ಮ(ಜಯಲಲಿತಾ) ಕನಸಗಿತ್ತು, ಇಂದು ನಾನು ಹೆಚ್ಚು ಸಂತೋಷದಿಂದ ಇದ್ದು, ಅಪ್ಪ(ಗಣೇಶನ್) ತಮ್ಮ ಸಿನಿಮಾಗಳ ಮೂಲಕ ಜನರಿಗೆ ಹತ್ತಿರವಾಗಿದ್ದು, ಇದು ಅವರಿಗೆ ನೀಡುವ ಅತ್ಯುತ್ತಮ ಗೌರವ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *