ಪವರ್ ಮಂತ್ರಿ ಸಾಮ್ರಾಜ್ಯಕ್ಕೆ ಐಟಿ ಕನ್ನ- ಸತತ 2ನೇ ದಿನವೂ ಶೋಧ ಕಾರ್ಯ

Public TV
3 Min Read

– ಬೆಳ್ಳಂಬೆಳಗ್ಗೆ ವಿಚಾರಣೆಗೆ ಡಿಕೆಶಿ ಗರಂ
– ಲಾಕರ್ ಪಾಸ್‍ವರ್ಡ್ ನೀಡದ ಡಿಕೆ ಶಿವಕುಮಾರ್

ಬೆಂಗಳೂರು: ಪವರ್ ಮಿನಿಸ್ಟರ್ ಡಿಕೆ ಶಿವಕುಮಾರ್‍ಗೆ ಪವರ್‍ಫುಲ್ ಶಾಕ್ ನೀಡಿರುವ ಆದಾಯ ತೆರಿಗೆ ಇಲಾಖೆ ಎರಡನೇ ದಿನವೂ ವಿಚಾರಣೆ ಮುಂದುವರೆಸಿದೆ.

ಬುಧವಾರ ತಡರಾತ್ರಿ 1 ಗಂಟೆಯವರೆಗೆ ವಿಚಾರಣೆ ನಡೆಸಿದ ಅಧಿಕಾರಿಗಳು ರಾತ್ರಿ ಅಲ್ಲಿಯೇ ತಂಗಿದ್ದರು. ಮುಂಜಾಗ್ರತಾ ಕ್ರಮವಾಗಿ ಡಿಕೆಶಿ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಇಡೀ ರಾತ್ರಿ ಡಿಕೆಶಿ ಗೃಹಬಂಧನದಲ್ಲಿದ್ದರು. ದೂರವಾಣಿಯ ಸಂಪರ್ಕವೂ ಹೊಂದಬಾರದು ಎಂದು ಐಟಿ ತಾಕೀತು ಮಾಡಿದ್ದು ಬುಧವಾರವೇ ಐಟಿ ಅಧಿಕಾರಿಗಳು ಡಿಕೆಶಿ ಮೊಬೈಲ್ ಕಸಿದುಕೊಂಡಿದ್ದರು.

ಇದನ್ನೂ ಓದಿ: ಡಿಕೆ ಶಿವಕುಮಾರ್ ಮನೆಯಲ್ಲಿ ಸಿಕ್ಕಿತು 7.5 ಕೋಟಿ ರೂ. ಹಣ: ಮುಂದೆ ಈ ನಾಯಕರ ಮನೆ ಮೇಲೆ ದಾಳಿ?

ಕೆಲ ಕಾರ್ಯಕರ್ತರು ಮತ್ತು ಅಭಿಮಾನಿಗಳು ಡಿಕೆಶಿ ಮನೆ ಬಳಿಯೆ ಬಿಡು ಬಿಟ್ಟಿದ್ದು, ರಾತ್ರಿಯಿಂದಲೂ ಡಿಕೆ ಶಿವಕುಮಾರ್ ಭೇಟಿಗಾಗಿ ಕಾದು ಕುಳಿತಿದ್ದಾರೆ. ರಾತ್ರಿಯಿಡೀ ಡಿಕೆಶಿ ಮನೆ ಮುಂದಿರುವ ರಸ್ತೆಯಲ್ಲೆ ಕೆಲವು ಕಾರ್ಯಕರ್ತರು ಮಲಗಿದ್ದರು.

ಇಂದು ಬೆಳಗ್ಗೆ 6.30ರಿಂದ ವಿಚಾರಣೆ ಪ್ರಾರಂಭವಾಗಿದೆ. ಆದ್ರೆ ಬೆಳ್ಳಂಬೆಳಗ್ಗೆ ವಿಚಾರಣೆ ಆರಂಭಿಸಿರುವುದಕ್ಕೆ ಡಿಕೆಶಿ ಗರಂ ಆಗಿದ್ದಾರೆ. ಬೆಳ್ಳಂಬೆಳಗ್ಗೆ ವಿಚಾರಣೆ ಏಕೆ? ನಿನ್ನೆಯಿಂದ ನಿಮ್ಮ ವಶದಲ್ಲೇ ಇದ್ದೀನಿ ಅಲ್ವಾ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ಪವರ್’ ಮಿನಿಸ್ಟರ್ ಡಿಕೆ ಶಿವಕುಮಾರ್ ಬಳಿ ಆಸ್ತಿ ಎಷ್ಟಿದೆ?

ಸದ್ಯ ಡಿಕೆಶಿ ಮನೆಯಲ್ಲಿದ್ದ ಎರಡು ಲಾಕರ್‍ಗಳು ಮಾತ್ರ ಓಪನ್ ಆಗಿದ್ದು, ಉಳಿದ ಮೂರು ಲಾಕರ್‍ಗಳ ಪಾಸ್‍ವರ್ಡ್ ಹೇಳುವಂತೆ ಡಿಕೆಶಿ ಮೇಲೆ ಐಟಿ ಅಧಿಕಾರಿಗಳು ಒತ್ತಡ ಹಾಕಿದ್ದಾರೆ. ಮನೆಯಲ್ಲಿರುವ ಕೆಲವು ದಾಖಲಾತಿಗಳು ಮತ್ತು ಲಾಕರ್ ಗಳ ತಪಾಸಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಐಟಿ ಅಧಿಕಾರಿಗಳ ಕಾರ್ಯಚರಣೆಯ ಸಂಪೂರ್ಣ ವಿಡಿಯೋ ಚಿತ್ರಿಕರಣದ ಮೂಲಕ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಸದಾಶಿವನಗರದ ಡಿಕೆಶಿ ಮನೆಗೆ ತಡರಾತ್ರಿ ಸಹೋದರ ಡಿಕೆ ಸುರೇಶ್ ಆಗಮಿಸಿದ್ರು. ಈಗಲ್ಟನ್ ಗಾಲ್ಫ್ ರೆಸಾರ್ಟ್‍ನಿಂದ ನೇೀರವಾಗಿ ಡಿಕೆಶಿ ಮನೆಗೆ ಬಂದ ಡಿಕೆ ಸುರೇಶ್, ಈ ದಾಳಿಗೆಲ್ಲ ಬೆದರುವ ಮನುಷ್ಯ ಡಿಕೆ ಶಿವಕುಮಾರ್ ಅಲ್ಲ. ಸತ್ಯ, ಪಾರದರ್ಶಕ ದಾರಿಯಲ್ಲಿ ನಾವಿದ್ದೇವೆ. ಪ್ರತಿ ವರ್ಷವೂ ಸರಿಯಾದ ಸಮಯಕ್ಕೆ ಆದಾಯ ತೆರಿಗೆ ಕಟ್ಟಿದ್ದೇವೆ. ಡಿಕೆ ಸುರೇಶ್, ಶಿವಕುಮಾರ್ ಮನೆಯಲ್ಲಿ ಹಣ ಸಿಕ್ಕಿದ್ರೆ ನಾವು ಜವಾಬ್ದಾರರು. ಅದಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ನಾವು ಒದಗಿಸಲಿದ್ದೇವೆ. ಬೇರೆಯವರ ಮನೆಯಲ್ಲಿ ಸಿಕ್ಕ ಹಣ, ಆಸ್ತಿಪತ್ರಗಳಿಗೆ ನಾವು ಜವಾಬ್ದಾರರಲ್ಲ ಅಂದ್ರು.

ಇದನ್ನೂ ಓದಿ: ಗಾಲ್ಫ್ ಆಡೋ ನೆಪದಲ್ಲಿ ಎಂಟ್ರಿಕೊಟ್ಟು ಡಿಕೆಶಿಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದು ಹೀಗೆ 

ಮಾಧ್ಯಮಗಳು ನಮ್ಮ ವಿರುದ್ಧ ಅನಗತ್ಯ ಆರೋಪ ಮಾಡಿವೆ. ಊಹಾಪೋಹಗಳಿಗೆ ಮಾಧ್ಯಮಗಳು ಜೀವ ತುಂಬುತ್ತಿವೆ. ಯಾರು ಮಾಧ್ಯಮಗಳಿಗೆ ಅದೇನು ಮಾಡಿದ್ದಾರೋ ತಿಳಿಯುತ್ತಿಲ್ಲ. ಅಣ್ಣ ಮತ್ತು ಕುಟುಂಬದ ಯೋಗಕ್ಷೇಮ ವಿಚಾರಿಸಲು ಬಂದಿದ್ದೇನೆ. ಅಧಿಕಾರಿಗಳ ಪ್ರಶ್ನೆಗಳಿಗೆ ಸಮರ್ಪಕ ರೀತಿಯಲ್ಲಿ ಅಣ್ಣ ಉತ್ತರಿಸಿದ್ದಾರೆ. ಮುಂದಿನ ವಿಚಾರಣೆ ಹಾಗೂ ತನಿಖೆಗೆ ಸಹಕರಿಸಲಿದ್ದೇವೆ. ಈ ದಾಳಿ ನಿರೀಕ್ಷಿತವಲ್ಲ ಅಂತ ಡಿಕೆ ಸುರೇಶ್ ಹೇಳಿದ್ರು.

ಅತ್ತ ದೆಹಲಿಯಲ್ಲಿ ಸಂಜೆ ಹೊತ್ತಿಗೆ ದೆಹಲಿಯ ಡಿಕೆಶಿ ನಿವಾಸ ಮತ್ತು ಆಪ್ತರ ಮನೆಯ ಕಬೋರ್ಡ್ ಮತ್ತು ಬ್ಯಾಗ್‍ಗಳಲ್ಲಿ ಜೋಡಿಸಿಡಲಾಗಿದ್ದ 500 ಮತ್ತು 2 ಸಾವಿರ ಮುಖಬೆಲೆಯ 7.5 ಕೋಟಿ ಸೀಜ್ ಮಾಡಲಾಗಿದ್ದು, ಶೋಧ ಕಾರ್ಯ ರಾತ್ರಿಯೂ ಮುಂದುವರೆದಿತ್ತು. ಊಟವನ್ನು ಡಿಕೆಶಿ ಮನೆಗೆ ತರಿಸಿಕೊಂಡ ಐಟಿ ಅಧಿಕಾರಿಗಳು, ಅಲ್ಲೇ ಮೊಕ್ಕಾಂ ಹೂಡಿದ್ರು. ಇನ್ನು ಬೆಂಗಳೂರಿನಿಂದ ದೆಹಲಿಗೆ ಭೇಟಿ ನೀಡಿದ್ದ ಐಟಿ ಅಧಿಕಾರಿಯೊಬ್ರು ರೇಡ್ ಮಾಹಿತಿ ಪಡೆದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಈ ನಡುವೆ ಕೇಂದ್ರ ಸರ್ಕಾರ ತಮ್ಮ ವಿರುದ್ಧ ಯುದ್ಧ ಘೋಷಿಸಿದೆ. ನಮ್ಮ ಶಾಸಕರ ಸುರಕ್ಷತೆಗೆ ಕ್ರಮ ಕೈಗೊಳ್ಳಿ ಎಂದು ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗದ ಮೊರೆ ಹೋಗಿದೆ. ಅತ್ತ ಐಟಿ ಅಧಿಕಾರಿಗಳು ನಡೆಸಿದ ಶೋಧದ ಬಗ್ಗೆ ವರದಿ ನೀಡುವಂತೆ ಚುನಾವಣಾ ಆಯೋಗ ಹಣಕಾಸು ಸಚಿವಾಲಯಕ್ಕೆ ಸೂಚಿಸಿದೆ. ಶೋಧ ಕಾರ್ಯಾಚರಣೆಗೆ ಕೇಂದ್ರ ಅರೆ ಸೇನಾ ಪಡೆಗಳನ್ನು ಬಳಸಿರುವ ಸಂಬಂಧ ವಾಸ್ತವ ವರದಿ ನೀಡುವಂತೆ ಕೇಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *