ಮಂಡ್ಯದಲ್ಲಿ ಮುಂದುವರಿದ ಐಟಿ ರೇಡ್ – ನಿಖಿಲ್ ತಂಗಿದ್ದ ಹೋಟೆಲ್ ಮೇಲೆ ದಾಳಿ

Public TV
1 Min Read

ಮಂಡ್ಯ: ಮೈತ್ರಿ ಪಕ್ಷಗಳ ನಾಯಕರು ನಿರಂತರವಾಗಿ ಕಿಡಿಕಾರುತ್ತಿದ್ದರೂ ಜಿಲ್ಲೆಯಲ್ಲಿ ಐಟಿ ತನ್ನ ದಾಳಿಯನ್ನು ಮುಂದುವರಿಸಿದೆ. ಇಂದು ಕೂಡ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್‍ನ ಬೃಂದಾವನದಲ್ಲಿರುವ ಖಾಸಗಿ ಹೋಟೆಲ್ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಾಮಾನ್ಯವಾಗಿ ಮುಖ್ಯಮತ್ರಿ ಕುಮಾರಸ್ವಾಮಿ ಸೇರಿದಂತೆ ಕ್ಷೇತ್ರಕ್ಕೆ ಆಗಮಿಸುವ ಹಲವು ಗಣ್ಯ ನಾಯಕರು ಇದೇ ಹೋಟೆಲಿನಲ್ಲಿ ವಾಸ್ತವ್ಯ ಹೂಡುತ್ತಾರೆ. ಈ ಹಿನ್ನೆಲೆಯಲ್ಲಿ ಐಟಿ ರೇಡ್ ಆಗಿರುವ ಶಂಕೆ ವ್ಯಕ್ತವಾಗಿದ್ದು, ನಿನ್ನೆ ರಾತ್ರಿ ಕೂಡ ಮೈತ್ರಿ ಅಭ್ಯರ್ಥಿ ನಿಖಿಲ್ ಅವರು ಇದೇ ಹೋಟೆಲಿನಲ್ಲಿ ತಂಗಿದ್ದರು.

ಇಂದು ಮಧ್ಯಾಹ್ನದ ವೇಳೆ ಆಗಮಿಸಿದ ಐಟಿ ಅಧಿಕಾರಿಗಳ ತಂಡ ಸುಮಾರು ಅರ್ಧ ಗಂಟೆ ಕಾಲ ಹೋಟೆಲ್ ಕೊಠಡಿಯನ್ನು ಪರಿಶೀಲನೆ ನಡೆಸಿತು. 30 ಜನರ ಅಧಿಕಾರಿಗಳ ತಂಡ ದಾಳಿಯ ವೇಳೆ ಆಗಮಿಸಿತ್ತು ಎಂಬ ಮಾಹಿತಿ ಲಭಿಸಿದೆ.

ಚುನಾವಣೆ ಘೋಷಣೆಯಾದ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಮನೆ ಮೇಲೆ ಐಟಿ ದಾಳಿ ನಡೆಸಿತ್ತು. ಅಲ್ಲದೇ ನಿನ್ನೆಯೂ ಕೂಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಾಯಕ ಎಂ.ಎಸ್ ಆತ್ಮಾನಂದ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.

ಎಂ.ಎಸ್ ಆತ್ಮಾನಂದ ಅವರು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕರಾಗಿದ್ದು, ಸದ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಮಂಡ್ಯದ ಸುಭಾಷ್ ನಗರ 1ನೇ ತಿರುವಿನಲ್ಲಿರುವ ಆತ್ಮಾನಂದ ಮನೆ ನಾಲ್ಕೈದು ಅಧಿಕಾರಿಗಳ ತಂಡ ದಾಳಿ ನಡೆಸಿ ಮನೆಯಲ್ಲಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿತ್ತು.

Share This Article
Leave a Comment

Leave a Reply

Your email address will not be published. Required fields are marked *