ಶಿಕ್ಷಣ ಸಂಸ್ಥೆ ಬಿಟ್ಟು, ಯಾವುದೇ ವ್ಯವಹಾರ ನಡೆಸುತ್ತಿಲ್ಲ- ಪರಮೇಶ್ವರ್

Public TV
1 Min Read

– ಯಾವ ಕಾರಣಕ್ಕೆ ದಾಳಿ ಮಾಡಿದ್ದಾರೋ ಗೊತ್ತಿಲ್ಲ

ಬೆಂಗಳೂರು: ನಾವು ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ ಇನ್ನಾವುದೇ ವ್ಯವಹಾರವನ್ನು ನಡೆಸುತ್ತಿಲ್ಲ. ಐಟಿಯವರಿಗೆ ಯಾವ ಮಾಹಿತಿ ಲಭ್ಯವಾಗಿದೆಯೋ ಗೊತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.

ತಮ್ಮ ನಿವಾಸ ಹಾಗೂ ಸಿದ್ಧಾರ್ಥ್ ಶಿಕ್ಷಣ ಸಂಸ್ಥೆ ಮೇಲೆ ಐಟಿ ದಾಳಿ ನಡೆದಿರುವ ಕುರಿತು ಮಾತನಾಡಿದ ಅವರು, ಖಾಸಗಿ ಬಸ್ ಸೇರಿದಂತೆ ನಾವು ಯಾವುದೇ ವ್ಯವಹಾರ ನಡೆಸುತ್ತಿಲ್ಲ. ಕೇವಲ ಶಿಕ್ಷಣ ಸಂಸ್ಥೆಯನ್ನು ಮಾತ್ರ ನಡೆಸುತ್ತಿದ್ದೇವೆ. ಶಿಕ್ಷಣ ಸಂಸ್ಥೆ ಸಹ ನಮ್ಮ ತಂದೆಯವರು ಮಾಡಿದ್ದು ಬಿಟ್ಟರೆ ನಮ್ಮದು ಯಾವುದೇ ಬಿಸಿನೆಸ್ ಇಲ್ಲ. ನನಗೆ ಬೇರೆ ಯಾವುದೇ ಹೆಚ್ಚಿನ ಮಾಹಿತಿ ಇಲ್ಲ. ಯಾವ ಕಾರಣಕ್ಕೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೋ ಗೊತ್ತಿಲ್ಲ. ಅವರಿಗೆ ಯಾವ ಮಾಹಿತಿ ಬೇಕೋ ಅದನ್ನು ನಾವು ಕೊಡುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.

ರಾಜಕೀಯ ದುರುದ್ದೇಶದಿಂದ ನಡೆದ ದಾಳಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ನಾನು ಹೆಚ್ಚು ಮಾತನಾಡುವುದಿಲ್ಲ. ನಮ್ಮ ಶಿಕ್ಷಣ ಸಂಸ್ಥೆ 56, 58 ವರ್ಷಕ್ಕೂ ಹಳೆಯದು. ನಾವು ಎಲ್ಲ ರೀತಿಯ ಐಟಿ ಫೈಲ್ ಮಾಡಿದ್ದೇವೆ. ಯಾವ ಕಾರಣಕ್ಕೆ ದಾಳಿ ಮಾಡಿದ್ದಾರೆ. ಅವರಿಗೆ ಯಾವ ಮಾಹಿತಿ ಬೇಕೆಂದು ಗೊತ್ತಿಲ್ಲ. ದಾಳಿ ರಾಜಕೀಯ ಪ್ರೇರಿತವೂ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

ಐಟಿ ದಾಳಿ
ಮಾಜಿ ಡಿಸಿಎಂ, ಕಾಂಗ್ರೆಸ್ ನಾಯಕ ಜಿ.ಪರಮೇಶ್ವರ್ ಅವರ ಬೆಂಗಳೂರಿನ ಸದಾಶಿವನಗರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು ಏಳು ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ಪರಮೇಶ್ವರ್ ಅವರ ಒಡೆತನದ ಶಾಲಾ-ಕಾಲೇಜುಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ನೆಲಮಂಗಲದಲ್ಲಿರುವ ಸಿದ್ಧಾರ್ಥ್ ಮೆಡಿಕಲ್ ಕಾಲೇಜು, ತುಮಕೂರಿನಲ್ಲಿರುವ ಶಾಲಾ-ಕಾಲೇಜುಗಳ ಕಚೇರಿಯ ಮೇಲೆ ಅಧಿಕಾರಿಗಳು ನಡೆಸಿದ್ದಾರೆ.

ಐಟಿ ದಾಳಿ ರಾಜಕೀಯ ಪ್ರೇರಿತವಾದದ್ದು. ಬಿಜೆಪಿ ನಾಯಕರ ಮೇಲೇಕೆ ಐಟಿ ದಾಳಿ ನಡೆಯುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಕುಗ್ಗಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *