ಡಿಕೆಶಿ ಮನೆಯಲ್ಲಿ 3ನೇ ದಿನವೂ ಮುಂದುವರಿದ ಐಟಿ ರೇಡ್

Public TV
2 Min Read

– ದ್ವಾರಕನಾಥ ಗುರೂಜಿ ನಿವಾಸದಲ್ಲಿ ತನಿಖೆ ಅಂತ್ಯ
– ಡಿಕೆಶಿ ಮಾವನ ಮನೆಯಲ್ಲಿ 3ನೇ ದಿನವೂ ಪರಿಶೀಲನೆ

ಬೆಂಗಳೂರು/ಮೈಸೂರು: ಇಂಧನ ಸಚಿವ ಡಿ.ಕೆ ಶಿವಕುಮಾರ್‍ಗೆ ಈ ಬಾರಿ ವರಮಹಾಲಕ್ಷ್ಮೀ ಐಟಿ ಸಂಕಟ ತಂದೊಡ್ಡಿದ್ದಾಳೆ. ಸತತ ಮೂರನೇ ದಿನವೂ ಡಿಕೆಶಿ ಮನೆಯಲ್ಲಿ ಐಟಿ ಶೋಧ ನಡೆಯುತ್ತಿದೆ.

ಬೆಳ್ಳಂಬೆಳಗ್ಗೆ ಐದು ಅಧಿಕಾರಿಗಳ ತಂಡ ಡಿಕೆಶಿ ಮನೆಗೆ ಆಗಮಿಸಿದ್ದಾರೆ. ವಿವಿಧೆಡೆ ನಡೆಸಿದ್ದ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ಡಿಕೆಶಿ ವಿಚಾರಣೆ ನಡೆಸಲಿದ್ದಾರೆ. ಈಗಾಗಲೇ ವಿವಿಧ ಬ್ಯಾಂಕ್ ಖಾತೆಗಳ ಡಿಟೈಲ್ಸ್ ಹಾಗೂ ವಿದೇಶದ ಬ್ಯಾಂಕ್ ಅಕೌಂಟ್‍ಗೆ ಟ್ರಾನ್ಸ್‍ಫರ್ ಆಗಿರುವ ಮಾಹಿತಿಗಳನ್ನು ಐಟಿ ಅಧಿಕಾರಿಗಳು ಕಲೆ ಹಾಕಿದ್ದಾರೆ. ಈ ಎಲ್ಲಾ ದಾಖಲಾತಿಗಳನ್ನು ಡಿಕೆಶಿ ಮುಂದಿಟ್ಟು ವಿಚಾರಣೆ ನಡೆಸಲಿದ್ದಾರೆ.

ಡಿಕೆಶಿ ಮಾವ ತಿಮ್ಮಯ್ಯ ನಿವಾಸದಲ್ಲೂ ಕೂಡ ಸತತ 3ನೇ ದಿನವೂ ಐಟಿ ಶೋಧ ಮುಂದುವರೆದಿದೆ. ಬರೋಬ್ಬರಿ 40 ಗಂಟೆಗಳ ಬಳಿಕ ಗುರುವಾರ ರಾತ್ರಿ 10.30ಕ್ಕೆ ತಾತ್ಕಾಲಿಕವಾಗಿ ಆಪರೇಷನ್ ಸ್ಥಗಿತಗೊಳಿಸಲಾಗಿತ್ತು. ರಾತ್ರಿ ತಿಮ್ಮಯ್ಯ ನಿವಾಸದಲ್ಲಿ ಐಟಿ ಅಧಿಕಾರಿಯೊಬ್ಬರು ಹಾಗೂ ಇಬ್ಬರು ಪೇದೆಗಳು ವಾಸ್ತವ್ಯ ಹೂಡಿದ್ರು.

ತಿಮ್ಮಯ್ಯ ಅವರ ಮನೆ ಹೊರಗೆ ಎಂದಿನಂತೆ ಪೊಲೀಸ್ ಕಾವಲು ಹಾಕಲಾಗಿದೆ. ಗುರುವಾರ ತಿಮ್ಮಯ್ಯ ಕುಟುಂಬ ಮತ್ತು ಆಪ್ತ ಎಡ್ವಿನ್‍ರನ್ನು ವಿಚಾರಣೆಗೆ ಒಳಪಡಿಸಿದ್ದ ಐಟಿ ಅಧಿಕಾರಿಗಳು, 60 ಲಕ್ಷ ನಗದು ವಶಪಡಿಸಿಕೊಂಡಿದ್ದರು.

ಈ ನಡುವೆ ಡಿಕೆ ಶಿವಕುಮಾರ್ ಆಪ್ತರನ್ನ ಐಟಿ ಅಧಿಕಾರಿಗಳು ಟಾರ್ಗೆಟ್ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರ ಆಪ್ತ ವಿನಯ್ ಕಾರ್ತಿಕ್ ಹಾಗೂ ಚಾರ್ಟೆಡ್ ಅಕೌಂಟೆಂಟ್ ಚಂದ್ರಶೇಖರ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಅತ್ತ ಡಿಕೆ ಶಿವಕುಮಾರ್ ಆಪ್ತರಾದ ದ್ವಾರಕನಾಥ ಗುರೂಜಿ ಅವರ ಆರ್‍ಟಿ ನಗರದ ಮೇಲೆ ಮೇಲಿನ ದಾಳಿ ಮಧ್ಯರಾತ್ರಿ ಮುಕ್ತಾಯವಾಗಿದೆ. ದಾಖಲೆಗಳನ್ನ ಮಧ್ಯರಾತ್ರಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಇನ್ನು ಶರ್ಮಾ ಟ್ರಾವೆಲ್ಸ್ ಮಾಲೀಕ ಸುರೇಶ್ ಶರ್ಮಾ ಮನೆಯಲ್ಲೂ ತಪಾಸಣೆ ನಡೆಸಿದ್ದಾರೆ. ಸದಾಶಿವನಗರದಲ್ಲಿರುವ ಸುರೇಶ್ ಶರ್ಮಾ ನಿವಾಸದ ಮೇಲೆ ದಾಳಿ ನಡೆಸಿ ಹಲವು ದಾಖಲೆ ಪತ್ರಗಳನ್ನು ಸೀಜ್ ಮಾಡಿದ್ದಾರೆ.

ಇದೇ ವೇಳೆ, ಗ್ಲೋಬಲ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಕೇರ್ ಟೇಕರ್ ನಂದೀಶ್ ಮನೆ ಮೇಲೂ ದಾಳಿ ನಡೆದಿದ್ದು, ಸುಮಾರು 11 ಕೆಜಿ ಚಿನ್ನಾಭರಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಜೊತೆಗೆ ರಾಜರಾಜೇಶ್ವರಿನಗರದಲ್ಲಿರುವ ಡಿಕೆ ಶಿವಕುಮಾರ್ ಅವರ ಒಡೆತನದ ಇಂಟರ್‍ನ್ಯಾಷನಲ್ ಹಿಲ್ ವ್ಯೂವ್ ಶಾಲೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಡಿಕೆಶಿ ನಿವಾಸದ ಮೇಲೆ ನಡೆದ ಐಟಿ ದಾಳಿ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ನಡುಕ ಹುಟ್ಟಿಸಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಬಿಜೆಪಿ ಸಂಸದರ ಸಭೆ ಕರೆದಿದ್ದಾರೆ. ಬೆಳಗ್ಗೆ 8.30ಕ್ಕೆ ಉಪಹಾರ ಕೂಟ ನೆಪದಲ್ಲಿ ಸಭೆ ಕರೆದಿದ್ದು ರಾಜ್ಯದ ಬೆಳವಣಿಗೆ ಕುರಿತು ಸಂಸದರಿಂದ ಮಾಹಿತಿ ಪಡೆಯಲಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮ ಮತ್ತು ಪ್ರತ್ಯೇಕ ನಾಡ ಧ್ವಜ ವಿವಾದ, ಮಂಗಳೂರು ಕೋಮು ಗಲಭೆ ವಿಚಾರದಲ್ಲಿ ರಾಜ್ಯ ಬಿಜೆಪಿಗೆ ಆದ ಡ್ಯಾಮೇಜ್ ಸರಿಪಡಿಸಿಕೊಳ್ಳಲು ಸಂಸದರ ಸಮ್ಮುಖದಲ್ಲಿ ಮೋದಿ ಪ್ಲ್ಯಾನ್ ರೂಪಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *