ಹಬ್ಬದ ದಿನವೂ ಡಿಕೆಶಿಗೆ ಗೃಹ ಬಂಧನ- ಅಣ್ಣನ ಭೇಟಿಗೂ ಅವಕಾಶ ನೀಡದ ಐಟಿ ಅಧಿಕಾರಿಗಳು

Public TV
2 Min Read

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ ಇದೀಗ ತಮ್ಮ ನಿವಾಸದಲ್ಲೇ ಅಘೋಷಿತ ಬಂಧನದಲ್ಲಿದ್ದಾರೆ. ಡಿಕೆಶಿ ಕುಟುಂಬ ಸದಸ್ಯರೊಂದಿಗೂ ಕೂಡ ಮಾತನಾಡಲು ಐಟಿ ಅಧಿಕಾರಿಗಳು ಅವಕಾಶ ಕೊಡುತ್ತಿಲ್ಲ.

ಡಿಕೆ ಶಿವಕುಮಾರ್ ನಿವಾಸಕ್ಕೆ ಸಹೋದರರಾದ ಸಂಸದ ಡಿಕೆ ಸುರೇಶ್ ಆಗಮಿಸಿದ್ದು, ಸುರೇಶ್ ಜೊತೆಗೂ ಭೇಟಿಗೆ ಅಧಿಕಾರಿಗಳು ಅವಕಾಶ ನೀಡಿಲ್ಲ. ಮನೆಯಿಂದ ಹೊರಬಂದ ಬಳಿಕ ಡಿಕೆ ಸುರೇಶ್ ಮಾತನಾಡಿ, ನನಗೆ ಡಿ.ಕೆ.ಶಿವಕುಮಾರ್ ಅವರನ್ನು ನೋಡಲೂ ಅಧಿಕಾರಿಗಳು ಅವಕಾಶ ಕೊಡಲಿಲ್ಲ. ಇವತ್ತು ವರಮಹಾಲಕ್ಷ್ಮಿ ಹಬ್ಬ. ಸಹೋದರನ ಭೇಟಿಗೆ ಅವಕಾಶ ಕೊಡಿ ಎಂದು ಮಾಡಿದ ಮನವಿಗೆ ಅಧಿಕಾರಿಗಳು ಒಪ್ಪಲಿಲ್ಲ. ಜೊತೆಗೆ ಗುಜರಾತ್ ಕಾಂಗ್ರೆಸ್ ಶಾಸಕರು ಕರ್ನಾಟಕದಲ್ಲಿ ಇರುವ ಹಿನ್ನೆಲೆಯಲ್ಲಿ ನಾವು ಮಾತುಕತೆ ಮಾಡಿ ಕೆಲವು ಮಹತ್ವದ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟೆ. ಹೀಗಾಗಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ, ಅನುಮತಿ ಪಡೆದು ಮಧ್ಯಾಹ್ನದ ನಂತರ ಡಿ.ಕೆ.ಶಿವಕುಮಾರ್ ಜೊತೆ ಮಾತುಕತೆ ನಡೆಸಲು ಅವಕಾಶ ಕೊಡುವ ಭರವಸೆ ನೀಡಿದ್ರು ಅಂತ ಹೇಳಿದ್ರು.

ಆದಾಯ ತೆರಿಗೆ ದಾಖಲೆಗಳ ಪರಿಶೀಲನೆಗೆ ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಅಧಿಕಾರಿಗಳ ಮಾತಿನ ವೈಖರಿ ಗಮನಿಸಿದ್ರೆ ಇವತ್ತು ಪರಿಶೀಲನೆ ಮುಗಿಯಬಹುದು ಎನಿಸುತ್ತದೆ. ನಾವು, ಡಿ.ಕೆ.ಶಿವಕುಮಾರ್ ಕುಟುಂಬ ಅತ್ಯಂತ ಪಾರದರ್ಶಕವಾಗಿದ್ದೇವೆ. ನಮ್ಮೆಲ್ಲಾ ವ್ಯವಹಾರಗಳು ಕಾನೂನು ಬದ್ಧವಾಗೇ ಇವೆ. ಅಧಿಕಾರಿಗಳು ಕೇಳಿದ ಎಲ್ಲಾ ದಾಖಲಾತಿಗಳನ್ನು ನಾವು ಒದಗಿಸುತ್ತಿದ್ದೇವೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಅಂದ್ರು.

ಈಗಲ್ ಟನ್ ರೆಸಾರ್ಟ ನಲ್ಲಿರುವ ಗುಜರಾತ್ ಕಾಂಗ್ರೆಸ್ ಶಾಸಕರು ಒಗ್ಗಟ್ಟಾಗಿದ್ದಾರೆ, ಸಂತೋಷವಾಗೂ ಇದ್ದಾರೆ. ಆಗಸ್ಟ್ 8ರವರೆಗೂ ಅವರು ಅಲ್ಲೇ ಇರುತ್ತಾರೆ. ಕೇಂದ್ರ ಸರ್ಕಾರದ ಈ ಎಲ್ಲ ಷಡ್ಯಂತ್ರಗಳನ್ನು ನಾವು ಎದುರಿಸುತ್ತೇವೆ. ಗುಜರಾತ್ ಶಾಸಕರು ವಾಪಸ್ ಹೋಗಲು ಬೇಡಿಕೆ ಇಟ್ಟಿಲ್ಲ. ಎಲ್ಲರೂ ಒಗ್ಗಟ್ಟಾಗಿ ಇದ್ದಾರೆ. ಕೆಲವರಿಗೆ ಜ್ವರ ಬಂದಿತ್ತು, ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಕೆಲವು ಮಾಧ್ಯಮಗಳಲ್ಲಿ ಊಹಾಪೋಹಗಳ ವರದಿಗಳು ಪ್ರಸಾರವಾಗುತ್ತಿವೆ. ಅಂತಹ ಮಾಧ್ಯಮಗಳ ಮೇಲೆ ಮೊಕದ್ದಮೆ ಹಾಕ್ತೀವಿ. ನಮ್ಮ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿ ಇವೆ. ಉದ್ದೇಶಪೂರ್ವಕವಾಗಿ ಈ ದಾಳಿ ನಡೆದಿರುವುದರಿಂದ ಬೇಕಂತಲೇ ವಿಳಂಬ ಮಾಡಲಾಗುತ್ತಿದೆ ಅಂತ ಐಟಿ ಅಧಿಕಾರಿಗಳ ವಿರುದ್ಧ ಡಿಕೆ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *