ಮುಂದೆ ತಿನ್ನೋದಕ್ಕೂ ಮೀನು ಸಿಗೋದು ಕಷ್ಟ!

Public TV
1 Min Read

– ಪ್ರಮೋದ್ ಮಧ್ವರಾಜ್ ಅವ್ರೇ, ಮೀನುಗಾರರ ಸಮಸ್ಯೆಯನ್ನು ಪರಿಹರಿಸಿ

ಉಡುಪಿ: ಅರಬ್ಬಿ ಸಮುದ್ರ ಬರಿದಾಗುತ್ತಿದೆ. ಇನ್ನೊಂದೆರಡು ವರ್ಷ ಕಳೆದರೆ ತಿನ್ನೋದಕ್ಕೂ ಮೀನು ಸಿಗುವುದು ಕಷ್ಟವಾಗಬಹುದು. ಇಂತದ್ದೊಂದು ಆತಂಕಕಾರಿ ಬೆಳವಣಿಗೆ ಪಶ್ಚಿಮ ಕರಾವಳಿಯಲ್ಲಿ ಆಗಿದೆ.

ಹೌದು. ಅವೈಜ್ಞಾನಿಕ ಮತ್ತು ಅತ್ಯಾಧುನಿಕ ಮಾದರಿ ಮೀನುಗಾರಿಕೆಯಿಂದಾಗಿ ಈಗ ಕರಾವಳಿಯಲ್ಲಿ ಮೀನುಗಳ ಸಂತತಿಯೇ ನಾಶವಾಗಲು ಆರಂಭಗೊಂಡಿದೆ.

ಅರಬ್ಬಿ ಸಮುದ್ರದ ಕೇರಳ ಗಡಿಯಿಂದ ಗೋವಾ ರಾಜ್ಯದ ಗಡಿಯ ವರೆಗಿನ ವ್ಯಾಪ್ತಿಯನ್ನು ಪಶ್ಚಿಮ ಕರಾವಳಿ ಹೊಂದಿದೆ. ಮೀನುಗಾರಿಕೆ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಆದರೆ ಈಗ ಪಶ್ಚಿಮ ಕರಾವಳಿಯಲ್ಲಿ ಮೀನುಗಳ ಸಂಖ್ಯೆ ಕಡಿಮೆಯಾಗಿದೆ. ಮರಿ ಮೀನನ್ನು ಬಲೆ ಹಾಕಿ ಹಿಡಿಯುವುದರಿಂದ ಮೀನಿನ ಸಂತತಿಯೇ ನಾಶವಾಗುವ ದಿನ ಹತ್ತಿರ ಬಂದಿದೆ ಎಂದು ಆಳಸಮುದ್ರ ಮೀನುಗಾರ ಸುಧಾಕರ ಹೇಳಿದ್ದಾರೆ.

ಮಲ್ಪೆ ಬೀಚ್‍ನಲ್ಲಿ ಬೃಹತ್ ಬೋಟುಗಳು ಸಮುದ್ರಕ್ಕಿಳಿಯಿತು ಅಂದ್ರೆ ಮೀನುಗಳಿಗೆ ಚಳಿಜ್ವರ ಬಂದು ಬಿಡುತ್ತದೆ. ಸಣ್ಣ ಗಾತ್ರದ ಕಣ್ಣುಗಳಿರುವ ಬಲೆಯನ್ನು ಬೀಸಿ ತಾಯಿ ಮೀನು, ಮರಿ ಮೀನು, ಮೊಟ್ಟೆ ಇಡಲು ಸಿದ್ಧವಾದ ಮೀನನ್ನು ಹಿಡಿಯುತ್ತಿದ್ದಾರೆ. ಇದರಿಂದಾಗಿ ಮೀನುಗಳೇ ಈಗ ಸಿಗದಂತಾಗಿದೆ. ನಮ್ಮ ರಾಜ್ಯ ಬಿಟ್ಟು ಗೋವಾ ದಾಟಿ ಮುಂಬೈ ಕಡೆ ಮೀನು ಹಿಡಿಯಲು ಹೋಗಬೇಕಾಗುತ್ತದೆ. ಮಳೆಗಾಲದ ಮೊದಲ ಮೂರು ತಿಂಗಳು ಮೀನುಗಾರಿಕೆಗೆ ತಡೆ ನೀಡಿದ್ರೂ, ಮರಿ ಮೀನು ಹಿಡಿಯುವುದಕ್ಕೆ ಮತ್ತು ಲೈಟ್ ಫಿಶ್ಶಿಂಗ್‍ಗೆ ರೂಲ್ಸ್ ತರಲೇಬೇಕಾಗಿದೆ ಎಂದು ಆಳಸಮುದ್ರ ಮೀನುಗಾರಿಕಾ ಕಾರ್ಮಿಕರ ಸಂಘದ ಅಧ್ಯಕ್ಷ ಕವಿರಾಜ್ ಹೇಳಿದ್ದಾರೆ.

ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿ ಜಿಲ್ಲೆಯವರೇ. ಆದ್ರೇ ಅವರಿಗೆಲ್ಲಾ ಸಮಸ್ಯೆ ಗೊತ್ತಿದ್ದರೂ ಮೌನವಹಿಸಿ ಸುಮ್ಮನಿದ್ದಾರೆ. ಆಳ ಸಮುದ್ರ ಮೀನುಗಾರಿಕೆಗೆ ಸೂಕ್ತ ಕಾನೂನು ಜಾರಿಗೆ ತಂದಲ್ಲಿ ಮುಂದಿನ ಪೀಳಿಗೆಗೆ ಮೀನು ಉಳಿದೀತು. ಇಲ್ಲದಿದ್ರೆ ಅರಬ್ಬೀ ಸಮುದ್ರ ಬರಿದಾಗೋದ್ರಲ್ಲಿ ಸಂಶಯವಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *