ಸಿದ್ದರಾಮಯ್ಯ ಮೇಲಿನ ಆರೋಪ ಇಡೀ ಕುರುಬ ಸಮಾಜಕ್ಕೆ ಮಾಡ್ತಿರೋ ಅವಮಾನವಲ್ಲವೇ – ಕಾಂಗ್ರೆಸ್‌ ಪ್ರಶ್ನೆ

Public TV
2 Min Read

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಮೇಲೆ ಮಾಡುತ್ತಿರುವ ಸುಳ್ಳು ಆರೋಪಗಳು ಇಡೀ ಕುರುಬ ಸಮಾಜಕ್ಕೆ,‌ ಹಿಂದುಳಿದ ವರ್ಗಗಳಿಗೆ ಮಾಡುತ್ತಿರುವ ಅವಮಾನವಲ್ಲವೇ ಎಂದು ಕಾಂಗ್ರೆಸ್‌ (Congress), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನ ಪ್ರಶ್ನಿಸಿದೆ.

ಭಾನುವಾರ ಬೆಂಗಳೂರಿನ ಯಲಹಂಕದಲ್ಲಿ ಚುನಾವಣಾ ಪ್ರಚಾರ ಹಾಗೂ ರೋಡ್ ಶೋನಲ್ಲಿ ಭಾಗವಹಿಸಿದ್ದ ಸಿಎಂ ಬೊಮ್ಮಾಯಿ ಅವರು, ಸಿದ್ದರಾಮಯ್ಯ ಬೆಂಗಳೂರಿನಲ್ಲಿ 8 ಸಾವಿರ ಕೋಟಿ ರೂ. ಅಕ್ರಮ ಮಾಡಿದ್ದಾರೆ. ಬಿಡಿಎ, ಇಂಧನ ಹಾಗೂ ನೀರಾವರಿಯಲ್ಲಿ ಅಕ್ರಮ ಮಾಡಿ ಇಡೀ ಬೆಂಗಳೂರನ್ನೇ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಸಿದ್ದರಾಮಯ್ಯ 8 ಸಾವಿರ ಕೋಟಿ ರೂ. ಅಕ್ರಮ ಮಾಡಿದ್ದಾರೆ: ಬೊಮ್ಮಾಯಿ ಆರೋಪ

ಈ ಹೇಳಿಕೆಯನ್ನು ʻಬೆಂಗ್ಳೂರಿನಲ್ಲಿ ಸಿದ್ದರಾಮಯ್ಯ 8 ಸಾವಿರ ಕೋಟಿ ರೂ. ಅಕ್ರಮ ಮಾಡಿದ್ದಾರೆ: ಬೊಮ್ಮಾಯಿ ಆರೋಪʼ ಎಂಬ ಶೀರ್ಷಿಕೆಯಲ್ಲಿ ʻಪಬ್ಲಿಕ್‌ ಟಿವಿʼ (Public TV) ಡಿಜಿಟಲ್‌ ಸುದ್ದಿ ಪ್ರಕಟಿಸಿತ್ತು. ಈ ಸುದ್ದಿಯ ಫೋಟೋವನ್ನ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಕರ್ನಾಟಕ ಕಾಂಗ್ರೆಸ್‌, ಬೊಮ್ಮಾಯಿವರು ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವುದು ಲಿಂಗಾಯತರಿಗೆ ಮಾಡುವ ಅವಮಾನವಾಗುವುದಾದರೆ, ಸಿದ್ದರಾಮಯ್ಯ ಅವರ ಮೇಲೆ ಮಾಡುತ್ತಿರುವ ಸುಳ್ಳು ಆರೋಪಗಳು ಇಡೀ ಕುರುಬ ಸಮಾಜಕ್ಕೆ,‌ ಹಿಂದುಳಿದ ವರ್ಗಗಳಿಗೆ ಮಾಡುತ್ತಿರುವ ಅವಮಾನವಲ್ಲವೇ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಬೆಲೆ ಏರಿಕೆ ಮಾಡಿದ್ದೀರಿ – ಸಿಎಂ ಪ್ರಚಾರದ ವೇಳೆ ರೊಚ್ಚಿಗೆದ್ದು ವ್ಯಕ್ತಿ ಕೂಗಾಟ

ಬೊಮ್ಮಾಯಿ ಹೇಳಿದ್ದೇನು?
ಪ್ರಶ್ನೆ ಪತ್ರಿಕೆ ಸೋರಿಕೆ, ರೀಡೂ ಮುಂತಾದ ಹಗರಣ ನಡೆದಿದೆ. 843 ಎಕರೆ ಭೂಮಿಯನ್ನು ಅಕ್ರಮವಾಗಿ ಸಾಹುಕಾರರಿಗೆ ಬಿಟ್ಟುಕೊಟ್ಟು 8 ಸಾವಿರ ಕೋಟಿ ರೂ. ಹಗರಣ ಯಾರಾದರೂ ಮಾಡಿದ್ದರೆ ಅದು ಸಿದ್ದರಾಮಯ್ಯನವರ ಸರ್ಕಾರ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದರು.

ಜೊತೆಗೆ ಕಾಂಗ್ರೆಸ್‌ ಪಕ್ಷದ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಎಂದರೆ ಅನ್ಯಾಯ, ಭ್ರಷ್ಟಾಚಾರ, ಅನೀತಿ, ಅಧರ್ಮ. ಈ ಅನಿಷ್ಟ ಕಾಂಗ್ರೆಸ್ ಪಕ್ಷವನ್ನು ಶಾಶ್ವತವಾಗಿ ಕರ್ನಾಟಕದ ಆಡಳಿತದಿಂದ ದೂರವಿಡಬೇಕಾಗಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಬೇಕಾಗಿದೆ. ಕಾಂಗ್ರೆಸ್ ಎಂಬ ಹೆಸರನ್ನು ಶಾಶ್ವತವಾಗಿ ಈ ನೆಲದಿಂದ ಕಿತ್ತು ಹಾಕಬೇಕಾಗಿದೆ ಎಂದು ಕಿಡಿ ಕಾರಿದ್ದರು.

Share This Article