ಚುನಾವಣಾ ಅಕ್ರಮದಲ್ಲಿ ಸುಪ್ರೀಂ ಕೂಡ ಭಾಗಿಯೇ: ಕೈ ನಾಯಕ ಉದಿತ್ ರಾಜ್ ಪ್ರಶ್ನೆ

Public TV
1 Min Read

ನವದೆಹಲಿ: ಚುನಾವಣಾ ಅಕ್ರಮದಲ್ಲಿ ಸುಪ್ರೀಂ ಕೋರ್ಟ್ ಕೂಡ ಭಾಗಿಯಾಗಿದೆಯೇ ಎಂದು ಕಾಂಗ್ರೆಸ್ ಮುಖಂಡ ಉದಿತ್ ರಾಜ್ ಪ್ರಶ್ನಿಸಿ ವಿವಾದಕ್ಕೆ ಗುರಿಯಾಗಿದ್ದಾರೆ.

ಟ್ವೀಟ್ ಮೂಲಕ ದೂರಿರುವ ಉದಿತ್ ರಾಜ್ ಅವರು, ಸುಪ್ರೀಂಕೋರ್ಟ್ ಕೂಡ ಚುನಾವಣೆ ಅಕ್ರಮದಲ್ಲಿ ಭಾಗಿಯಾಗಿದೆ. ಎಲ್ಲ ಇವಿಎಂಗಳ ವಿವಿಪ್ಯಾಟ್‍ಗಳ ಸ್ಲಿಪ್‍ಗಳನ್ನು ಎಣಿಕೆ ಮಾಡಬೇಕೆಂಬ ವಿರೋಧ ಪಕ್ಷಗಳ ಮನವಿಯನ್ನು ತಿರಸ್ಕರಿಸಿದ್ದು ಯಾಕೆ? ಚುನಾವಣಾ ಅಕ್ರಮದಲ್ಲಿ ಸುಪ್ರೀಂ ಕೋರ್ಟ್ ಸಹ ಭಾಗಿಯಾಗಿದ್ಯಾ ಎಂದು ಪ್ರಶ್ನಿಸಿದ್ದಾರೆ.

ಉದಿತ್ ರಾಜ್ ಅವರು ತಮ್ಮ ಇಂಡಿಯನ್ ಜಸ್ಟಿಸ್ ಪಾರ್ಟಿ (ಐಜೆಪಿ)ಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದರು. ಈ ಮೂಲಕ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು. ಆದರೆ ಈ ಬಾರಿ ಅವರಿಗೆ ಪಕ್ಷ ಟಿಕೆಟ್ ನೀಡಿಲ್ಲ. ಬದಲಾಗಿ ಪಂಜಾಬ್‍ನ ಜನಪದ ಹಾಗೂ ಸೂಫಿ ಗಾಯಕ ಹನ್ಸ್ ರಾಜ್ ಹಸ್ಸ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದಾಗಿ ಅಸಮಾಧಾನ ಹೊರ ಹಾಕಿದ ಉದಿತ್ ರಾಜ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದರು.

ಎನ್‍ಡಿಎ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ತಿಳಿಸಿದ ಬೆನ್ನಲ್ಲೇ ವಿಪಕ್ಷಗಳು ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿವೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ಎಕ್ಸಿಟ್ ಪೋಲ್‍ನಂತೆ ರಾಜ್ಯದಲ್ಲಿ ಎರಡು ಮೂರು ಸೀಟು ಬಂದರೆ ಇವಿಎಂ ಗಡಿಬಿಡಿಯಾಗಿದೆ ಎಂದೇ ಅರ್ಥ. ಮೋದಿ ಮೊದಲಿನಿಂದಲೂ ಕಾಂಗ್ರೆಸ್ 40 ಸೀಟು ದಾಟಲ್ಲ ಎಂದು ಹೇಳುತ್ತಿದ್ದಾರೆ. ಹೇಗೆ ಹೇಳಿದ್ದಾರೆ ಎಂದು ಗೊತ್ತಿಲ್ಲ. ಮೋದಿ ಯಾವುದನ್ನ ದುರುಪಯೋಗ ಮಾಡಿಕೊಂಡು ಹೇಳಿದ್ದಾರೋ ಗೊತ್ತಿಲ್ಲ. ಇದರಲ್ಲಿ ಏನಾದರೂ ಗೋಲ್ ಮಾಲ್ ಇದೆ ಎಂದು ಅನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *