– ರವೀಶ್ ಹೆಚ್.ಎಸ್, ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥ
ದಳಪತಿಗಳ `ಕೈ’ ಸೆಳೆತದ ನೋವಿಗೆ ಮೈತ್ರಿ ಮದ್ದು ಅರೆದು ಜಿಗಿಯುವ ಕಾಯಿಲೆ ವಾಸಿ ಮಾಡಲು ಹೊರಟಂತಿದೆ. ತಂದೆ, ಮಗ ಇಬ್ಬರೂ ಒಟ್ಟಿಗೆ ಜೆಡಿಎಸ್ ಭವಿಷ್ಯದ ಬಗ್ಗೆ ಗಟ್ಟಿ ಮಾತುಗಳನ್ನಾಡಿ ಹುರುಪು ತುಂಬುವ ಪ್ರಯತ್ನ ಮಾಡಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರಂತೂ ಆರೋಗ್ಯದ ಭಾವಾನಾತ್ಮಕ ಚರ್ಚೆಗಳಿಗೂ ಉತ್ತರ ಕೊಟ್ಟು, ನಾನು ಆರೋಗ್ಯ.. ನನ್ನ ಪಕ್ಷವೂ ಆರೋಗ್ಯ ಎಂಬ ಸಂದೇಶ ರವಾನಿಸಿದ್ದಾರೆ. ಜೆಡಿಎಸ್ ಪಕ್ಷ ಮುಗಿಸುವ ಮಹಾನುಭ ಹುಟ್ಟಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮದೇ ಶೈಲಿಯಲ್ಲಿ ವಿರೋಧಿಗಳನ್ನ ಕುಟುಕಿದ್ದಾರೆ. ಹಾಗಾದ್ರೆ ಜೆಡಿಎಸ್ಗಿರುವ ಆತಂಕವೇನು..? ಜೆಡಿಎಸ್ ಮುಗಿಸುವ ಚದುರಂಗದಾಟ ನಡೆಯುತ್ತಿದ್ಯಾ..? ಈ ಚರ್ಚೆಗಳಿಗೆ ಅಪ್ಪ-ಮಕ್ಕಳ ಮಾತೇ ಸಾಕ್ಷಿ ಎಂಬಂತಿರುವುದು ಸ್ಪಷ್ಟ.
ಜೆಡಿಎಸ್ ಮುಗಿದೇ ಹೋಯ್ತು.. ಎಂಬ ರಾಜಕೀಯ ಲೆಕ್ಕಚಾರ, ವಿರೋಧಿಗಳ ಬೆರಯುತ್ತಿದ್ದ ಹಣೆಬರಹ ನಿನ್ನೆ ಮೊನ್ನೆಯದ್ದಲ್ಲ. ಎರಡು ದಶಕಗಳಿಂದಲೂ ಜೆಡಿಎಸ್ ಮುಗಿದೇ ಹೋಯ್ತು ಎನ್ನುವಾಗಲೇ ಫಿನೀಕ್ಸ್ನಂತೆ ಮೇಲೆದ್ದು ಬಂದಿದ್ದು ಇದೆ. ಅದು 2008ರ ಕರ್ನಾಟಕ ವಿಧಾನಸಭೆ ಚುನಾವಣೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಚನ ಭ್ರಷ್ಟ ಬ್ರಹ್ಮಾಸ್ತ್ರ ಪ್ರಯೋಗಿಸಿ ಗೆದ್ದು ಬೀಗಿದವರು ಬಿ.ಎಸ್. ಯಡಿಯೂರಪ್ಪ. 2004ರ ಚುನಾವಣೆಯಲ್ಲಿ 58 ಸ್ಥಾನಗಳನ್ನ ಗೆದ್ದು ಅಬ್ಬರಿಸಿ ಮೊದಲು ಕಾಂಗ್ರೆಸ್, ನಂತರ ಬಿಜೆಪಿ ಜೊತೆ ಸಮ್ಮಿಶ್ರ ಸರ್ಕಾರ ರಚಿಸಿದ್ದ ಜೆಡಿಎಸ್ ವಚನ ಭ್ರಷ್ಟ ಅಸ್ತ್ರಕ್ಕೆ ಸಿಲುಕಿ ನರಳಿತ್ತು ಆಗ. ಇದನ್ನೂ ಓದಿ: ನಂದಿಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ರದ್ದು – ವಿಧಾನಸೌಧಕ್ಕೆ ಶಿಫ್ಟ್
ಅಂದಹಾಗೆ ಕಾಂಗ್ರೆಸ್ ಜೊತೆ ಮೈತ್ರಿ ಕಡಿದುಕೊಂಡು ಬಿಜೆಪಿ ಜೊತೆ ಸಖ್ಯ ಬೆಳಸಿ ಗೌಡರಿಗೆ ಸೆಡ್ಡು ಹೊಡೆದಿದ್ರು ಕುಮಾರಸ್ವಾಮಿ. ಮುಖ್ಯಮಂತ್ರಿಯಾಗಿ ಜನಪ್ರಿಯತೆ ಏರುಗತಿಯಲ್ಲೇ ಇದ್ದಾಗಲೇ ಹೆಚ್ಡಿಕೆಗೆ ಬಡಿದಿದ್ದು ವಚನ ಭ್ರಷ್ಟತೆ ಎಂಬ ಬರಸಿಡಿಲು. ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡಲಿಲ್ಲ ಎಂದು ಯಡಿಯೂರಪ್ಪ ಮೈತ್ರಿ ಕಡಿದುಕೊಂಡ್ರು. 2008ಕ್ಕೆ ಕರ್ನಾಟಕದ ವಿಧಾನಸಭೆ ಚುನಾವಣೆ ನಡೆದುಹೋಯ್ತು. ಬರೋಬ್ಬರಿ 30 ಸ್ಥಾನಗಳನ್ನ ಕಳೆದುಕೊಂಡ ಜೆಡಿಎಸ್ ಮುಗಿದೇಹೋಯ್ತು ಎಂದು ವಿಶ್ಲೇಷಣೆ ಮಾಡಿದ್ರು. ಯಡಿಯೂರಪ್ಪ ನೇತೃತ್ವತ ಬಿಜೆಪಿ 110 ಸ್ಥಾನ ಪಡೆದು ಪಕ್ಷೇತರರ ಜೊತೆ ಸರ್ಕಾರ ರಚಿಸಿ, ಬಳಿಕ ಆಪರೇಷನ್ ಕಮಲದ ಮೂಲಕ ಸ್ಥಾನಗಳನ್ನ ಹೆಚ್ಚಿಸಿಕೊಂಡಿದ್ದು ಇತಿಹಾಸ. ಅಷ್ಟೇ ಅಲ್ಲ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಎಂ ಕುರ್ಚಿ ಕಳೆದುಕೊಂಡ ಯಡಿಯೂರಪ್ಪ ಬಳಿಕ ಬಿಜೆಪಿಯಿಂದ ಒಂದೇ ಅವಧಿಗೆ ಮೂವರು ಮುಖ್ಯಮಂತ್ರಿಗಳನ್ನ ನೋಡುವಂತಾಯ್ತು. ಆದಾದ ಬಳಿಕ ಬಿಜೆಪಿ ಒಳಗಿನ ಕಚ್ಚಾಟದಿಂದ ಯಡಿಯೂರಪ್ಪ ಬಿಜೆಪಿಗೆ ಗುಡ್ಬೈ ಹೇಳಿ ಹೊಸ ಪಕ್ಷ ಕಟ್ಟಿದ್ರು. ನಂತರ ನಡೆದ 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿ 40 ಸ್ಥಾನ ಪಡೆದ್ರೆ, ಜೆಡಿಎಸ್ ಮತ್ತೆ ಮೇಲೆದ್ದು 40 ಸ್ಥಾನ ಪಡೆದು ಶೇಕಡಾವಾರು ಮತ ಪ್ರಮಾಣದ ಮೇಲೆ ವಿರೋಧ ಪಕ್ಷದ ಸ್ಥಾನವನ್ನೂ ಪಡೆದುಕೊಂಡಿದ್ದನ್ನೂ ನೋಡಿದ್ದೇವೆ. ಆಗ ಜೆಡಿಎಸ್ ಮುಗಿದೇ ಹೋಯ್ತು ಎಂದವರಿಗೆ ಶಾಕ್ ಆಗಿದ್ದು ಉಂಟು.
ಆದ್ರೆ 2013ರ ಚುನಾವಣೆ ಬಳಿಕ ಜೆಡಿಎಸ್ ಮೇಲೆದ್ದು ಮೀಸೆ ತಿರುವುತ್ತಿರುವಾಗಲೇ ಸಿದ್ದರಾಮಯ್ಯ ಚಕ್ರವ್ಯೂಹ ಎಲ್ಲವನ್ನೂ ತಲೆಕೆಳಗಾಗುವಂತೆ ಮಾಡಿಬಿಡ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ರಾಜಕೀಯ ದಾಳವನ್ನೂ ಉರುಳಿಸಿ ಜೆಡಿಎಸ್ಗೆ ಶಾಕ್ ಕೊಟ್ಟಿದ್ರು. 2016 ರಾಜ್ಯಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಆಪ್ತರೆನ್ನಿಸಿಕೊಂಡಿದ್ದವರಿಂದಲೇ ಚದುರಂಗದಾಟ ನಡೆದುಹೋಯ್ತು. ಕುಮಾರಸ್ವಾಮಿ ನಡೆ ಬಗ್ಗೆ ಸಿಡಿದೆದ್ದು ಜೆಡಿಎಸ್ನ 7 ಶಾಸಕರು ಕ್ರಾಸ್ ವೋಟ್ ಮಾಡಿ `ಕೈ’ ಹಿಡಿದಿದ್ರು. ಇದು ಜೆಡಿಎಸ್ಗೆ ಬಹುದೊಡ್ಡ ಹೊಡೆತ ಆಗಿತ್ತು. ಚಲುವರಾಯಸ್ವಾಮಿ, ಜಮೀರ್ ಅಹಮದ್, ಮಾಗಡಿ ಬಾಲಕೃಷ್ಣ, ಭೀಮಾ ನಾಯಕ್, ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್ ಅನ್ಸಾರಿ ಅಡ್ಡ ಮತದಾನ ಮಾಡಿದ್ರು. ಆಗ ಜೆಡಿಎಸ್ ಬುಡ ಅಲುಗಾಡಿತ್ತು. ಸಿಎಂ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ದೇವೇಗೌಡರು ಕೆಂಡಾಮಂಡಲ ಆಗಿದ್ರು. ಆದಾದ ಬಳಿಕ ಜೆಡಿಎಸ್ಗೆ ಎಲ್ಲರೂ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಿದ್ದು ಇತಿಹಾಸ. ಆಗಲೂ ಜೆಡಿಎಸ್ ಮುಗಿದೇ ಹೋಯ್ತು ಎಂದು ವಿರೋಧಿಗಳು ಗಹಗಹಿಸಿದ್ರು. ಆದರೆ 2018ರ ಚುನಾವಣೆಯಲ್ಲಿ ಎಲ್ಲ ಲೆಕ್ಕಚಾರಗಳು ಮಕಾಡೆ ಮಲಗಿ ಹೋದ್ವು. ಬಿಜೆಪಿ 108, ಕಾಂಗ್ರೆಸ್ 80, ಜೆಡಿಎಸ್ 37 ಸ್ಥಾನಗಳನ್ನ ಪಡೆದಾಗ ಕುಮಾರಸ್ವಾಮಿಯೇ ಕಿಂಗ್ ಆಗಿ ಹೊರಹೊಮ್ಮಿದ್ರು. ಯಡಿಯೂರಪ್ಪ ಅಧಿಕಾರ ಹಿಡಿದು ಬಹುಮತ ಸಾಬೀತು ಪಡಿಸುವ ಮುನ್ನವೇ ಕಾಂಗ್ರೆಸ್ ಜೆಡಿಎಸ್ ಬಾಗಿಲು ತಟ್ಟಿ ಮೈತ್ರಿಯೆಂಬ ಅಕ್ಷಯಪಾತ್ರೆ ಮುಂದಿಟ್ಟರು. ಆಗ ಕುಮಾರಸ್ವಾಮಿ ಸಿಎಂ ಆಗುವ ಮೂಲಕ ಜೆಡಿಎಸ್ ಇನ್ನಷ್ಟು ಬಲಶಾಲಿ ಎಂಬ ಸಂದೇಶ ರವಾನಿಸಿದ್ದು ರಾಜಕಾರಣದ ಮೈಲುಗಲ್ಲು ಎನ್ನಬಹುದು. ಇದನ್ನೂ ಓದಿ: ನಾವಿರುವವರೆಗೂ ಎಸ್ಕಾಂಗಳ ಖಾಸಗೀಕರಣಕ್ಕೆ ಅವಕಾಶವಿಲ್ಲ: ಡಿ.ಕೆ ಶಿವಕುಮಾರ್
ಜೆಡಿಎಸ್ ಹೂವಿನ ನಡಿಗೆ ಯಾವತ್ತೂ ಕೂಡ ಹೆಚ್ಚು ದಿನ ಇರಲೇ ಇಲ್ಲ. 2004ರಿಂದ 2024ರ ಲೋಕಸಭೆ ಚುನಾವಣೆ ತನಕವೂ ಏಳುಬೀಳುಗಳ ಕಂಡ ಪಕ್ಷ ಜೆಡಿಎಸ್. ಸಿದ್ದರಾಮಯ್ಯ-ಕುಮಾರಸ್ವಾಮಿ ರಾಜಕೀಯ ಕಿತ್ತಾಟ ಮೈತ್ರಿ ಸರ್ಕಾರವನ್ನೇ ಬಲಿ ತೆಗೆದುಕೊಂಡಿತ್ತು. ಆಗ ಬಿಜೆಪಿ ಆಪರೇಷನ್ ಕಮಲದ ಮೂಲಕ ಸರ್ಕಾರ ರಚನೆ ಮಾಡಿ ಯಡಿಯೂರಪ್ಪ ಸಿಎಂ ಆದ್ರು. ತದ ನಂತರ ವಯಸ್ಸಿನ ನೆಪವೊಡ್ಡಿ ಯಡಿಯೂರಪ್ಪ ಅವರನ್ನ ಕೆಳಗಿಳಿಸಿ ಬೊಮ್ಮಾಯಿ ಅವರನ್ನ ಸಿಎಂ ಮಾಡಿದ್ರು. ಆಗಲು ಜೆಡಿಎಸ್ ಮುಗಿದು ಹೋಯ್ತು ಅಂತಿದ್ರು. ಸಿದ್ದರಾಮಯ್ಯ ಅಂತು ಜೆಡಿಎಸ್ ಮುಗಿಸುವ ಬಗ್ಗೆ ಆಗಾಗ್ಗೆ ಚುಚ್ಚು ಮಾತುಗಳನ್ನಾಡಿ ಕುಮಾರಸ್ವಾಮಿ ದೇವೇಗೌಡರನ್ನ ಕೆಣಕಿ ರಾಜಕಾರಣ ಮಾಡಿದ್ರು. ಅಷ್ಟೊತ್ತಿಗಾಗಲೇ 2023ರ ಚುನಾವಣೆ ಲೆಕ್ಕಕ್ಕೆ ಸಿಗದಷ್ಟು ರಾಜಕೀಯ ನಡೆದುಹೋಯ್ತು. ಗ್ಯಾರಂಟಿ ಬಿರುಗಾಳಿಗೆ ಬಿಜೆಪಿ ತೂರಿಕೊಂಡ್ರೆ, ಜೆಡಿಎಸ್ ನೆಲಕಚ್ಚಿತು. 104 ಸ್ಥಾನದಿಂದ 66 ಸ್ಥಾನಕ್ಕೆ ಬಿಜೆಪಿ ಕುಸಿದ್ರೆ, ಜೆಡಿಎಸ್ 37 ಸ್ಥಾನದಿಂದ 19 ಸ್ಥಾನಕ್ಕೆ ನೆಲ ಕಚ್ಚಿಬಿಡ್ತು. ಕಾಂಗ್ರೆಸ್ 135 ಸ್ಥಾನಗಳೊಂದಿಗೆ ಅಬ್ಬರಿಸಿ ಬೊಬ್ಬಿರಿಯಿತು. ಆಗ ಈ ಸಲ ಜೆಡಿಎಸ್ ಮೇಲೆದ್ದೇಳಲು ಛಾನ್ಸೇ ಇಲ್ಲ ಎಂಬ ಲೆಕ್ಕಚಾರವೂ ನಡೆದಿದ್ದುಂಟು. ಆದರೆ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಒಬ್ಬರನೊಬ್ಬರನ್ನ ಮೇಲೆತ್ತುವಲ್ಲಿ ಸಕ್ಸಸ್ ಕಾಣ್ತು. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮಕಾಡೆ ಮಲಗಿ 9 ಸ್ಥಾನಗಳಿಗಷ್ಟೇ ಸೀಮಿತವಾದ್ರೆ, ಬಿಜೆಪಿ 17, ಜೆಡಿಎಸ್ಗೆ 2 ಸ್ಥಾನಗಳು ದಕ್ಕಿದ್ವು. ಆಗ ಕುಮಾರಸ್ವಾಮಿ ಮೈತ್ರಿ ಧರ್ಮದ ಕೋಟಾದಲ್ಲಿ ಕ್ಯಾಬಿನೆಟ್ ದರ್ಜೆಯ ಕೇಂದ್ರ ಸಚಿವರಾಗಿದ್ದಾರೆ. ಜೆಡಿಎಸ್ ಮತ್ತೆ ಪುಟಿದೆದ್ದು ನಿಂತಿದ್ದು ರೋಚಕ ಅನ್ನಬಹುದು.
ಇಷ್ಟೆಲ್ಲ ಏಳುಬೀಳು ಕಂಡ ಜೆಡಿಎಸ್ಗೆ ಈಗ ಮತ್ತೆ ಆಪರೇಷನ್ ಕಾಂಗ್ರೆಸ್ ಆತಂಕ ಇದೆ. ಕುಮಾರಸ್ವಾಮಿ ಆರೋಗ್ಯ ವಿಚಾರ, ಮೈತ್ರಿ ಜಾಸ್ತಿ ದಿನ ಇರಲ್ಲ ಎಂಬ ಪ್ರಚಾರ ಜೆಡಿಎಸ್ ನಿದ್ರೆಗೆಡಿಸಿದೆ. 2028ರ ಕರ್ನಾಟಕ ವಿಧಾನಸಭೆ ಚುನಾವಣೆ ಹೊತ್ತಿಗೆ ಜೆಡಿಎಸ್ ಅಸ್ತಿತ್ವದ ಬಗ್ಗೆ ವಿರೋಧಿಗಳು ಚರ್ಚೆ ಶುರು ಮಾಡಿದ್ದಾರೆ. ಆ ಕಾರಣಕ್ಕಾಗಿಯೇ ಜೆಡಿಎಸ್ ಸದಸ್ಯತ್ವ ನೋಂದಣಿಗೆ ಚಾಲನೆ ನೀಡುವಾಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗುಟುರು ಹಾಕಿದ್ದಾರೆ. ಆರೋಗ್ಯದ ಬಗ್ಗೆ ಮಾತನಾಡುವವರಿಗೆ ಬಿಸಿ ಮುಟ್ಟಿಸಿ ನಾನು ಚೆನ್ನಾಗಿದ್ದೇನೆ, ಪಕ್ಷದ ಶಾಸಕರನ್ನ ಟಚ್ ಮಾಡಲು ಆಗಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಅಷ್ಟೇ ಅಲ್ಲ ಡೆಲ್ಲಿಗೆ ಹೋಗಿ ಸೀಟ್ ತರುವುದು ಗೊತ್ತು ಎನ್ನುವ ಮೂಲಕ ಮೋದಿ ಕೃಪೆ, ಮೈತ್ರಿ ಮುಂದುವರಿಕೆ ಇರುತ್ತೆ ಎಂಬ ಸುಳಿವು ನೀಡಿದ್ದಾರೆ. ಈ ನಡುವೆ ಜೆಡಿಎಸ್ ಮುಗಿಸುವ ವ್ಯಕ್ತಿ ಹುಟ್ಟಲ್ಲ ಎನ್ನುವ ಮೂಲಕ ಜೆಡಿಎಸ್ ಅಸ್ತಿತ್ವ ಅಲುಗಾಡಿಸಲು ಆಗಲ್ಲ ಎಂದು ದೇವೇಗೌಡರು ಗುಡುಗಿದ್ದಾರೆ. ಹಾಗಾದ್ರೆ ಕಳೆದ 25-26ವರ್ಷಗಳಿಂದ ಚುನಾವಣೆಯಿಂದ ಚುನಾವಣೆಗೆ ಜೆಡಿಎಸ್ ಅಸ್ತಿತ್ವದ ಬಗ್ಗೆ ಪ್ರಶ್ನೆಗಳು, ಲೆಕ್ಕಚಾರಗಳಿಗೆ ಉತ್ತರ ಸಿಕ್ಕಿದ್ರೂ ಕೂಡ, ಈಗ ಮತ್ತದ್ದೇ ಅಸ್ತಿತ್ವದ ಪ್ರಶ್ನೆಯೊಂದಿಗೆ ಜೆಡಿಎಸ್ ಯಾನದ ದಿಕ್ಕಿನ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮತ್ತದೇ ರೋಚಕತೆಯೋ..? ಕಾದುನೋಡಬೇಕಿದೆ. ಇದನ್ನೂ ಓದಿ: ಕೊಡಗಿನಲ್ಲಿ BSNL ಸೇವೆ ಸರಿಪಡಿಸಲು ಕೇಂದ್ರ ಸಚಿವರಿಗೆ ಯದುವೀರ್ ಒಡೆಯರ್ ಮನವಿ