ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದಿಂದ ಯಾರೂ ಬಿಜೆಪಿ ಸೇರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಹೊರವಯದ ಅಣಕನೂರು ಗ್ರಾಮದ ಬಳಿ ನೂತನವಾಗಿ ನಿರ್ಮಿಸಲಾಗಿದ್ದ ಜಿಲ್ಲಾ ಪೊಲೀಸ್ ಕಚೇರಿ ಉದ್ಘಾಟಿಸಿ ನಂತರ ಮಾಧ್ಯಮಗಳ ಜೊತೆ ಸಿಎಂ ಮಾತನಾಡಿದರು.
ಕೆಲ ಕೈ ನಾಯಕರು ಬಿಜೆಪಿಗೆ ಸೇರಲು ಮುಂದಾಗುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿಎಂ, ಆ ಸುದ್ದಿ ಶುದ್ಧ ಸುಳ್ಳು. ಬಿಜೆಪಿಯಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಬರಲು ಕೆಲವರು ತಯಾರಿದ್ದಾರೆ. ಆದರೆ ನಾನೇ ಬೇಡ ಅಂತಿದ್ದೇನೆ ಎಂದು ಹೇಳಿದರು.
ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದವರು ಬೇರೆ ಪಕ್ಷದವರಿಗೆ ಅಮಿಷ ಒಡ್ಡಿ ರಾಜೀನಾಮೆ ಕೊಡಿಸುತ್ತಾರೆ. ಆದರೆ ನಾವು ಹಾಗೆ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದರು.
ಕಲ್ಲಡ್ಕ ಪ್ರಭಾಕರ ಭಟ್ ಶಿಕ್ಷಣ ಸಂಸ್ಥೆಗೆ ಅನುದಾನ ಕಡಿತ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ ಸಿಎಂ ಸಿದ್ದರಾಮಯ್ಯ ಆದ್ರೂ ಕಲ್ಲಡ್ಕ ಪ್ರಭಾಕರ್ ಆದ್ರೂ ಒಂದೇ. ಆದರೆ ಕಲ್ಲಡ್ಕ ಪ್ರಭಾಕರ್ ಏನು ಮಾಡಿದ್ರೂ ಸುಮ್ಮನಿರಬೇಕಾ? ಸರ್ಕಾರದ ನಿಯಮಾವಳಿಗಳನ್ನ ಪಾಲಿಸದಿದ್ದರೂ ಸುಮ್ಮನಿರಬೇಕಾ ಎಂದು ಸಿಎಂ ಪ್ರಶ್ನಿಸಿದರು.