ಕೇಜ್ರಿವಾಲ್‌ಗೆ ಕ್ಯಾನ್ಸರ್ ಗಂಭೀರ ಹಂತದಲ್ಲಿಯೇ?- ಜಾಮೀನು ವಿಸ್ತರಣೆ ಅರ್ಜಿಯ ಕುರಿತು ಅತಿಶಿ ಹೇಳಿದ್ದೇನು?

Public TV
1 Min Read

ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಮಧ್ಯಂತರ ಜಾಮೀನನ್ನು ಇನ್ನೂ 7 ದಿನಗಳವರೆಗೆ ವಿಸ್ತರಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಿದ್ದಾರೆ. ತನ್ನ ಹೊಸ ಮನವಿಯಲ್ಲಿ, ಆರೋಗ್ಯ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ವಿಸ್ತರಿಸುವಂತೆ ಕೋರಿದ್ದಾರೆ. ಮಾರ್ಚ್‌ನಲ್ಲಿ ಬಂಧಿಸಿದಾಗಿನಿಂದ ಅವರು 7 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಎಪಿ ಸಚಿವೆ ಅತಿಶಿ (Atishi), ದೆಹಲಿ ಮುಖ್ಯಮಂತ್ರಿಯ ಹಠಾತ್ ತೂಕ ಇಳಿಕೆ ಹಾಗೂ ಕೀಟೋನ್ ಮಟ್ಟ (Ketone Level) ಹೆಚ್ಚಾಗಿರುವುದು ವೈದ್ಯರಿಗೆ ಕಳವಳಕಾರಿಯಾಗಿದೆ.‌ ಅವರ ಹಠಾತ್ ತೂಕ ನಷ್ಟ ಮತ್ತು ಹೆಚ್ಚಿನ ಕೀಟೋನ್ ಮಟ್ಟಗಳು ಮೂತ್ರಪಿಂಡದ ಹಾನಿ ಮತ್ತು ಕ್ಯಾನ್ಸರ್ ಸೇರಿದಂತೆ ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಇಂದು ಜವಾಹರಲಾಲ್ ನೆಹರು 60ನೇ ಪುಣ್ಯತಿಥಿ- ಪ್ರಧಾನಿ ಮೋದಿ ಗೌರವ ನಮನ

ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಪಿಇಟಿ-ಸಿಟಿ ಸ್ಕ್ಯಾನ್ ಮತ್ತು ಇತರ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವುದು ಅತ್ಯಗತ್ಯ. ಇವುಗಳು ಶೀಘ್ರವಾಗಿ ಪ್ರಗತಿ ಹೊಂದುತ್ತಿರುವ ರೋಗಗಳಾಗಿರುವುದರಿಂದ ಅವುಗಳನ್ನು ಮೊದಲೇ ಪತ್ತೆಹಚ್ಚುವುದು ಬಹಳ ಮುಖ್ಯ. ಅದಕ್ಕಾಗಿಯೇ ನಾವು 7 ದಿನಗಳ ವಿಸ್ತರಣೆಯನ್ನು ಕೇಳಿದ್ದೇವೆ. ವಿಸ್ತರಣೆ ಮಾಡಿದ್ದಲ್ಲಿ ಅವರು ಈ ಪರೀಕ್ಷೆಗಳನ್ನು ಮಾಡಬಹುದಾಗಿದೆ ಮತ್ತು ಔಷಧಿಗಳನ್ನು ಪ್ರಾರಂಭಿಸಬಹುದಾಗಿದೆ. ಹೀಗಾಗಿ ಅವರು ಜೂನ್ 2 ರ ಬದಲಾಗಿ ಜೂನ್ 9 ರಂದು ಒಂದು ವಾರದ ನಂತರ ಶರಣಾಗುತ್ತಾರೆ ಎಎಪಿ ಸಚಿವೆ ಹೇಳಿದರು.

ಲೋಕಸಭಾ ಚುನಾವಣೆಗೆ (Loksabha Elections 2024) ಪ್ರಚಾರ ಮಾಡಲು ಅನುಕೂಲವಾಗುವಂತೆ ಮೇ 10 ರಂದು ಸುಪ್ರೀಂ ಕೋರ್ಟ್ ಅವರಿಗೆ 21 ದಿನಗಳ ಅವಧಿಗೆ ಮಧ್ಯಂತರ ಜಾಮೀನು ನೀಡಿತ್ತು. ಜೂನ್ 2 ರಂದು ಶರಣಾಗಲು ಮತ್ತು ಜೈಲಿಗೆ ಮರಳಲು ಸೂಚಿಸಿದೆ. ಈಗ ಅರವಿಂದ್ ಕೇಜ್ರಿವಾಲ್ ಇನ್ನೂ ಏಳು ದಿನಗಳ ಕಾಲ ಜಾಮೀನು ವಿಸ್ತರಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Share This Article