ಸಂಕಷ್ಟದ ಸಮಯದಲ್ಲಿ ಭಾರತದಿಂದ 38 ಸಾವಿರ MT ತೈಲ ಪೂರೈಕೆ – ಧನ್ಯವಾದ ಹೇಳಿದ ಶ್ರೀಲಂಕಾ

2 Min Read

ಕೊಲಂಬೋ: ಸಂಕಷ್ಟದ ಸಮಯದಲ್ಲಿ ಭಾರತ (India) ಇಂಧನ ಪೂರೈಕೆ ಮಾಡಿದ್ದಕ್ಕೆ ಶ್ರೀಲಂಕಾ (Sri Lanka) ಅಧ್ಯಕ್ಷ ದಿಸಾನಾಯಕೆ(Anura Kumara Dissanayake) ಭಾರತಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು, ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಶ್ರೀಲಂಕಾ ಎದುರಿಸುತ್ತಿರುವ ಇಂಧನ ಪೂರೈಕೆಯಲ್ಲಿನ ಅಡಚಣೆಗಳ ಕುರಿತು ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜೊತೆ ಮಾತನಾಡಿದ್ದೆ. ಭಾರತ ಕೂಡಲೇ ಸ್ಪಂದಿಸಿ ಸಹಕಾರ ನೀಡಿದ್ದಕ್ಕೆ ಕೃತಜ್ಞತೆಗಳು. ನಿನ್ನೆ ಕೊಲಂಬೊಗೆ 38,000 ಮೆಟ್ರಿಕ್ ಟನ್ ಇಂಧನ ಬಂದಿದೆ. ಸಹಕಾರ ನೀಡಿದ ವಿದೇಶಾಂಗ ಸಚಿವ ಜೈಶಂಕರ್‌ ಅವರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.


ಭಾರತ ಈಗ 20,000 ಮೆಟ್ರಿಕ್ ಟನ್ ಡೀಸೆಲ್, 18,000 ಮೆಟ್ರಿಕ್ ಟನ್ ಪೆಟ್ರೋಲ್ ಸೇರಿ 38,000 ಮೆಟ್ರಿಕ್ ಟನ್‌ ಇಂಧನವನ್ನು ಕಳುಹಿಸಿಕೊಟ್ಟಿದೆ. ಇದನ್ನೂ ಓದಿ: ಅಮೆರಿಕದ ಫೈಟರ್‌ ಜೆಟ್‌ ಲ್ಯಾಂಡಿಂಗ್‌ ನಿರಾಕರಿಸಿ ನಮ್ಮದು ತಟಸ್ಥ ದೇಶ ಎಂದ ಶ್ರೀಲಂಕಾ

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಉಂಟಾದ ಇಂಧನ ಬಿಕ್ಕಟ್ಟಿನ ಕುರಿತು ಶ್ರೀಲಂಕಾ ಅಧ್ಯಕ್ಷರು ಮಾ.24 ರಂದು ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ಮಾತನಾಡಿದ್ದರು.

ಶ್ರೀಲಂಕಾ ಪಶ್ಚಿಮ ಏಷ್ಯಾ ಮತ್ತು ಸಿಂಗಾಪುರದಿಂದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿತ್ತು. ಹಾರ್ಮುಜ್‌ ಜಲಸಂಧಿಯನ್ನು ಇರಾನ್‌ ಬಂದ್‌ ಮಾಡಿದ್ದು ವಿಶ್ವಾದ್ಯಂತ ತೈಲ ಬಿಕ್ಕಟ್ಟು ಎದುರಾಗಿದೆ. ಭಾರತ ತನ್ನ ಸ್ನೇಹಿತ ರಾಷ್ಟ್ರ ಎಂದು ಪರಿಗಣಿಸಿದ ಇರಾನ್‌ ಈಗ ಭಾರತದ ಹಡಗುಗಳ ಸಂಚಾರಕ್ಕೆ ಅನುಮತಿ ನೀಡಿದೆ.

ಶ್ರೀಲಂಕಾದಲ್ಲಿ ಭಾರತ ಇಂಡಿಯನ್‌ ಆಯಿಲ್‌ ಕಂಪನಿಯ ಅಂಗಸಂಸ್ಥೆ ಲಂಕಾ ಐಒಸಿ ಪಿಎಲ್‌ಸಿ ಕಾರ್ಯನಿರ್ವಹಿಸುತ್ತಿದೆ. ಶ್ರೀಲಂಕಾ ಐಒಸಿ ಜೊತೆ ಒಪ್ಪಂದ ಮಾಡಿಕೊಂಡಿದ್ದ ಪೂರೈಕೆದಾರರಿಗೆ ತೈಲ ಪೂರೈಸಲು ಸಾಧ್ಯವಾಗದ ಕಾರಣ ಲಂಕಾದಲ್ಲಿ ತೈಲ ಬಿಕ್ಕಟ್ಟು ತೀವ್ರಗೊಂಡಿದೆ.

ಮಾ.22 ರಿಂದ ಶ್ರೀಲಂಕಾ ಇಂಧನ ದರವನ್ನು 25% ಏರಿಕೆ ಮಾಡಿದೆ. ಮಾ.1 ರಿಂದ ಲೆಕ್ಕ ಹಾಕಿದರೆ ಮೂರನೇ ಬಾರಿ ದರ ಏರಿದೆ. ಒಂದು ಲೀಟರ್‌ ಪೆಟ್ರೋಲ್‌ಗೆ ಮೊದಲು 317 ಲಂಕಾ ರೂಪಿ ಇದ್ದರೆ ಈಗ 81 ರೂ. ಏರಿಕೆಯಾಗಿ 398 ರೂ. ತಲುಪಿದೆ. ಡೀಸೆಲ್‌ ದರ ಮೊದಲು 303 ಶ್ರೀಲಂಕಾ ರೂ. ಇದ್ದರೆ ಈಗ 79 ರೂ. ಏರಿಕೆಯಾಗಿ 382 ರೂ. ತಲುಪಿದೆ.

Share This Article