ಪಂಜಾಬ್‌ ಪರ ವಾಲಿದ್ದ ಪಂದ್ಯವನ್ನು ಆರ್‌ಸಿಬಿ ಕಡೆ ತಿರುಗಿಸಿದ್ದು ಕೃನಾಲ್‌!

Public TV
2 Min Read

ಅಹಮದಾಬಾದ್‌: 4 ಓವರ್‌ 17 ರನ್‌ 2 ವಿಕೆಟ್‌. ಪಂಜಾಬ್‌ (PBKS) ಪರ ವಾಲಿದ್ದ ಪಂದ್ಯವನ್ನು ಆರ್‌ಸಿಬಿ (RCB) ಕಡೆ ತಿರುಗಿಸಿದ್ದು ಕೃನಾಲ್‌ ಪಾಂಡ್ಯ.

ಪಂಜಾಬ್‌ 6 ಓವರ್‌ ಅಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 52 ರನ್‌ ಗಳಿಸಿತ್ತು. ಈ ಹಂತದಲ್ಲಿ ರಜತ್‌ ಪಾಟಿದಾರ್‌ ಕೃನಾಲ್‌ ಪಾಂಡ್ಯ (Krunal Pandya) ಕೈಗೆ ಚೆಂಡು ನೀಡಿದರು. ಕೃನಾಲ್‌ ತಮ್ಮ ಮೊದಲ ಓವರ್‌ನಲ್ಲಿ 3 ರನ್‌ ನೀಡಿ ರನ್‌ಗೆ ಕಡಿವಾಣ ಹಾಕಿದರು. ತಮ್ಮ ಎರಡನೇ ಓವರ್‌ನಲ್ಲಿ ಪ್ರಭುಸಿಮ್ರಾನ್‌ ಸಿಂಗ್‌ ಅವರನ್ನು ಔಟ್‌ ಮಾಡಿದರು. ಈ ಓವರ್‌ನಲ್ಲಿ ಕೇವಲ 4 ರನ್‌ ಮಾತ್ರ ನೀಡಿದರು.

 

 

ತಮ್ಮ ಮೂರನೇ ಓವರ್‌ನಲ್ಲಿ 11 ರನ್‌ ನೀಡಿದ ಕೃನಾಲ್‌ ತಮ್ಮ ಕೊನೆಯ ಓವರ್‌ನಲ್ಲಿ ಜೋಶ್‌ ಇಂಗ್ಲಿಸ್‌ ಅವರನ್ನು ಔಟ್‌ ಮಾಡಿದರು. ಸಿಕ್ಸ್‌ ಹೊಡೆಯಲು ಹೋದ ಇಂಗ್ಲಿಸ್‌ ಅವರ ಕ್ಯಾಚನ್ನು ಬೌಂಡರಿ ಬಳಿ ಲಿವಿಂಗ್‌ಸ್ಟೋನ್ ಹಿಡಿದರು. ಇಲ್ಲಿಂದ ಪಂದ್ಯದ ದಿಕ್ಕೇ ಬದಲಾಯಿತು.

4 ಓವರ್‌ನಲ್ಲಿ ರನ್‌ ನಿಯಂತ್ರಣ ಮಾಡಿದ್ದು ಅಲ್ಲದೇ 2 ವಿಕೆಟ್‌ ತೆಗೆಯುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ನಂತರ ಪಂಜಾಬ್‌ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿ ಕೊನೆಗೆ ಸೋಲನ್ನು ಒಪ್ಪಿಕೊಂಡಿತು.

ಹಾಗೆ ನೋಡಿದ್ರೆ 4 ಓವರ್‌ ಎಸೆದ ಭುವನೇಶ್ವರ್‌ ಕುಮಾರ್‌ 38 ರನ್‌ ನೀಡಿದ್ರೆ ಹೆಜಲ್‌ವುಡ್‌ 54 ರನ್‌ ನೀಡಿ ದುಬಾರಿಯಾಗಿದ್ದರು. ಸುಯಾಶ್‌ ಶರ್ಮಾ 2 ಓವರ್‌ ಎಸೆದಿದ್ದರೂ 19 ರನ್‌ ನೀಡಿದ್ದರು. ರೋಮಾರಿಯೋ ಶೆಪರ್ಡ್‌ 3 ಓವರ್‌ ಎಸೆದು 30 ರನ್‌ ಕೊಟ್ಟಿದ್ದರು. ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕೆ ಅರ್ಹವಾಗಿಯೇ ಕೃನಾಲ್‌ ಪಾಂಡ್ಯ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Share This Article