ಅಭಿಮಾನಿಗಳಿಗೆ ಗುಡ್‌ನ್ಯೂಸ್‌ – ಈಗ ಅಧಿಕೃತ, ಬೆಂಗಳೂರಿನಲ್ಲೇ 5 ಪಂದ್ಯ ಆಡಲಿದೆ ಆರ್‌ಸಿಬಿ

1 Min Read

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಚಾಂಪಿಯನ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ (Chinnaswamy Stadium) ಪಂದ್ಯ ಆಡುವುದು ಖಚಿತವಾಗಿದೆ.

ಉದ್ಘಾಟನಾ ಪಂದ್ಯ ಸೇರಿದಂತೆ ತನ್ನ ಐದು ತವರು ಪಂದ್ಯಗಳನ್ನು ಬೆಂಗಳೂರಿನಲ್ಲೇ (Bengaluru) ಆಡುವುದಾಗಿ ಆರ್‌ಸಿಬಿ ದೃಢಪಡಿಸಿದೆ.

ಎರಡು ತವರು ಪಂದ್ಯಗಳನ್ನು ಪೂರ್ವ ಬದ್ಧತೆಯಂತೆ ಚತ್ತೀಸ್‌ಗಢದಲ್ಲಿರುವ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ಆರ್‌ಸಿಬಿ ತನ್ನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

ಫೈನಲಿನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಸೋಲಿಸಿ ಚೊಚ್ಚಲ ಚಾಂಪಿಯನ್‌ ಪಟ್ಟ ಅಲಂಕರಿಸಿದ ಮರುದಿನ ಜೂನ್‌ 4 ರಂದು ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿತ್ತು. ಇದನ್ನೂ ಓದಿ: ಟಿ20 ವಿಶ್ವಕಪ್‌ ಸೆಮಿಸ್‌ನಿಂದ ಹೊರಬಿದ್ದ ಪಾಕ್‌ – ಆಟಗಾರರಿಗೆ ಲಕ್ಷ ಲಕ್ಷ ದಂಡ ವಿಧಿಸಿದ ಪಿಸಿಬಿ

ದುರಂತದ ನಡೆದ ನಂತರ ಚಿನ್ನಸ್ವಾಮಿ ಸ್ಟೇಡಿಯಂ ಕ್ರಿಕೆಟ್‌ ನಡೆಸಲು ಯೋಗ್ಯವಲ್ಲ ಎಂದು ಹೇಳಿ ಸರ್ಕಾರ ಅನುಮತಿ ನಿರಾಕರಿಸಿತ್ತು. ನಂತರ ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜಿಸುವ ಸಂಬಂಧ ನ್ಯಾ. ಮೈಕಲ್ ಡಿ ಕುನ್ಹಾ ವರದಿಯಲ್ಲಿ ಉಲ್ಲೇಖಿಸಿರುವ ಸಮಸ್ಯೆಗಳನ್ನು ಬಗೆಹರಿಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಮಂಡಳಿ ಕ್ರಮ ಕೈಗೊಂಡಿತ್ತು. ಅಂಬುಲೆನ್ಸ್‌ ಓಡಾಟಕ್ಕೆ ಜಾಗ, ಪಾರ್ಕಿಂಗ್ ವ್ಯವಸ್ಥೆ, ತುರ್ತು ನಿರ್ಗಮನ, ಅಗಲವಾದ ಗೇಟ್‌ಗಳು, ಮಹಿಳೆಯರಿಗೆ ಪ್ರತ್ಯೇಕ ಮಾರ್ಗ ಸೇರಿ ಎಲ್ಲಾ ಮಾರ್ಗಸೂಚಿಗಳಿಗೆ ಅನ್ವಯವಾಗುವಂತೆ ಬದಲಾವಣೆ ಮಾಡಿತ್ತು.

ಚಿನ್ನಸ್ವಾಮಿ ಕೈಗೊಂಡ ಸುರಕ್ಷತಾ ಕ್ರಮದ ಬಳಿಕ ಸರ್ಕಾರ ಪಂದ್ಯ ಆಯೋಜಿಸಲು ಅನುಮತಿ ನೀಡಿತ್ತು. ಅನುಮತಿ ಸಿಕ್ಕಿದ ಬೆನ್ನಲ್ಲೇ ಈಗ ಆರ್‌ಸಿಬಿ ಬೆಂಗಳೂರಿನಲ್ಲಿ 5 ಪಂದ್ಯವನ್ನು ಆಡುವುದಾಗಿ ಅಧಿಕೃತವಾಗಿ ತಿಳಿಸಿದೆ.

ಕಾಲ್ತುಳಿತ ದುರಂತ ಸಂಭವಿಸಿದ ಬಳಿಕ ಚಿನ್ನಸ್ವಾಮಿಯಲ್ಲಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಅಥವಾ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ 20 ಸೇರಿದಂತೆ ಯಾವುದೇ ಪ್ರಮುಖ ದೇಶೀಯ ಪಂದ್ಯಗಳು ನಡೆದಿರಲಿಲ್ಲ.

ಬೆಂಗಳೂರಿನಲ್ಲಿ ಪಂದ್ಯ ಆಡುವ ಬಗ್ಗೆ ಆರ್‌ಸಿಬಿ ಮಾರ್ಚ್‌ 2ರಂದೇ ʼಹೋಮ್‌ ಆಫ್‌ ಚಾಂಪಿಯನ್ಸ್‌ʼ ಹೆಸರಿನ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಬೆಂಗಳೂರಿನಲ್ಲೇ ಪಂಡ್ಯವಾಡುವ ಬಗ್ಗೆ ಮಹತ್ವದ ಸುಳಿವು ನೀಡಿತ್ತು.

Share This Article