IPL 2025 | ಪ್ಲೇ-ಆಫ್‌ ಮೇಲೆ ಆರ್‌ಸಿಬಿ ಕಣ್ಣು – ಕೊಹ್ಲಿಯೇ ಆಕರ್ಷಣೆ, ಇಂದು ಗೆದ್ದರೆ ಇತಿಹಾಸ

Public TV
2 Min Read

ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ (India And Pakistan) ನಡುವಿನ ಸಂಘರ್ಷದಿಂದಾಗಿ ಒಂದು ವಾರ‌ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್‌ ಚುಟುಕು ಕ್ರಿಕೆಟ್‌ ಹಬ್ಬ ಇಂದಿನಿಂದ ಪುನರಾರಂಭವಾಗುತ್ತಿದೆ.

ಬೆಂಗಳೂರಿನ (Bengaluru) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಕೆಕೆಆರ್‌-ಆರ್‌ಸಿಬಿ (KKR vs RCB) ತಂಡಗಳು ಮುಖಾಮುಖಿಯಾಗಲಿವೆ. ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದ್ದು, ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಹೇಳಿರುವ ವಿರಾಟ್‌ ಕೊಹ್ಲಿ (Virat Kohli) ಎಲ್ಲರ ಆಕರ್ಷಣೆಯಾಗಲಿದ್ದಾರೆ.

ಸದ್ಯ ಆಡಿರುವ 11 ಪಂದ್ಯಗಳಿಂದ 8 ಜಯ, 3 ಸೋಲು ಕಂಡಿರುವ ರಜತ್‌ ಪಾಟಿದಾರ್‌ (Rajat Patidar) ಸಾರಥ್ಯದ ಆರ್‌ಸಿಬಿ, +0.482 ನೆಟ್‌ ರನ್‌ರೇಟ್‌ನೊಂದಿಗೆ 16 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 16 ಅಂಕ ಪಡೆದಿರುವ ಗುಜರಾತ್‌ ಟೈಟನ್ಸ್‌ +0.793 ನೆಟ್‌ ರನ್‌ರೇಟ್‌ನೊಂದಿಗೆ ಅಗ್ರಸ್ಥಾನದಲ್ಲಿದೆ. ಆರ್‌ಸಿಬಿಯು ಇಂದಿನ ಪಂದ್ಯವನ್ನು ಗೆದ್ದರೆ 18 ಅಂಕಗಳೊಂದಿಗೆ 18ನೇ ಆವೃತ್ತಿಯ ಐಪಿಎಲ್‌ ಪ್ಲೇ-ಆಫ್‌ಗೆ ಪ್ರವೇಶಿಸಲಿದೆ. ಜೊತೆಗೆ 18 ಆವೃತ್ತಿಗಳಲ್ಲಿ ಮೊದಲ ಬಾರಿಗೆ ಪ್ಲೇ ಆಫ್‌ ಪ್ರವೇಶಿಸಿದ ಇತಿಹಾಸವನ್ನು ಆರ್‌ಸಿಬಿ ನಿರ್ಮಿಸಲಿದೆ.

ಅತ್ತ 12 ಪಂದ್ಯಗಳನ್ನಾಡಿರುವ ಅಜಿಂಕ್ಯಾ ರಹಾನೆ ನೇತೃತ್ವದ ಕೋಲ್ಕತ್ತಾ ನೈಟ್‌ ರೈಡರ್ಸ್‌, 11 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಪ್ಲೇಆಫ್‌ ಸ್ಪರ್ಧೆಯನ್ನು ಜೀವಂತವಾಗಿಟ್ಟುಕೊಳ್ಳಬೇಕಾದರೆ 3 ಬಾರಿಯ ಚಾಂಪಿಯನ್‌ ಕೆಕೆಆರ್‌ಗೆ ಉತ್ತಮ ರನ್‌ರೇಟ್‌ನೊಂದಿಗೆ ಇಂದಿನ ಪಂದ್ಯ ಗೆಲ್ಲುವುದು ಅನಿವಾರ್ಯ. ಒಂದು ವೇಳೆ ಸೋತರೆ ಪ್ಲೇಆಫ್‌ ಸ್ಪರ್ಧೆಯಿಂದ ಹೊರಗುಳಿದ 4ನೇ ತಂಡವಾಗಲಿದೆ. ಹೀಗಾಗಿ ರಹಾನೆ ಬಳಗಕ್ಕೆ ಶನಿವಾರದ ಪಂದ್ಯ ‘ಮಾಡು ಇಲ್ಲವೇ ಮಡಿ’ ಎಂಬಂತಾಗಿದೆ.

ಹಿಂದಿನ 4 ಪಂದ್ಯಗಳಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿರುವ ಆರ್‌ಸಿಬಿ, ತವರಿನಲ್ಲಿ 3ನೇ ಹಾಗೂ ಸತತ 5ನೇ ಜಯದ ನಿರೀಕ್ಷೆಯಲ್ಲಿ ಕಣಕ್ಕಿಳಿಯುತ್ತಿದೆ. ಅತ್ತ ತಾನಾಡಿದ ಹಿಂದಿನ 3 ಪಂದ್ಯಗಳಲ್ಲಿ 2 ಜಯ ಹಾಗೂ 1 ಸೋಲು ಕಂಡಿರುವ ಕೆಕೆಆರ್‌, ಪ್ಲೇಆಫ್‌ ಸ್ಪರ್ಧೆಯಲ್ಲಿ ಉಳಿಯಲು ಗೆಲುವಿನ ಅನಿವಾರ್ಯತೆಯನ್ನು ಎದುರಿಸುತ್ತಿದೆ.

ರಜತ್‌ ಪಾಟೀದಾರ್‌ ಲಭ್ಯ:
ಇನ್ನೂ ಹಿಂದಿನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಬೆರಳು ಗಾಯಕ್ಕೆ ಒಳಗಾಗಿದ್ದ ಆರ್‌ಸಿಬಿ ನಾಯಕ ರಜತ್‌ ಪಾಟೀದಾ‌ರ್, ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ. ಶುಕ್ರವಾರ ತಂಡದ ಅಭ್ಯಾಸದಲ್ಲಿ ಅವರು ಭರ್ಜರಿ ತಾಲೀಮು ನಡೆಸಿರುವುದು ತಂಡದ ದೊಡ್ಡ ಚಿಂತೆಯನ್ನು ದೂರ ಮಾಡಿದೆ.

ಮಳೆಯದ್ದೇ ಆತಂಕ:
ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಈ ಬಾರಿ ಬೌಲಿಂಗ್‌ಗೆ ಹೆಚ್ಚು ಸಹಕರಿಸುವ ಚಿನ್ನಸ್ವಾಮಿ ಪಿಚ್‌ನಲ್ಲಿ ಮಳೆಯೂ ಮೇಲುಗೈ ಸಾಧಿಸಬಹುದು. ಇದಕ್ಕೆ ಅನುಗುಣವಾಗಿ ಉಭಯ ತಂಡಗಳು ಕಾರ್ಯತಂತ್ರ ರೂಪಿಸಬೇಕಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ, ಉಭಯ ತಂಡಗಳು ತಲಾ ಒಂದೊಂದು ಅಂಕ ಪಡೆದುಕೊಳ್ಳಲಿವೆ. ಮಳೆಯಿಂದ ಪಂದ್ಯ ರದ್ದಾಗಿ ಒಂದು ಅಂಕ ಪಡೆದರೂ ಆರ್‌ಸಿಬಿ ಪ್ಲೇ ಆಫ್‌ ಖಚಿತವಾಗಲಿದೆ.

Share This Article