ಚೆನ್ನೈನಲ್ಲಿ ಪಂಜಾಬ್‌ `ಕಿಂಗ್‌’ – ಟೂರ್ನಿಯಿಂದಲೇ ಸಿಎಸ್‌ಕೆ ಔಟ್‌

Public TV
3 Min Read

– ಈ ಸೀಸನ್‌ನಲ್ಲಿ ನಿರ್ಗಮಿಸಿದ ಮೊದಲ ತಂಡ

ಚೆನ್ನೈ: ಪಂಜಾಬ್‌ ಕಿಂಗ್ಸ್‌ ವಿರುದ್ಧ ತವರಿನಲ್ಲೇ ಸೋಲುವುದರ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ 18ನೇ ಐಪಿಎಲ್‌ ಆವೃತ್ತಿಯಿಂದ ಅಧಿಕೃತವಾಗಿ ನಿರ್ಗಮಿಸಿದೆ. ಚೆನ್ನೈ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿದ ಪಂಜಾಬ್‌ 13 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಚೆನ್ನೈ 190 ರನ್‌ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್‌ 19.4 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 194 ರನ್‌ ಹೊಡೆಯುವ ಮೂಲಕ ಜಯ ಸಾಧಿಸಿತು. ಈ ಮೂಲಕ ಈ ಐಪಿಎಲ್‌ನಲ್ಲಿ ನಿರ್ಗಮಿಸಿದ ಮೊದಲ ತಂಡ ಎಂಬ ಕುಖ್ಯಾತಿಗೆ ಚೆನ್ನೈ ಪಾತ್ರವಾಯಿತು.

191 ರನ್ ಗುರಿ ಬೆನ್ನತ್ತಿದ ಪಂಜಾಬ್ ತಂಡದ ಆರಂಭಿಕ ಬ್ಯಾಟ್ಸ್‌ಮೆನ್‌ಗಳಾದ ಪ್ರಿಯಾಂಶ್ ಆರ್ಯ ಹಾಗೂ ಪ್ರಭಸಿಮ್ರನ್ ಸಿಂಗ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಉತ್ತಮ ಜೊತೆಯಾಟವಾಡಿದ ಜೋಡಿ 28 ಎಸೆತಗಳಿಗೆ 44 ರನ್ ಕಲೆ ಹಾಕಿತು. ಪ್ರಿಯಾಂಶ್ ಆರ್ಯ 15 ಬಾಲ್‌ಗೆ 23 ರನ್ ಗಳಿಸಿ ಖಲೀಲ್ ಅಹ್ಮದ್‌ಗೆ ವಿಕೆಟ್ ಒಪ್ಪಿಸಿದರು.

ಬಳಿಕ ಕ್ರೀಸ್‌ಗಳಿದ ತಂಡದ ನಾಯಕ ಶ್ರೇಯಸ್ ಅಯ್ಯರ್, ಪ್ರಭಸಿಮ್ರನ್ ಸಿಂಗ್ ಜೊತೆಗೂಡಿ 50 ಬಾಲ್‌ನಲ್ಲಿ 72 ಹೊಡೆದರು. ಪ್ರಭಸಿಮ್ರನ್ ಸಿಂಗ್ 36 ಬಾಲ್‌ಗೆ 54 ರನ್ (5 ಬೌಂಡರಿ, 3 ಸಿಕ್ಸ್) ಮೂಲಕ ಆಕರ್ಷಕ ಅರ್ಧಶತಕ ಬಾರಿಸಿ ಕ್ಯಾಚ್‌ ನೀಡಿ ಔಟಾದರು.ಬಳಿಕ ಬಂದ ನೇಹಲ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲಿಲ್ಲ. ಶಶಾಂಕ್ ಸಿಂಗ್ 12 ಬಾಲ್‌ಗೆ 23 ರನ್ ಬಾರಿಸುವ ಔಟಾದರು.

ನಾಯಕ ಶ್ರೇಯಸ್ ಅಯ್ಯರ್ ತಂಡದ ಪರವಾಗಿ ಅತ್ಯುತ್ತಮ ಇನ್ನಿಂಗ್ ಆಡಿದರು. 41 ಬಾಲ್‌ಗೆ 72 ರನ್ (5 ಬೌಂಡರಿ, 4 ಸಿಕ್ಸ್‌) ಹೊಡೆದ ಅಯ್ಯರ್‌ ಗೆಲುವಿಗೆ ಕೇವಲ 3 ರನ್ ಬೇಕಿದ್ದಾಗ ಓಟಾದರು. ಬಳಿಕ ಬಂದ ಜೋಶ್ ಇಂಗ್ಲಿಸ್ ಹಾಗೂ ಮಾರ್ಕೋ ಜಾನ್ಸ್‌ನ್‌ ತಂಡವನ್ನು ಗೆಲ್ಲಿಸಿದರು.

ಸಿಎಸ್‌ಕೆ ಬೌಲರ್‌ಗಳಾದ ಪತಿರಾಣ ಹಾಗೂ ಖಲೀಲ್ ಅಹ್ಮದ್ ತಲಾ 2 ವಿಕೆಟ್ ಕಬಳಿಸಿದರು. ರವೀಂದ್ರ ಜಡೇಜಾ ಹಾಗೂ ನೂರ್ ಅಹ್ಮದ್ ತಲಾ ಒಂದೊಂದು ವಿಕೆಟ್ ಕಿತ್ತರು.

ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ತಂಡದ ಪರ ಶೇಖ್ ರಶೀದ್ ಮತ್ತು ಆಯುಷ್ ಮ್ಹಾತ್ರೆ ಇನ್ನಿಂಗ್ಸ್ ಆರಂಭಸಿದರು. ಮೊದಲೆರಡು ಓವರ್‌ಗಳಲ್ಲಿ ಹೆಚ್ಚು ರನ್ ಗಳಿಸುವ ಬರದಲ್ಲಿ ಇಬ್ಬರೂ ಔಟಾದರು. ರಶೀದ್ 12 ಬಾಲ್‌ನಲ್ಲಿ 11 ರನ್ ಗಳಿಸಿದರೆ, ಮ್ಹಾತ್ರೆ 6 ಎಸೆತಗಳಲ್ಲಿ 7 ರನ್ ಗಳಿಸಿದರು. ಬಳಿಕ ಬಂದ ರವೀಂದ್ರ ಜಡೇಜಾ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಆಡಲಿಲ್ಲ. ಜಡೇಜಾ 12 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು.

ಅದಾಗಲೇ ಸಿಎಸ್‌ಕೆ ತಂಡ 48 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ಬ್ಯಾಟ್ಸ್‌ಮೆನ್‌ಗಳಾದ ಸ್ಯಾಮ್ ಕರ್ರನ್‌ ಹಾಗೂ ಡೆವಾಲ್ಡ್ ಬ್ರೆವಿಸ್ ತಂಡದ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ಡೆವಾಲ್ಡ್ ಬ್ರೆವಿಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡುವ ಮೂಲಕ ಸಿಎಸ್‌ಗೆ ಆಸರೆಯಾದರು. ಡೆವಾಲ್ಡ್ ಬ್ರೆವಿಸ್ 26 ಬಾಲ್‌ನಲ್ಲಿ 32 ರನ್ ಗಳಿಸಿ(2 ಬೌಂಡರಿ, 1 ಸಿಕ್ಸರ್) ಸಿಡಿಸಿದರು.

ಇತ್ತ ಭರ್ಜರಿ ಬ್ಯಾಟಿಂಗ್ ಮಾಡಿದ ಸ್ಯಾಮ್ ಕರ್ರನ್‌ ಚೆನ್ನೈ ತಂಡ ಸವಾಲಿನ ಮೊತ್ತ ಕಲೆ ಹಾಕಲು ಕಾರಣವಾದರು. ಕರ್ರನ್‌ 47 ಎಸೆತಗಳಲ್ಲಿ 88 ರನ್ ಬಾರಿಸಿ ಪಂಜಾಬ್ ಬೌಲರ್‌ಗಳ ಬೆವರಿಳಿಸಿದರು. ಕರನ್ 9 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿ ಬೌಲರ್ ಮಾರ್ಕೊ ಜಾನ್ಸ್‌ನ್‌ಗೆ ದಾಳಿಗೆ ಶರಣಾದರು.

ಸ್ಯಾಮ್ ಕರನ್ ಮತ್ತು ಡೆವಾಲ್ಡ್ ಬ್ರೆವಿಸ್ ಜೋಡಿ 50 ಬಾಲ್‌ನಲ್ಲಿ 78 ರನ್‌ಗಳ ಜೊತೆಯಾಟವಾಡಿತ್ತು. ಬಳಿಕ ಬಂದ ಬ್ಯಾಟರ್ಸ್‌ ಪಂಜಾಬ್ ಬೌಲರ್ ಯಜುವೇಂದ್ರ ಚಹಲ್ ರನ್‌ಗಳಿಸಲು ಅವಕಾಶ ನೀಡಲಿಲ್ಲ. ಯಜುವೇಂದ್ರ ಚಹಲ್ 18ನೇ ಓವರ್‌ನಲ್ಲಿ ತಮ್ಮ ಸ್ಪಿನ್ ಮ್ಯಾಜಿಕ್ ತೋರಿಸಿ, ಹ್ಯಾಟ್ರಿಕ್ ವಿಕೆಟ್ ಪಡೆದರು. ಈ ಒಂದೇ ಓವರ್‌ನಲ್ಲಿ ಒಟ್ಟು ಅವರು ನಾಲ್ಕು ವಿಕೆಟ್ ಕಬಳಿಸಿದ್ದು ಮೊದಲು ಎಂಎಸ್ ಧೋನಿ, ದೀಪಕ್ ಹೂಡಾ ಮತ್ತು ಅನ್ಶುಲ್ ಕಾಂಬೋಜ್ ಕ್ಲೀನ್ ಬೌಲ್ಡ್ ಆದರು. ಬಳಿಕ ಬಂದ ನೂರ್ ಅಹ್ಮದ್ ಸಹ ಚಹಲ್‌ಗೆ ಕೊನೆಯ ವಿಕೆಟ್ ಒಪ್ಪಿಸಿದರು.

ಪಂಜಾಬ್ ಬೌರ‍್ಸ್ ಯಜುವೇಂದ್ರ ಚಹಲ್ 4 ವಿಕೆಟ್ ಕಿತ್ತು ಆಕರ್ಷಕ ಬೌಲಿಂಗ್ ಪ್ರದರ್ಶಿಸಿದರು. ಅರ್ಶದೀಪ್ ಸಿಂಗ್ ಹಾಗೂ ಮಾರ್ಕೋ ಜಾನ್ಸ್‌ನ್‌ ತಲಾ 2 ವಿಕೆಟ್ ಕಬಳಿಸಿದರು. ಅಜ್ಮತುಲ್ಲಾ ಒಮರ್ಜಾಯ್ ಹಾಗೂ ಹರ್‌ಪ್ರೀತ್ ಬ್ರಾರ್ ತಲಾ 1 ವಿಕೆಟ್‌ಗಳಿದರು.

Share This Article