ಈ ಸಲ ಕಪ್ ನಮ್ದೇ ಮುಂದಿನ ವರ್ಷಕ್ಕೆ – ಆರ್‌ಸಿಬಿಗೆ ಹೀನಾಯ ಸೋಲು – ರಾಯಲ್ ಆಗಿ ಫೈನಲ್‍ಗೆ ಎಂಟ್ರಿಕೊಟ್ಟ ಆರ್‌ಆರ್

Public TV
3 Min Read

ಅಹಮದಾಬಾದ್: ಫೈನಲ್‍ಗೆ ಲಗ್ಗೆ ಇಡಲು ಗೆಲ್ಲಲೇ ಬೇಕಾದ ಪಂದ್ಯದಲ್ಲಿ ರಾಜಸ್ಥಾನ ಪರ ಜೋಸ್ ಬಟ್ಲರ್ ಬ್ಯಾಟಿಂಗ್ ಜೋಶ್‍ಗೆ ಆರ್‌ಸಿಬಿ ಕಂಗೆಟ್ಟು ಸೋತು ಮನೆ ದಾರಿ ಹಿಡಿದಿದೆ. ಇತ್ತ 7 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ರಾಜಸ್ಥಾನ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ನೀಡಿದ 158 ರನ್‍ಗಳ ಸಾಧಾರಣ ಮೊತ್ತವನ್ನು ಆರಂಭದಲ್ಲೇ ಉಡೀಸ್ ಮಾಡುವ ಸೂಚನೆ ನೀಡಿದ ಬಟ್ಲರ್ ಅಜೇಯ 106 ರನ್‌ (60 ಎಸೆತ, 10 ಬೌಂಡರಿ, 6 ಸಿಕ್ಸ್‌) ಚಚ್ಚಿ ಆರಂಭದಿಂದ ಕೊನೆಯವರೆಗೆ ಹೋರಾಡಿ ರಾಜಸ್ಥಾನಕ್ಕೆ 18.1 ಓವರ್‌ಗಳ ಅಂತ್ಯಕ್ಕೆ 161 ರನ್‌ ಸಿಡಿಸಿ ಇನ್ನೂ 11 ಎಸೆತ ಬಾಕಿ ಇರುವಂತೆ 7 ವಿಕೆಟ್‌ಗಳ ಅಂತರದ ಗೆಲುವು ತಂದು ಕೊಟ್ಟರು. ಈ ಮೂಲಕ ಸುಲಭವಾಗಿ ಫೈನಲ್‍ಗೆ ದಾರಿ ತೋರಿಸಿದರು. ಇತ್ತ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಲು ವಿಫಲವಾದ ಆರ್‌ಸಿಬಿ ಅಭಿಮಾನಿಗಳ ಕಪ್ ಗೆಲ್ಲುವ ಆಸೆಗೆ ಈ ಬಾರಿಯೂ ತಣ್ಣೀರೆರಚಿದೆ.

ರಾಜಸ್ಥಾನ ಪರ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ಬಟ್ಲರ್ ಆರ್‌ಸಿಬಿ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಜೊತೆಗೆ ಮೊದಲ ವಿಕೆಟ್‍ಗೆ 61 ರನ್ (31 ಎಸೆತ) ಸಿಡಿಸಿ ಈ ಜೋಡಿ ಬೇರ್ಪಟ್ಟಿತು. ಜೈಸ್ವಾಲ್ 21 ರನ್ (13 ಎಸೆತ, 1 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದರು. ಬಳಿಕ ಸಂಜು ಸ್ಯಾಮ್ಸನ್ 23 ರನ್ (21 ಎಸೆತ, 1 ಬೌಂಡರಿ, 2 ಸಿಕ್ಸ್) ಬಾರಿಸಿ ಹಸರಂಗಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಈ ಮೊದಲು ಬಟ್ಲರ್ ಜೊತೆ 52 ರನ್ (39 ಎಸೆತ) ಜೊತೆಯಾಟವಾಡಿ ತಂಡದ ಗೆಲುವಿಗೆ ನೆರವಾದರು.

ಈ ಮೊದಲು ಟಾಸ್ ಗೆದ್ದ ರಾಜಸ್ಥಾನ ತಂಡ ಆರ್​ಸಿಬಿ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಆದರೆ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಆರಂಭದಲ್ಲೇ ಎಡವಿತು. ಕೊಹ್ಲಿ 7 ರನ್ (8 ಎಸೆತ, 1 ಸಿಕ್ಸ್) ಸಿಡಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

ಆ ಬಳಿಕ ಒಂದಾದ ಡುಪ್ಲೆಸಿಸ್ ಮತ್ತು ಕಳೆದ ಪಂದ್ಯದ ಹೀರೋ ರಜತ್ ಪಾಟಿದರ್ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತರು. ಇನ್ನೇನೂ ಈ ಜೋಡಿ ದೊಡ್ಡ ಮೊತ್ತದ ಜೊತೆಯಾಟಕ್ಕೆ ಮುಂದಾಗುವ ಸೂಚನೆ ನೀಡುತ್ತಿದ್ದಂತೆ ಮೆಕಾಯ್ ದಾಳಿಗಿಳಿದು 25 ರನ್ (27 ಎಸೆತ, 3 ಬೌಂಡರಿ) ಬಾರಿಸಿ ಮುನ್ನುಗ್ಗುತ್ತಿದ್ದ ಡುಪ್ಲೆಸಿಸ್ ವಿಕೆಟ್ ಬೇಟೆಯಾಡಿದರು. ಡುಪ್ಲೆಸಿಸ್ ಔಟ್ ಆಗುವ ಮುನ್ನ ಪಾಟಿದರ್ ಜೊತೆ 2ನೇ ವಿಕೆಟ್‍ಗೆ 70 ರನ್ (53 ಎಸೆತ)ಗಳ ಜೊತೆಯಾಟವಾಡಿದ್ದು ತಂಡಕ್ಕೆ ಪ್ಲಸ್ ಪಾಯಿಂಟ್ ಆಯಿತು.

ಪಾಟಿದರ್ ಏಕಾಂಗಿ ಹೋರಾಟ
ಕಳೆದ ಪಂದ್ಯದ ಮುಂದುವರಿದ ಭಾಗದಂತೆ ಪಾಟಿದರ್ ಬ್ಯಾಟಿಂಗ್ ಸೊಗಸಾಗಿತ್ತು. ಆಗೊಮ್ಮೆ ಈಗೊಮ್ಮೆ ಬೌಂಡರಿ, ಸಿಕ್ಸರ್ ಸಿಡಿಸುತ್ತ ರಾಜಸ್ಥಾನ ಬೌಲರ್‌ಗಳಿಗೆ ಭಯ ಹುಟ್ಟಿಸಿದರು. ಆದರೆ ಇನ್ನೊಂದೆಡೆ ವಿಕೆಟ್ ಕಳೆದುಕೊಂಡು ಸಾಗಿದ ಆರ್​ಸಿಬಿ ತಂಡಕ್ಕೆ ಮ್ಯಾಕ್ಸ್‌ವೆಲ್ 24 ರನ್ (13 ಎಸೆತ, 1 ಬೌಂಡರಿ, 3 ಸಿಕ್ಸ್) ಬಾರಿಸಿ ಮಧ್ಯಮ ಕ್ರಮಾಂಕದಲ್ಲಿ ವೇಗವಾಗಿ ರನ್ ಹೆಚ್ಚಿಸುವ ಸಾಹಸಕ್ಕೆ ಕೈಹಾಕಿ ವಿಕೆಟ್ ಕೈಚೆಲ್ಲಿಕೊಂಡರು.

ಅಂತಿಮವಾಗಿ ಪಾಟಿದರ್ ಕೂಡ 58 ರನ್ (42 ಎಸೆತ, 4 ಬೌಂಡರಿ, 3 ಸಿಕ್ಸ್) ಚಚ್ಚಿ ಬಟ್ಲರ್ ಹಿಡಿದ ಅದ್ಭುತ ಕ್ಯಾಚ್‍ಗೆ ಬಲಿಯಾದರು. ಕೊನೆಯಲ್ಲಿ ಶಹಬಾಜ್ ಅಹಮದ್ ಅಜೇಯ 12 ರನ್ (8 ಎಸೆತ, 1 ಬೌಂಡರಿ, 1 ಸಿಕ್ಸ್) ನೆರವಿನಿಂದ ಆರ್‌ಸಿಬಿ ತಂಡ 8 ವಿಕೆಟ್ ಕಳೆದುಕೊಂಡು 157 ರನ್ ಬಾರಿಸಿತು.

ಪ್ರಸಿದ್ಧ್ ಕೃಷ್ಣ, ಮೆಕಾಯ್ ಮಾರಕ ದಾಳಿ
ಆರ್‌ಸಿಬಿ ತಂಡದ ಅಗ್ರ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ಗಳಾದ ಕೊಹ್ಲಿ, ದಿನೇಶ್ ಕಾರ್ತಿಕ್ ಮತ್ತು ಹಸರಂಗ ವಿಕೆಟ್‍ನ್ನು ಪ್ರಸಿದ್ಧ್ ಕೃಷ್ಣ ಕಿತ್ತರೆ, ಡುಪ್ಲೆಸಿಸ್, ಮಹಿಪಾಲ್ ಲೋಮ್ರೋರ್ ಮತ್ತು ಹರ್ಷಲ್ ಪಟೇಲ್ ವಿಕೆಟ್ ಕಿತ್ತು ಮೆಕಾಯ್ ಆರ್‌ಸಿಬಿ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಇವರಿಬ್ಬರೂ ತಲಾ 3 ವಿಕೆಟ್ ಕಿತ್ತರೆ, ಉಳಿದ 2 ವಿಕೆಟ್‍ಗಳನ್ನು ಬೌಲ್ಟ್ ಮತ್ತು ಅಶ್ವಿನ್ ತಲಾ ಒಂದೊಂದರಂತೆ ಹಂಚಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *