ರಾಜಸ್ಥಾನಕ್ಕೆ ‘KGF’ ಜೊತೆ ರಜತ್ ಭಯ – ಗೆದ್ದವರು ಫೈನಲ್‍ಗೆ ಸೋತವರು ಮನೆಗೆ

Public TV
2 Min Read

ಅಹಮದಾಬಾದ್: 15ನೇ ಆವೃತ್ತಿ ಐಪಿಎಲ್‍ನ ಅಂತಿಮ 2 ಪಂದ್ಯಗಳಿಗೆ ಅಹಮದಾಬಾದ್ ಸಜ್ಜಾಗಿದೆ. ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ನಾಳೆ ನಡೆಯಲಿರುವ 2ನೇ ಕ್ವಾಲಿಫೈಯರ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಮೇ 27 ಶುಕ್ರವಾರ ಅಹಮದಾಬಾದ್‍ನಲ್ಲಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೊಟೇರಾದಲ್ಲಿ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯ ಸೋತವರು ಮತ್ತು ಗೆದ್ದವರ ನಡುವಿನ ಕಾದಾಟವಾಗಲಿದೆ. ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ರಾಜಸ್ಥಾನ ತಂಡ ಸೋತು ಎರಡನೇ ಕ್ವಾಲಿಫೈಯರ್ ಆಡುವಂತಾದರೆ, ಇತ್ತ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ವಿರುದ್ಧ ಗೆದ್ದ ಆರ್‌ಸಿಬಿ ತಂಡ ಎರಡನೇ ಕ್ವಾಲಿಫೈಯರ್ ಗೆದ್ದು ಫೈನಲ್‍ಗೆ ಎಂಟ್ರಿಕೊಡುವ ಪ್ಲಾನ್‍ನಲ್ಲಿದೆ. ಇದೀಗ ರಾಜಸ್ಥಾನ ತಂಡಕ್ಕೆ ಕಳೆದ ಪಂದ್ಯದ ಹೀರೋ ರಜತ್ ಪಾಟಿದರ್ ಭಯ ಶುರುವಾಗಿದೆ. ಇದನ್ನೂ ಓದಿ: ವನಿಂದು ಹಸರಂಗ ಕ್ಯಾಚ್ ವಿವಾದ – ಐಸಿಸಿ ನಿಯಮವೇನು?

ಆರ್‌ಸಿಬಿ ತಂಡದಲ್ಲಿ ಕೆ-ಕೊಹ್ಲಿ, ಜಿ-ಗ್ಲೇನ್ ಮ್ಯಾಕ್ಸ್‌ವೆಲ್, ಎಫ್-ಫಾಫ್ ಡುಪ್ಲೆಸಿಸ್ ಸ್ಟಾರ್ ಆಟಗಾರರು. ಇವರಲ್ಲಿ ಒಬ್ಬ ಆಟಗಾರ ಸಿಡಿದರೆ ಎದುರಾಳಿ ತಂಡಕ್ಕೆ ಉಳಿಗಾಲವಿಲ್ಲ. ಇದೀಗ ಇವರೊಂದಿಗೆ ಇನ್ನೋರ್ವ ಆಟಗಾರ ರಜತ್ ಪಾಟಿದರ್ ಐಪಿಎಲ್‍ನಲ್ಲಿ ಚೊಚ್ಚಲ ಶತಕ ಸಿಡಿಸಿ ಎದುರಾಳಿ ತಂಡಕ್ಕೆ ಭಯ ಹುಟ್ಟಿಸಿದ್ದಾರೆ. ಹಾಗಾಗಿ ರಾಜಸ್ಥಾನ ತಂಡ ಕೊಹ್ಲಿ, ಮಾಕ್ಸ್‌ವೆಲ್‌, ಪ್ಲೆಸಿಸ್ ಜೊತೆ ಪಾಟಿದರ್‌ ಕಡಿವಾಣ ಹಾಕಲು ಪ್ಲಾನ್ ಮಾಡಿಕೊಳ್ಳಬೇಕಾಗಿದೆ. ಇವರೊಂದಿಗೆ ಸ್ಫೋಟಕ ಆಟದ ಮೂಲಕ ಕಂಟಕವಾಗುವ ದಿನೇಶ್ ಕಾರ್ತಿಕ್ ಮೇಲೂ ರಾಜಸ್ಥಾನ ನಿಗಾ ಇಡಬೇಕಾಗಿದೆ. ಬೌಲಿಂಗ್‍ನಲ್ಲಿ ಹರ್ಷಲ್ ಪಟೇಲ್, ಹ್ಯಾಜಲ್‍ವುಡ್, ಹಸರಂಗ ಉತ್ತಮ ಲಯದಲ್ಲಿದ್ದು, ಸಿರಾಜ್ ಕೂಡ ಭರವಸೆಯ ಆಟಗಾರ. ಇದನ್ನೂ ಓದಿ: ಆರ್​ಸಿಬಿಯಲ್ಲಿ K.G.F ಸ್ಟಾರ್ಸ್

ಇತ್ತ ರಾಜಸ್ಥಾನ ತಂಡ ಕೂಡ ಬಲಿಷ್ಠ ಬ್ಯಾಟಿಂಗ್ ಲೈನ್‍ಅಪ್ ಹೊಂದಿದ್ದು, ಯಶಸ್ವಿ ಜೈಸ್ವಾಲ್, ಬಟ್ಲರ್, ಸಂಜು ಸ್ಯಾಮ್ಸನ್, ಹೆಟ್ಮೆಯರ್ ಅವರಂತ ಹಿಟ್ಟರ್‌ಗಳ ದಂಡಿದೆ. ಬೌಲಿಂಗ್‍ನಲ್ಲಿ ಆರ್‌ಸಿಬಿಯ ಮಾಜಿ ಆಟಗಾರ ಚಹಲ್, ಅಶ್ವಿನ್, ಬೌಲ್ಟ್, ಪ್ರಸಿದ್ಧ್ ಕೃಷ್ಣ ಘಾತಕವಾಗಿ ದಾಳಿ ನಡೆಸುವ ಸಾಮರ್ಥ್ಯ ಇರುವ ಆಟಗಾರರಾಗಿದ್ದಾರೆ. ಹಾಗಾಗಿ ರಾಜಸ್ಥಾನ ತಂಡವನ್ನು ಕೂಡ ಹಗುರವಾಗಿ ಪರಿಗಣಿಸುವಂತಿಲ್ಲ. ಇದನ್ನೂ ಓದಿ: ಆರ್‌ಸಿಬಿಗಾಗಿ ಮದುವೆಯನ್ನೇ ಮುಂದೂಡಿದ್ದ ರಜತ್ ಪಾಟಿದಾರ್

ಲೀಗ್‍ನಿಂದಲೇ ಹೊರ ಬೀಳುವ ಸ್ಥಿತಿಯಲ್ಲಿದ್ದ ಬೆಂಗಳೂರು ತಂಡ ಅದೃಷ್ಟದಾಟದ ಮೂಲಕ ಪ್ಲೇ ಆಫ್‍ಗೆ ಪ್ರವೇಶ ಪಡೆದರೆ, ಇತ್ತ ಲೀಗ್‍ನ ಕೊನೆಯ ಪಂದ್ಯಗಳಲ್ಲಿ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಮೇಲೆರಿದ ರಾಜಸ್ಥಾನ ನಡುವಿನ ಪಂದ್ಯಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಾರೆ. ಅದರಲ್ಲೂ ಆರ್‌ಸಿಬಿ ಅಭಿಮಾನಿಗಳು ರಾಜಸ್ಥಾನ ವಿರುದ್ಧ ಗೆದ್ದರೇ ಬಹುತೇಕ ಈ ಸಲ ಕಪ್ ನಮ್ದೇ ಎಂಬ ಉತ್ಸಾಹದಲ್ಲಿದ್ದಾರೆ.

ಎರಡು ತಂಡಗಳು ಕೂಡ ಫೈನಲ್ ಪಂದ್ಯವಾಡಲು ಕ್ವಾಲಿಫೈಯರ್ ಪಂದ್ಯ ಗೆಲ್ಲಲೇ ಬೇಕು. ಹಾಗಾಗಿ ಎರಡು ತಂಡಗಳ ಮಧ್ಯೆ ರೋಚಕ ಕಾದಾಟ ಕಾಣಸಿಗುವುದಂತು ಕಂಡಿತಾ. ನಾಳೆ ಗೆದ್ದ ತಂಡ ಮೇ 29 ರಂದು ಗುಜರಾತ್ ಜೊತೆ ಫೈನಲ್ ಪಂದ್ಯವಾಡಲು ತೇರ್ಗಡೆ ಹೊಂದಿದರೆ, ಸೋತ ತಂಡ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *