ಪಂದ್ಯವಾಡದೇ ಆರ್‌ಸಿಬಿ ಮನೆಗೆ ಬರುತ್ತಾ?

Public TV
2 Min Read

ಕೋಲ್ಕತ್ತಾ: ಐಪಿಎಲ್‍ನಲ್ಲಿ ಕಡೆಯ ರೋಚಕ ಪಂದ್ಯಗಳಿಗೆ ಕೋಲ್ಕತ್ತಾ ಸಜ್ಜಾಗುತ್ತಿದೆ. ಈಗಾಗಲೇ 4 ತಂಡಗಳು ಪ್ಲೇ ಆಫ್ ಪಂದ್ಯಗಳನ್ನು ಆಡಲು ತಯಾರಿ ನಡೆಸುತ್ತಿವೆ. ಈ ನಡುವೆ ಪ್ಲೇ ಆಫ್ ಪ್ರವೇಶಿಸಿರುವ ಆರ್‌ಸಿಬಿ ಪಂದ್ಯವಾಡದೇ ಮನೆಗೆ ಬರುತ್ತಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡುತ್ತಿದೆ.

ಹೌದು ಇದಕ್ಕೆಲ್ಲ ಕಾರಣ ಕೋಲ್ಕತ್ತಾದಲ್ಲಿ ಸುರಿಯುತ್ತಿರುವ ಮಳೆ. ಕೋಲ್ಕತ್ತಾದಲ್ಲಿ ಪ್ಲೇ ಆಫ್ ಪಂದ್ಯಗಳು ನಡೆಯುತ್ತಿದ್ದು, ಕೋಲ್ಕತ್ತಾದಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿದೆ. ಇದೀಗ ಪ್ಲೇ ಆಫ್‍ನ ಎರಡು ಪಂದ್ಯಗಳು ಕೋಲ್ಕತ್ತಾದಲ್ಲಿ ನಡೆಯಲಿದೆ. ಕೋಲ್ಕತ್ತಾದಲ್ಲಿ ಇನ್ನೆರಡು ದಿನ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗಾಗಿ ಪ್ಲೇ ಆಫ್ ಪಂದ್ಯಗಳು ಸರಿಯಾಗಿ ನಡೆಯುವುದು ಅನುಮಾನವಾಗಿದೆ. ಇದನ್ನೂ ಓದಿ: ಪ್ಲೇ ಆಫ್ ಪಂದ್ಯಗಳಿಗೆ ಮಳೆ ಕಾಟ – ಹೀಗೆ ನಿರ್ಧಾರವಾಗಲಿದೆ ಫಲಿತಾಂಶ?

ಮೊದಲನೇ ಕ್ವಾಲಿಫೈಯರ್ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಮೇ 24 ಮಂಗಳವಾರ ನಡೆಯಲಿದೆ. ಎಲಿಮಿನೇಟರ್ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮೇ 25 ಬುಧವಾರದಂದು ನಡೆಯಲಿದೆ. ಒಂದು ವೇಳೆ ಈ ಪಂದ್ಯಗಳು ಮಳೆಯಿಂದಾಗಿ ಸೂಪರ್ ಓವರ್ ಮೂಲಕವೂ ಫಲಿತಾಂಶ ಕಾಣದೇ ರದ್ದಾದರೆ ನೆಟ್‍ ರನ್‌ರೇಟ್‌ನಲ್ಲಿ ಮುಂದಿರುವ ತಂಡ 2ನೇ ಎಲಿಮಿನೇಟರ್‌ಗೆ ತೇರ್ಗಡೆ ಆಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಎಲಿಮಿನೇಟರ್ ಪಂದ್ಯವಾಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಲಕ್ನೋ ತಂಡಕ್ಕೆ ರನ್‍ರೇಟ್ ವರವಾಗುವ ಸಾಧ್ಯತೆ ಹೆಚ್ಚಿದೆ.

ಇದೀಗ ಅಂಕಪಟ್ಟಿಯನ್ನು ಗಮನಿಸಿದಾಗ ಮೊದಲ ಸ್ಥಾನದಲ್ಲಿರುವ ಗುಜರಾತ್ ತಂಡ +0.316 ನೆಟ್‌ ರನ್‍ರೇಟ್ ಹೊಂದಿದ್ದರೆ, 2ನೇ ಸ್ಥಾನದಲ್ಲಿರುವ ರಾಜಸ್ಥಾನ +0298, 3ನೇ ಸ್ಥಾನದಲ್ಲಿರುವ ಲಕ್ನೋ +0.251 ಮತ್ತು ಬೆಂಗಳೂರು -0.253 ರನ್‍ರೇಟ್ ಹೊಂದಿದೆ. ಇದನ್ನು ಗಮನಿಸಿದಾಗ ಅದೃಷ್ಟದಾಟದ ಮೂಲಕ ಪ್ಲೇ ಆಫ್ ಪ್ರವೇಶಿಸಿರುವ ಆರ್‌ಸಿಬಿ ತಂಡಕ್ಕೆ ಪ್ಲೇ ಆಫ್‍ನಲ್ಲಿ ರನ್‍ರೇಟ್ ಮುಳ್ಳಾಗುವ ಸಾಧ್ಯತೆ ಕಂಡುಬರುತ್ತಿದೆ. ಇದನ್ನೂ ಓದಿ: ಆಫ್ರಿಕಾ ಸರಣಿಗೆ ತಂಡ ಪ್ರಕಟ – ಟಿ20 ತಂಡಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಕ್ಯಾಪ್ಟನ್, ಡಿಕೆ ವಾಪಸ್‌, ಉಮ್ರಾನ್ ಮಲಿಕ್‍ಗೆ ಸ್ಥಾನ

ಆರ್‌ಸಿಬಿ ಮತ್ತು ಲಕ್ನೋ ನಡುವಿನ ಪಂದ್ಯಕ್ಕೆ ಮಳೆ ಅಡಚಣೆ ನೀಡಿ ಒಂದೂ ಎಸೆತ ಕಾಣದೇ ಪಂದ್ಯ ರದ್ದಾದರೆ, ನೆಟ್‍  ರನ್‍ರೇಟ್‍ನಲ್ಲಿ ಮುಂದಿರುವ ತಂಡ 2ನೇ ಕ್ವಾಲಿಫೈಯರ್‌ಗೆ ತೇರ್ಗಡೆ ಹೊಂದಲಿದೆ. ಇದೀಗ ನೆಟ್‍  ರನ್‍ರೇಟ್‍ನಲ್ಲಿ ಆರ್‌ಸಿಬಿಗಿಂತ ಲಕ್ನೋ ತಂಡ ಮುಂದಿದೆ. ಇದು ಪಂದ್ಯಕ್ಕೂ ಮುನ್ನ ಲಕ್ನೋ ಮೇಲುಗೈ ಸಾಧಿಸಿರುವಂತೆ ಕಂಡುಬಂದರೆ, ಇತ್ತ ಆರ್‌ಸಿಬಿ ಪಂದ್ಯವಾಡದೇ ಮನೆಗೆ ಹೆಜ್ಜೆ ಇಡುವ ದಾರಿಯಾಗಿದೆ.

IPL 2022 GUJARATH VS RCB 05

ಈ ರೀತಿ ಆಗದಿರಲಿ ಪ್ಲೇ ಆಫ್ ಪಂದ್ಯಗಳು ಸರಿಯಾಗಿ ನಡೆದು ಫಲಿತಾಂಶ ಕಾಣುವಂತಾಗಲಿ. ಆರ್‌ಸಿಬಿ ಫೈನಲ್‍ಗೇರಿ ಕಪ್ ಗೆಲ್ಲಲಿ ಎಂದು ಆರ್‌ಸಿಬಿ ಅಭಿಮಾನಿಗಳು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *