ಐಪಿಎಲ್ 13ನೇ ಆವೃತ್ತಿ ಆರಂಭಕ್ಕೂ ಮುನ್ನವೇ ಕೆಕೆಆರ್‌ಗೆ ಶಾಕ್ ಕೊಟ್ಟ ಬಿಸಿಸಿಐ

Public TV
2 Min Read

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿ ಆರಂಭಕ್ಕೂ ಮುನ್ನವೇ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಬಿಸಿಸಿಐ ಶಾಕ್ ನೀಡಿದೆ.

ಈ ಬಾರಿಯ ಹರಾಜಿನಲ್ಲಿ ಕೆಕೆಆರ್ ತಂಡ ಸೇರಿದ್ದ ಅತ್ಯಂತ ಹಿರಿಯ ಆಟಗಾರ ಪ್ರವೀಣ್ ತಾಂಬೆ (48) ಅವರನ್ನು ಅನರ್ಹಗೊಳಿಸಲಾಗಿದೆ. ಪ್ರವೀಣ್ ತಾಂಬೆ ಅವರನ್ನು ಕೆಕೆಆರ್ ಹರಾಜಿನಲ್ಲಿ ಮೂಲ ಬೆಲೆ 20 ಲಕ್ಷ ರೂ. ಖರೀದಿಸಿತ್ತು. ಇದನ್ನೂ ಓದಿ: ‘ಈ ಸಲ ಕಪ್ ನಮ್ದೆ’- ಮಾದಪ್ಪನ ಮೊರೆ ಹೋದ ಆರ್‌ಸಿಬಿ ಅಭಿಮಾನಿ

2018ರಲ್ಲಿ ನಿವೃತ್ತಿ ಪಡೆದಿದ್ದ ತಾಂಬೆ ಸಿಂಥಿನ್ ಟಿ-10 ಟೂರ್ನಿಯಲ್ಲಿ ಆಡಿದ್ದರು. ಇದಲ್ಲದೆ, ಅವರು ಕೆಲವು ವಿದೇಶಿ ಟಿ20 ಲೀಗ್‍ಗಳನ್ನು ಸಹ ಆಡಿದ್ದರು. ಇದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ತಾಂಬೆ ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಂಡಿದ್ದರು. ಬಿಸಿಸಿಐ ನಿಯಮಗಳ ಅನ್ವಯ ಯಾವುದೇ ಕ್ರಿಕೆಟ್ ಆಟಗಾರ ಟೀಂ ಇಂಡಿಯಾ ಅಥವಾ ಐಪಿಎಲ್ ಆಡಬೇಕು ಎಂದರೆ ವಿದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸುವಂತಿಲ್ಲ.

ಬಲಗೈ ಸ್ಪಿನ್ನರ್ ತಂಬೆ ಕೊನೆಯ ಬಾರಿಗೆ 2016ರಲ್ಲಿ ಐಪಿಎಲ್ ಆಡಿದ್ದರು. ತಾಂಬೆ ವಿರುದ್ಧ ಕ್ರಮ ಕೈಗೊಂಡ ಬಗ್ಗೆ ಕೆಕೆಆರ್‌ ಫ್ರ್ಯಾಂಚೈಸ್ ಗೆ ತಿಳಿಸಲಾಗಿದೆ. ಐಪಿಎಲ್‍ನಲ್ಲಿ ತಾಂಬೆ ಅವರಿಗೆ ಆಡಲು ಅನುಮತಿ ನೀಡುವುದಿಲ್ಲ. ಅವರೊಬ್ಬರಿಗೆ ಆಡಲು ಅವಕಾಶ ನೀಡಿದರೆ ಉಳಿದವರಿಗೂ ಅನುಮತಿ ನೀಡಬೇಕಾಗುತ್ತದೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

ಕೆಕೆಆರ್ ವಿರುದ್ಧ ತಾಂಬೆ ಹ್ಯಾಟ್ರಿಕ್:
ಐಪಿಎಲ್ 7ನೇ ಆವೃತ್ತಿಯಲ್ಲಿ ಕೆಕೆಆರ್ ವಿರುದ್ಧ ತಾಂಬೆ ಹ್ಯಾಟ್ರಿಕ್ ಸಾಧನೆ ಪಡೆದಿದ್ದರು. ಪಂದ್ಯದ 16ನೇ ಓವರಿನ ಮೊದಲ ಎಸೆತದಲ್ಲಿ ತಾಂಬೆ ವೈಡ್ ಬಾಲ್ ಎಸೆದಿದ್ದರು, ಆಗ ವಿಕೆಟ್‍ ಕೀಪರ್ ಮನೀಶ್ ಪಾಂಡೆ ಬ್ಯಾಟ್ಸ್‌‌ಮನ್‌‌ನನ್ನು ಸ್ಟಂಪ್ ಮಾಡಿದ್ದರು. ಅವರ ಮುಂದಿನ ಎಸೆತದಲ್ಲಿ ತಾಂಬೆ ಯೂಸುಫ್ ಪಠಾಣ್ ಅವರನ್ನು ಪೆವಿಲಿಯನ್‍ಗೆ ಕಳುಹಿಸಿದ್ದರು. ಬಳಿಕ ರಿಯಾನ್ ಟೆನ್ ಡಾಸ್ಚೇಟ್ ಅವರು ಎಲ್‍ಬಿಡಬ್ಲ್ಯೂಗೆ ಒಳಗಾಗಿ ವಿಕೆಟ್ ಕಳೆದುಕೊಂಡಿದ್ದರು.

ತಾಂಬೆ 2018ರಲ್ಲಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ)ಗೆ ರಾಜೀನಾಮೆ ನೀಡಿ, ನಿವೃತ್ತಿ ಘೋಷಿಸಿದ್ದರು. ಆದರೆ ವಿದೇಶಿ ಲೀಗ್ ಆಡಿದ ನಂತರ, ಅವರು ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಳ್ಳುವ ಮೂಲಕ ಮುಂಬೈ ಲೀಗ್ ಆಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *