ಯುವರಾಜ್ ಸಿಂಗ್ ಮೇಲೆ ಅನುಕಂಪ ತೋರಿದ ಮುಂಬೈ ಇಂಡಿಯನ್ಸ್

Public TV
2 Min Read

– ರೋಹಿತ್‍ಗೆ ವಿಶೇಷ ಸಂದೇಶ ರವಾನಿಸಿದ ಯುವಿ

ಜೈಪುರ: ಟೀಂ ಇಂಡಿಯಾದ ಸ್ಫೋಟಕ ಆಟಗಾರ, ವಿಶ್ವಕಪ್ ಹೀರೋ ಎಂದೇ ಖ್ಯಾತಿ ಪಡೆದಿದ್ದ ಯುರಾಜ್ ಸಿಂಗ್‍ಗೆ ಅವರಿಗೆ ಈ ಬಾರಿ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಜೀವದಾನ ನೀಡಿದ್ದು, ಯುವಿ ಮೂಲ ಬೆಲೆ 1 ಕೋಟಿ ರೂ. ಗೆ ಖರೀದಿ ಮಾಡಿದೆ.

ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯುವರಾಜ್ ರನ್ನು ಖರೀದಿ ಮಾಡಲು ಫ್ರಾಂಚೈಸಿಗಳು ಹಿಂದೇಟು ಹಾಕಿದ್ದರು. ಮೊದಲ ಸುತ್ತಿನಲ್ಲಿ ಯುವಿರನ್ನು ಖರೀದಿ ಮಾಡಲು ಯಾವ ತಂಡಗಳು ಮುಂದೆ ಬರಲಿಲ್ಲ. ಬಳಿಕ 2ನೇ ಸುತ್ತಿನಲ್ಲಿ ಮುಂಬೈ ಖರೀದಿ ಮಾಡಿತು. ಈಗಾಗಲೇ 2019ರ ವಿಶ್ವಕಪ್ ತಂಡಕ್ಕೆ ಕಮ್‍ಬ್ಯಾಕ್ ಮಾಡುವ ಸಿದ್ಧತೆಯಲ್ಲಿ ಇರುವ ಯುವಿ, ಈ ಬಾರಿಯ ಐಪಿಎಲ್ ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಒತ್ತಡದಲ್ಲಿದ್ದಾರೆ.

ಇತ್ತ ಮುಂಬೈ ತಂಡ ಯುವಿರನ್ನು ಆಯ್ಕೆ ಮಾಡುತ್ತಿದಂತೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಯುವರಾಜ್ ಸಿಂಗ್ ಮುಂಬೈ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ನಾಯಕ ರೋಹಿತ್ ಶರ್ಮಾಗೆ ವಿಶೇಷ ಸಂದೇಶ ನೀಡಿರುವ ಯುವಿ, ಮುಂದಿನ ಟೂರ್ನಿಗಾಗಿ ಕಾಯುತ್ತಿದ್ದು, ಬಹು ಬೇಗ ಭೇಟಿ ಆಗೋಣ ಎಂದು ಶರ್ಮಾಗೆ ತಿಳಿಸಿದ್ದಾರೆ.

ಐಪಿಎಲ್ ಆರಂಭದಲ್ಲಿ ಬಹು ಬೇಡಿಕೆಯ ಆಟಗಾರರಾಗಿದ್ದ ಯುವಿ ಸತತ ವೈಫಲ್ಯ ಆನುಭವಿಸಿದ ಕಾರಣ ಬೇಡಿಕೆ ಕಳೆದುಕೊಂಡರು. ಮಹಾಮಾರಿ ಕ್ಯಾನ್ಸರ್ ನಿಂದ ಗೆದ್ದು ಬಂದ ಬಳಿಕ ಯುವಿ ಮತ್ತೆ ಕ್ರಿಕೆಟ್‍ನಲ್ಲಿ ತಮ್ಮ ಹಿಂದಿನ ಲಯ ಕಂಡುಕೊಳ್ಳಲು ಸಾಕಷ್ಟು ಅಭ್ಯಾಸ ನಡೆಸಿದ್ದರು.

ತಮ್ಮ ವೃತ್ತಿ ಜೀವನದ ಅತ್ಯುನ್ನತ್ತ ಶಿಖರದಲ್ಲಿರುವಾಗ ಯುವಿ 2014 ರಲ್ಲಿ ಬರೋಬ್ಬರಿ 16 ಕೋಟಿ ರೂ. ಹಾಗೂ 2015ರಲ್ಲಿ 16 ಕೋಟಿ ರೂ. ಗಳಿಗೆ ಹರಾಜುಗೊಳ್ಳುವ ಮೂಲಕ ದುಬಾರಿ ಆಟಗಾರನೆಂಬ ದಾಖಲೆ ಬರೆದಿದ್ದರು. ಆದರೆ ಆ ಬಳಿಕ 2017, 2018, 2019 ರಲ್ಲಿ ಕ್ರಮವಾಗಿ 7, 2, 1 ಕೋಟಿ ರೂ.ಗೆ ಹರಾಜು ಆಗಿದ್ದರು.

ಯುವಿ ಟೀಂ ಇಂಡಿಯಾ ಪರ 2017 ಜೂನ್‍ನಲ್ಲಿ ಅಂತಿಮ ಪಂದ್ಯವಾಡಿದ್ದರು. ಕಳೆದ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರು. ಆದರೆ ಟೂರ್ನಿಯಲ್ಲಿ 8 ಇನ್ನಿಂಗ್ಸ್ ಗಳಿಂದ ಕೇವಲ 65 ರನ್ ಮಾತ್ರ ಗಳಿಸಿ ನಿರಾಸೆ ಮೂಡಿಸಿದ್ದರು. ಉಳಿದಂತೆ ಮುಂಬೈ ಇಂಡಿಯನ್ಸ್ ತಂಡ ಶ್ರೀಲಂಕಾದ ಹಿರಿಯ ಅನುಭವಿ ಆಟಗಾರ ಲಸಿತ್ ಮಾಲಿಂಗರನ್ನು ಖರೀದಿ ಮಾಡಿದ್ದು, ಮತ್ತೊಮ್ಮೆ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *