ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ಔಟ್‌- ಇನ್ನು ಮುಂದೆ ವಿಶ್ವದೆಲ್ಲೆಡೆ ವಂಚಕ ಮೆಹುಲ್‌ ಚೋಕ್ಸಿ ಸಂಚರಿಸಬಹುದು

Public TV
3 Min Read

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ 13 ಸಾವಿರ ಕೋಟಿ ರೂ. ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ (Mehul Choksi) ಹೆಸರನ್ನು ಇಂಟರ್‌ಪೋಲ್‌ (Interpol) ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ತೆಗೆದು ಹಾಕಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮೆಹುಲ್ ಚೋಕ್ಸಿ ಪರ ವಕೀಲ ವಿಜಯ್ ಅಗರ್ವಾಲ್, ನಮ್ಮ ಕಾನೂನು ತಂಡದ ಪ್ರಯತ್ನಗಳಿಂದಾಗಿ ನನ್ನ ಕಕ್ಷಿದಾರರ ಮೇಲಿರುವ ಆರೋಪ ಮತ್ತು ಅವರ ಮೇಲೆ ಹೇರಿದ ಹಲವಾರು ಷರತ್ತುಗಳನ್ನು ಅಂತರರಾಷ್ಟ್ರೀಯ ಸಮುದಾಯವು ಅನುಮೋದಿಸದ ಕಾರಣ ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ಇಂಟರ್‌ಪೋಲ್‌ ತೆಗೆದು ಹಾಕಿದೆ ಎಂದು ತಿಳಿಸಿದ್ದಾರೆ.

ರೆಡ್‌ ಕಾರ್ನರ್‌ ನೋಟಿಸ್‌ (Red Corner Notice) ಪಟ್ಟಿಯಿಂದ ತಮ್ಮ ಹೆಸರು ತೆಗೆದು ಹಾಕುವಂತೆ ಚೋಕ್ಸಿ ಪರ ವಕೀಲರು ಫ್ರಾನ್ಸ್‌ನ ಲಿಯಾನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆಗೆ ಮನವಿ ಸಲ್ಲಿಸಿದ್ದರು. ಅದರ ಆಧಾರದಲ್ಲಿ ಅವರ ಹೆಸರನ್ನು ಡೇಟಾಬೇಸ್‌ನಿಂದ ಕೈಬಿಡಲಾಗಿದೆ. ಇಂಟರ್‌ಪೋಲ್‌ ನಿರ್ಧಾರದ ಬಗ್ಗೆ ಕೇಂದ್ರೀಯ ತನಿಖಾ ದಳ (CBI) ಇಲ್ಲಿಯರೆಗೆ ಯಾವುದೇ ಪ್ರತಿಕ್ರಿಯೆನೀಡಿಲ್ಲ.

ಮುಂದೇನು?
ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ ಆರೋಪಿಗಳು ಯಾವುದೇ ದೇಶದಲ್ಲಿ ಅಡಗಿದ್ದರೂ ಬಂಧನ ಮಾಡಬಹುದು. ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ಹೆಸರನ್ನು ತೆಗೆದ ಹಿನ್ನೆಲೆಯಲ್ಲಿ ಭಾರತವನ್ನು ಹೊರತುಪಡಿಸಿ ಮೆಹುಲ್ ಚೋಕ್ಸಿ ಯಾವುದೇ ದೇಶಕ್ಕೆ ಮುಕ್ತವಾಗಿ ಪ್ರಯಾಣಿಸಬಹುದು.

ಚೋಕ್ಸಿ ವಿರುದ್ಧ ಆರೋಪ ಏನು?
ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರೆಡ್ ಕಾರ್ನರ್ ನೋಟಿಸ್ (Red Corner Notice) ಜಾರಿಗೊಳಿಸುವಂತೆ ಇಂಟರ್ ಪೋಲ್‍ಗೆ ಮನವಿ ಮಾಡಿಕೊಂಡಿತ್ತು.  ಇದನ್ನೂ ಓದಿ: ಭಾರತದಲ್ಲಿ ವಂಚನೆ ಮಾಡಿದವರು ಕೆರಿಬಿಯನ್ ದ್ವೀಪಕ್ಕೆ ಓಡುವುದು ಯಾಕೆ?

ಅತಿ ಹೆಚ್ಚು ಸಾಲ ಮನ್ನಾ ಮಾಡಿಸಿಕೊಂಡ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮೆಹುಲ್ ಚೋಕ್ಸಿ ಹೆಸರಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ಸಾಲ ಮರುಪಾವತಿಸದೆ 2018ರಿಂದ ಬಾರ್ಬಡೋಸ್‍ನ ಆಂಟಿಗುವಾದಲ್ಲಿ ಮೆಹುಲ್ ಚೋಕ್ಸಿ ತಲೆಮರೆಸಿಕೊಂಡಿದ್ದು ಭಾರತಕ್ಕೆ ಕರೆ ತರಲು ಸರ್ಕಾರ ಅಲ್ಲಿನ ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಸುತ್ತಿದೆ.

ಏನಿದು ರೆಡ್‌ ಕಾರ್ನರ್‌ನೋಟಿಸ್‌?
ಇಂಟರ್‌ಪೋಲ್‌ ತನ್ನ 192 ಸದಸ್ಯ ರಾಷ್ಟ್ರಗಳಿಗೆ ಆರೋಪಿ ತಮ್ಮ ದೇಶದಲ್ಲಿ ತಲೆಮರೆಸಿಕೊಂಡಿದ್ದಲ್ಲಿ ಅವರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಸೂಚಿಸುವ ಆದೇಶವೇ ರೆಡ್‌ ಕಾರ್ನರ್‌ ನೋಟಿಸ್‌. ಚಾರ್ಜ್‌ಶೀಟ್‌ ಸಲ್ಲಿಕೆಯಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪರಾರಿಯಾಗಿರುವ ಆರೋಪಿಗಳ ಇತರ ದೇಶಗಳಿಗೆ ಎಚ್ಚರಿಸುವುದು ರೆಡ್ ಕಾರ್ನರ್ ನೋಟಿಸ್‌ ನೀಡುವುದರ ಉದ್ದೇಶ.

ಈ ನೋಟಿಸ್‌ ಜಾರಿಯಾದ ಬಳಿಕ ಆರೋಪಿಗಳು ಅಂತಾರಾಷ್ಟ್ರೀಯ ಗಡಿಗಳನ್ನು ದಾಟಿ ಪ್ರಯಾಣಿಸುವುದು ಅಸಾಧ್ಯವಾಗಲಿದೆ. ಬಂಧನದ ಬಳಿಕ ಆ ದೇಶದಿಂದ ಆರೋಪಿಗಳನ್ನು ಇನ್ನೊಂದು ದೇಶಕ್ಕೆ ಕಳುಹಿಸಲಾಗುತ್ತದೆ.

ಪೌರತ್ವ ಹೇಗೆ ಸಿಗುತ್ತದೆ?
ಕೆರಿಬಿಯನ್ ದ್ವೀಪ ರಾಷ್ಟಗಳ ಪೌರತ್ವ ಪಡೆಯುವುದು ಅತ್ಯಂತ ಸರಳ ಪ್ರಕ್ರಿಯೆಯಾಗಿದೆ. ಈ ರಾಷ್ಟ್ರಗಳ ಪೌರತ್ವ ಪಡೆಯಲು ಅಲ್ಲಿನ ಶುಗರ್ ಇಂಡಸ್ಟ್ರಿ ಡೈವರ್ಸಿಫಿಕೇಷನ್ ಫೌಂಡೇಶನ್‍ಗೆ 1.6 ಕೋಟಿ ರೂ. ದೇಣಿಗೆ ಅಥವಾ ಪೂರ್ವ ನಿಗದಿತ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ 2.8 ಕೋಟಿ ರೂ. ಹಣ ಹೂಡಿಕೆ ಮಾಡಿದರೆ ಆ ದೇಶದ ಪೌರತ್ವ ಸಿಗುತ್ತದೆ. ಆಂಟಿಗುವಾದಲ್ಲಿರುವ ಚೋಕ್ಸಿ ಭಾರತಕ್ಕೆ ಹಸ್ತಾಂತರ ಮಾಡಬೇಕಾದರೆ ಕಾನೂನು ಸಮರ ಮಾಡಬೇಕಾಗುತ್ತದೆ. ಅಲ್ಲಿನ ಕೋರ್ಟ್‌ ಭಾರತದ ವಾದವನ್ನು ಪುರಸ್ಕರಿಸಿದರೆ ಮಾತ್ರ ಚೋಕ್ಸಿಯನ್ನು ಮರಳಿ ದೇಶಕ್ಕೆ ಕರೆ ತರಬಹುದು.

Share This Article
Leave a Comment

Leave a Reply

Your email address will not be published. Required fields are marked *