ದೆಹಲಿ ಹಿಂಸಾಚಾರ – ಗುಪ್ತಚರ ಇಲಾಖೆ ಅಧಿಕಾರಿಯ ಶವ ಮೋರಿಯಲ್ಲಿ ಪತ್ತೆ

Public TV
1 Min Read

ನವದೆಹಲಿ: ಸಿಎಎ ಹಿಂಸಾಚಾರ ತಾರಕಕ್ಕೇರಿರುವಂತೆಯೇ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿ 26 ವರ್ಷದ ಅಂಕಿತ್ ಶರ್ಮಾ ಶವ ನಿಗೂಢ ರೀತಿಯಲ್ಲಿ ಚಾಂದ್‍ಬಾಗ್ ಪ್ರದೇಶದಲ್ಲಿ ಪತ್ತೆಯಾಗಿದೆ.

ಅಂಕಿತ್ ಶರ್ಮಾ 2017ನೇ ಬ್ಯಾಚ್‍ನ ಅಧಿಕಾರಿಯಾಗಿದ್ದು, ಪ್ರೊಬೇಷನ್‍ನಲ್ಲಿದ್ದರು. ಚಾಣಕ್ಯಪುರಿಯಲ್ಲಿ ಟ್ರೈನೀ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಶಾಂತಿ ಪಾಲನೆಗೆ ದೆಹಲಿ ರಸ್ತೆಗಿಳಿದ ಜೇಮ್ಸ್ ಬಾಂಡ್ ದೋವಲ್

ಚಾಂದ್‍ಬಾಗ್‍ನಲ್ಲೇ ಅಂಕಿತ್ ಶರ್ಮಾ ನಿವಾಸವಿದ್ದು, ಅಲ್ಲಿಯೇ ಮೋರಿಯಲ್ಲಿ ಶವ ಸಿಕ್ಕಿದೆ. ಸಾವಿಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ಆದರೆ, ಮೂಲಗಳ ಪ್ರಕಾರ ಕಲ್ಲುತೂರಾಟದಲ್ಲಿ ಅಂಕಿತ್ ಸಿಲುಕಿಕೊಂಡಿದ್ದರು ಎನ್ನಲಾಗಿದೆ. ಅಂಕಿತ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನು ಘರ್ಷಣೆಯಲ್ಲಿ ಮೃತಪಟ್ಟ ಗೋಕುಲ್‍ಪುರಿಯ ಹೆಡ್ ಕಾನ್ಸ್‌ಟೇಬಲ್ ರತನ್‍ಲಾಲ್ ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿದೆ. ಗುಂಡೇಟಿನಿಂದಲೇ ರತನ್‍ಲಾಲ್ ಮೃತಪಟ್ಟಿದ್ದು, ಯಾವುದೇ ಕಲ್ಲೇಟಿನಿಂದ ಸತ್ತಿಲ್ಲ ಅಂತ ವರದಿ ಹೇಳಿದೆ.

ದೆಹಲಿ ಪೊಲೀಸರು ಅಂತಿಮ ನಮನ ಸಲ್ಲಿಸಿದ್ದು, ಹುಟ್ಟೂರು ರಾಜಸ್ಥಾನಕ್ಕೆ ಪಾಥೀವ ಶರೀರ ಕೊಂಡೊಯ್ಯಲಾಗಿದೆ. ಆದ್ರೆ, ದೆಹಲಿ ಸರ್ಕಾರ ಹುತಾತ್ಮ ಅಂತ ಘೋಷಣೆ ಮಾಡುವವರೆಗೂ ಶವ ಸಂಸ್ಕಾರ ಮಾಡುವುದಿಲ್ಲ ಅಂತ ಕುಟುಂಬಸ್ಥರು ಪಟ್ಟು ಹಿಡಿದಿದ್ದರು.

ಸಂಜೆ ಹೊತ್ತಿಗೆ ರತನ್‍ಲಾಲ್ ಹುತಾತ್ಮ ಅಂತ ಘೋಷಿಸಿದ ಸಿಎಂ ಕೇಜ್ರಿವಾಲ್, 1 ಕೋಟಿ ಪರಿಹಾರದ ಜೊತೆಗೆ ಓರ್ವ ಸದಸ್ಯರಿಗೆ ಉದ್ಯೋಗದ ಭರವಸೆ ನೀಡಿದ್ರು. ಹಿಂಸಾಚಾರ ಸಾಮಾನ್ಯರಿಂದ ನಡೆದಿರೋದಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *