ಮೈಸೂರು: ಸೇತುವೆಯ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದು ಬಳಿಕ ಸೇತುವೆ ಮೇಲೆಯೇ ಇನ್ನೋವಾ ಕಾರ್ ನಿಂತಿರುವ ಘಟನೆ ನಗರದಲ್ಲಿ ನಡೆದಿದೆ.
ಜಿಲ್ಲೆಯ ನಂಜನಗೂಡಿನ ಕಪಿಲಾ ನದಿಯ ಡಿ.ದೇವರಾಜ ಅರಸು ಸೇತುವೆ ಬಳಿ ಈ ಘಟನೆ ಸಂಭವಿಸಿದ್ದು, ಕಾರಿನಲ್ಲಿ ಬೆಂಗಳೂರು ಮೂಲದವರು ಇದ್ದರು ಎಂದು ತಿಳಿದು ಬಂದಿದೆ.
ಚಾಲಕನ ಅತಿವೇಗವೇ ಈ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಚಾಲಕ ವೇಗವಾಗಿ ಬಂದು ಕಪಿಲಾ ನದಿಯ ಸೇತುವೆಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸೇತುವೆಯ ತಡೆಗೋಡೆಯ ಮೇಲೆಯೇ ಅಡ್ಡಲಾಗಿ ನಿಂತಿದೆ. ಒಂದು ವೇಳೆ ಕಾರು ಸೇತುವೆ ತಡೆಗೋಡೆ ಮೇಲೆ ನಿಲ್ಲದೆ ಕೆಳಗೆ ಬಿದ್ದಿದ್ದರೆ, ಭಾರೀ ಅವಘಡ ಸಂಭವಿಸುತ್ತಿತ್ತು.
ಸದ್ಯ ಈ ಘಟನೆಯಿಂದ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆ ಸಂಬಂಧ ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.