28 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಾಮಗ್ರಿ ತಲುಪಿವೆ: ಸುಧಾ ಮೂರ್ತಿಗೆ ಹರ್ಷ ಧನ್ಯವಾದ

Public TV
1 Min Read

ಮಂಗಳೂರು: ಇನ್ಫೋಸಿಸ್ ಫೌಂಡೇಶನ್‍ನ ಸುಧಾ ಮೂರ್ತಿ ಅವರು ಕಳುಹಿಸಿಕೊಟ್ಟ ವೈದ್ಯಕೀಯ ಸಾಮಗ್ರಿಗಳು ಮಂಗಳೂರಿಗೆ ತಲುಪಿವೆ. ನಿಮಗೆ ಧನ್ಯವಾದ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ಹೇಳಿದ್ದಾರೆ.

ಟ್ವೀಟ್ ಮಾಡಿರುವ ಹರ್ಷ ಅವರು, ದಕ್ಷಿಣ ಕನ್ನಡ ಜಿಲ್ಲಾಡಳಿತದ ಪರವಾಗಿ ಮಂಗಳೂರು ಪೊಲೀಸರ ಕರೆಗೆ ಸುಧಾ ಮೂರ್ತಿ ಅವರು ಸ್ಪಂದಿಸಿದ್ದಾರೆ. ನಾವು ಮನವಿ ಸಲ್ಲಿಸಿದ 36 ಗಂಟೆಗಳಲ್ಲಿ 28 ಲಕ್ಷ ರೂ.ಗಳ ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅವರು ಕಳುಹಿಸಿದ ವೈದ್ಯಕೀಯ ಸಾಮಗ್ರಿಗಳು ಮಂಗಳೂರಿಗೆ ತಲುಪಿವೆ. ಮೇಡಂ ಸುಧಾ ಮೂರ್ತಿ, ಇನ್ಫೋಸಿಸ್ ಫೌಂಡೇಶನ್‍ನ ರಾಮದಾಸ್ ಕಾಮತ್ ಹಾಗೂ ಅವರ ತಂಡಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಸುಧಾ ಮೂರ್ತಿ ಅವರು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ. ಅವರು ಸದ್ಯ ಮಂಗಳೂರಿಗೆ 28 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಾಮಗ್ರಿ ಕಳುಹಿಸಿದ್ದಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಧನ್ಯವಾದ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ತಿಂಗಳ ಹೆಣ್ಣು ಮಗುವು ಸೇರಿದಂತೆ ಒಟ್ಟು 7 ಜನರಿಗೆ ಕೊರೊನಾ ಸೋಂಕು ತಗುಲಿದೆ. ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಲೇ ಇದೆ. ಕೇರಳದಲ್ಲಿ ಶುಕ್ರವಾರ ಒಂದೇ ದಿನದಲ್ಲಿ 39 ಹೊರ ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ 176ಕ್ಕೆ ಏರಿಕೆಯಾಗಿದೆ.

ಕೇರಳದಲ್ಲಿ 39 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸಂಖ್ಯೆ 164ಕ್ಕೆ ಏರಿಕೆಯಾಗಿದೆ. 39ರ ಪೈಕಿ 34 ಪ್ರಕರಣಗಳು ಕಾಸರಗೋಡಿನಲ್ಲೇ ದಾಖಲಾಗಿದೆ. ಕೊರೋನಾ ವೈರಸ್ ಸೋಂಕಿತರ ಕಾಸರಗೋಡಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕಂಪ್ಲೀಟ್ ಲಾಕ್‍ಡೌನ್‍ಗೆ ಪೊಲೀಸ್ ಆಯುಕ್ತ ಐಪಿಎಸ್ ಹರ್ಷ ಆದೇಶಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ, ಶಾಸಕರೂ, ಸಂಸದರೊಂದಿಗೆ ಶುಕ್ರವಾರ ಸಭೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಲ್ಫ್ ದೇಶ ಮತ್ತು ದುಬೈನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇಳಿದ ಪರಿಣಾಮ ಕಾಸರಗೋಡಿನಲ್ಲೂ ಸೋಂಕಿತರ ಸಂಖ್ಯೆ ಅತಿವೇಗದಲ್ಲಿ ಏರಿಕೆಯಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *