ಬೆಂಗಳೂರು ಉಪವಿಭಾಗಾಧಿಕಾರಿಗೆ 25,000, ತಹಶೀಲ್ದಾರ್‌ಗೆ 50 ಸಾವಿರ ದಂಡ ವಿಧಿಸಿದ ಮಾಹಿತಿ ಆಯೋಗ

2 Min Read

ಬೆಂಗಳೂರು: ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದವರಿಗೆ ಸಕಾಲದಲ್ಲಿ ಮಾಹಿತಿ ನೀಡದೇ ನಿರ್ಲಕ್ಷಿಸಿದ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಡಾ.ಕಿರಣ್ ಅವರಿಗೆ 25,000 ರೂ. ದಂಡ ಮತ್ತು ಬೆಂಗಳೂರು ಉತ್ತರ ತಹಶೀಲ್ದಾರ್ ಮಧುರಾಜ್ ಅವರಿಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾಹಿತಿ ಆಯೋಗ ತಲಾ 25,000 ರೂ. ದಂಡ ವಿಧಿಸಿದೆ.

ನಿಗದಿತ ಅವಧಿಯಲ್ಲಿ ಮಾಹಿತಿ ನೀಡದಿರುವುದಲ್ಲದೆ, ಆಯೋಗದ ವಿಚಾರಣೆಗಳಿಗೂ ಸತತ ಗೈರು ಹಾಜರಾಗಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಆಯೋಗ ಈ ಅಧಿಕಾರಿಗಳಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದೆ. ತಲಾ 25,000 ರೂ. ದಂಡ ವಿಧಿಸಿರುವುದಲ್ಲದೇ, ಮಾಹಿತಿ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಇಲಾಖಾ ವಿಚಾರಣೆ ನಡೆಸಿ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವಂತೆ ಯಾಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು ಎಂದು ಇಬ್ಬರೂ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಕೂಡ ನೀಡಿದೆ.

ಬೆಂಗಳೂರು ಬೆಳತೂರು ಕಾಲೋನಿ ನಿವಾಸಿ ವೆಂಕಟೇಶ್ ಅವರು ವರ್ಷಗಳ ಹಿಂದೆ ಕೆ.ದೊಮ್ಮಸಂದ್ರ ಗ್ರಾಮದ ತಮ್ಮ ಜಮೀನಿಗೆ ಸಂಬಂಧಪಟ್ಟ ಕೆಲವು ದಾಖಲೆಗಳನ್ನು ಒದಗಿಸುವಂತೆ ಬೆಂಗಳೂರು ಉತ್ತರ ಎಸಿ ಅವರಿಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರು. ನಿಗದಿತ ಅವಧಿಯಲ್ಲಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಆಯೋಗಕ್ಕೆ ಅವರು ಮೇಲ್ಮನವಿ ಸಲ್ಲಿಸಿದ್ದರು. ಆಯೋಗ ಎಸಿ ಅವರಿಗೆ ವಿಚಾರಣೆಗೆ ಹಾಜರಾಗಿ ಈ ಬಗ್ಗೆ ವಿವರ ನೀಡುವಂತೆ ಸೂಚಿಸಿತ್ತು. ಹಲವು ವಿಚಾರಣೆಗಳಿಗೆ ಸತತ ಗೈರಾಗಿದ್ದ ಅಧಿಕಾರಿಗೆ ಕಾರಣ ಕೇಳಿ ಆಯೋಗ ನೋಟಿಸ್ ನೀಡಿತ್ತು. ಆದರೆ, ಉಪವಿಭಾಗಾಧಿಕಾರಿ ಡಾ.ಕಿರಣ್ ಆಯೋಗದ ನೋಟಿಸ್‌ಗೆ ಉತ್ತರಿಸದೇ ನಿರ್ಲಕ್ಷಿಸಿದ್ದರು. ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಇಪ್ಪತೈದು ಸಾವಿರ ದಂಡ ವಿಧಿಸಿದ್ದಲ್ಲದೇ, ತಕ್ಷಣ ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಆಯೋಗ ಆದೇಶಿಸಿದೆ. ಜೊತೆಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದೆ.

ಅದೇ ರೀತಿ ಬೆಂಗಳೂರಿನ ಚಂದ್ರಪ್ಪ ಎಂಬವರು ಮಾಳಗಾಳು ಗ್ರಾಮದ ತಮ್ಮ ಕುಟುಂಬದ ಆಸ್ತಿಯ ಕೆಲವು ದಾಖಲೆಗಳಿಗಾಗಿ ಬೆಂಗಳೂರು ಉತ್ತರ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು. ತಹಶೀಲ್ದಾರ್ ಮಧುರಾಜ್ ಕೂಡ ಮಾಹಿತಿ ನೀಡಿಲ್ಲ. ಅಲ್ಲದೇ ಆಯೋಗದ ವಿಚಾರಣೆಗಳಿಗೆ ಸತತ ಗೈರಾಗಿ ನಿರ್ಲಕ್ಷಿಸಿದ್ದರು. ಆಯೋಗ ನೀಡಿದ್ದ ಶೋಕಾಸ್ ನೋಟಿಸ್‌ಗೂ ಅವರು ಉತ್ತರಿಸಿರಲಿಲ್ಲ. ಅವರಿಗೂ ಎರಡು ಪ್ರತ್ಯೇಕ ಪ್ರಕರಣದಲ್ಲಿ ತಲಾ ಇಪ್ಪತೈದು ಸಾವಿರ ಅಂದರೆ, ಒಟ್ಟು ಐವತ್ತು ಸಾವಿರ ದಂಡ ವಿಧಿಸಿದ್ದಲ್ಲದೇ, ಅರ್ಜಿದಾರರಿಗೆ ತಕ್ಷಣ ಸೂಕ್ತ ದಾಖಲೆ ಒದಗಿಸುವಂತೆ ಆಯೋಗ ಆದೇಶಿಸಿ ಇಲಾಖಾ ವಿಚಾರಣೆಯ ಎಚ್ಚರಿಕೆ ನೀಡಿದೆ.

ಇತ್ತೀಚೆಗೆ, ಇದೇ ರೀತಿ ಅರ್ಜಿದಾರರಿಗೆ ಮಾಹಿತಿ ನೀಡದೇ ನಿರ್ಲಕ್ಷಿಸಿದ್ದ ಬೆಂಗಳೂರು ದಕ್ಷಿಣ ಎಸಿ ವಿಶ್ವನಾಥ್, ದೊಡ್ಡಬಳ್ಳಾಪುರ ಎಸಿ ದುರ್ಗಾಶ್ರೀ, ಕೆಆರ್ ಪುರಂ ತಹಶೀಲ್ದಾರ್ ರಾಜು, ದೇವನಹಳ್ಳಿ ತಹಶೀಲ್ದಾರ್ ಅನಿಲ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಆಯೋಗ ದಂಡ ವಿಧಿಸಿತ್ತು. ಮಾಹಿತಿ ಕೋರಿ ಅರ್ಜಿ ಸಲ್ಲಿಸುವವರಿಗೆ ನಿಗದಿತ ಅವಧಿಯಲ್ಲೇ ಮಾಹಿತಿ ಅಥವಾ ಕನಿಷ್ಠ ಸೂಕ್ತ ಹಿಂಬರಹ ನೀಡಬೇಕು. ಅಲ್ಲದೇ ಆಯೋಗದ ವಿಚಾರಣೆಗೆ ಖುದ್ದಾಗಿ ಹಾಜರಾಗಿ ಅಥವಾ ತಮ್ಮ ಪ್ರತಿನಿಧಿಗಳನ್ನು ವಿಚಾರಣೆಗೆ ಕಳಿಸಿ ಸೂಕ್ತ ವಿವರಣೆ ನೀಡುವಂತೆ ಆಯೋಗ ಕಟ್ಟಪ್ಪಣೆ ಮಾಡಿದೆ. ತಪ್ಪಿದಲ್ಲಿ ದಂಡ ವಿಧಿಸಿ, ಶಿಸ್ತುಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಅಧಿಕಾರಿಗಳಿಗೆ ಆಯೋಗ ಎಚ್ಚರಿಕೆ ಸಂದೇಶ ರವಾನಿಸಿದೆ. ಉದ್ದೇಶಪೂರ್ವಕವಾಗಿ ಅರ್ಜಿದಾರನ್ನು ಅಲೆದಾಡಿಸಿ ಸತಾಯಿಸುವ ಅಧಿಕಾರಿಗಳಿಂದ ಸಂತ್ರಸ್ತ ಅರ್ಜಿದಾರರಿಗೆ ಪರಿಹಾರ ಕೊಡಿಸಲೂ ಕಾಯ್ದೆಯಲ್ಲಿ ಅವಕಾಶ ಇದೆ ಎಂದು ಆಯೋಗ ತಿಳಿಸಿದೆ.

Share This Article