ಕಿವೀಸ್ ಟೆಸ್ಟ್ ಟೂರ್ನಿಯಿಂದ ಹಾರ್ದಿಕ್ ಪಾಂಡ್ಯ ಔಟ್

Public TV
2 Min Read

ಮುಂಬೈ: ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಟೂರ್ನಿಗೆ ಬಿಸಿಸಿಐ ಆಟಗಾರರ ಪಟ್ಟಿಯನ್ನು ಅಂತಿಮ ಮಾಡಬೇಕಿದೆ. ಆದರೆ ಇದೇ ವೇಳೆ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಟೂರ್ನಿಗೆ ಅಲಭ್ಯರಾಗಿದ್ದಾರೆ.

ಹಾರ್ದಿಕ್ ಪಾಂಡ್ಯ ಬೆನ್ನು ನೋವಿನ ಕಾರಣ ಶಸ್ತ್ರ ಚಿಕಿತ್ಸೆ ಎದುರಿಸಿ ಚೇತರಿಸಿಕೊಂಡು ತಂಡಕ್ಕೆ ಕಮ್‍ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದರು. ಅಲ್ಲದೇ ಆಯ್ಕೆ ಸಮಿತಿಯೂ ಕೂಡ ಹಾರ್ದಿಕ್‍ರ ಫಿಟ್ನೆಸ್ ಕುರಿತು ಮಾಹಿತಿ ಪಡೆಯಲು ತಂಡದ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಲಿಲ್ಲ. ಸದ್ಯದ ಮಾಹಿತಿಯ ಅನ್ವಯ ಹಾರ್ದಿಕ್ ಸಂರ್ಪೂಣವಾಗಿ ಚೇತರಿಕೆಯಾಗದ ಕಾರಣ ಸರಣಿಯ ಆಯ್ಕೆ ಪಟ್ಟಿಯಿಂದ ಅವರನ್ನು ಕೈಬಿಟ್ಟಿದ್ದಾರೆ.

ಈ ಕುರಿತು ಶನಿವಾರ ಸ್ಪಷ್ಟನೆ ನೀಡಿರುವ ಬಿಸಿಸಿಐ, ಹಾರ್ದಿಕ್ ಶಸ್ತ್ರ ಚಿಕಿತ್ಸೆಯ ಬಳಿಕ ಮೆಡಿಕಲ್ ರಿವ್ಯೂಗಾಗಿ ಬಿಸಿಸಿಐ ಫಿಸಿಯೋಥೆರಪಿಸ್ಟ್ ಆಶಿಶ್ ಕೌಶಿಕ್‍ರೊಂದಿಗೆ ಲಂಡನ್‍ಗೆ ತೆರಳಿದ್ದರು. ಆದರೆ ಹಾರ್ದಿಕ್‍ಗೆ ಮತ್ತಷ್ಟು ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದು, ಪರಿಣಾಮ ಅವರಿಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‍ಸಿಎ)ನಲ್ಲಿ ಪೂರ್ಣ ಫಿಟ್ನೆಸ್ ಪಡೆಯಲು ತರಬೇತಿ ನೀಡಲಾಗುವುದು ಎಂದು ತಿಳಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ಟೂರ್ನಿಯಲ್ಲಿ ಅಂತಿಮ ಬಾರಿ ಆಡಿದ್ದ ಹಾರ್ದಿಕ್ ಗಾಯಗೊಂಡಿದ್ದರು. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ನಡೆದ ಟೀಂ ಇಂಡಿಯಾ ‘ಎ’ ತಂಡದ ಪರ ಹಾರ್ದಿಕ್ ಅವಕಾಶ ಪಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ ಅಂತಿಮ ನಿಮಿಷದಲ್ಲಿ ಹಾರ್ದಿಕ್ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದರು. ಪರಿಣಾಮ ಪಾಂಡ್ಯ ಸ್ಥಾನದಲ್ಲಿ ವಿಜಯ್ ಶಂಕರ್ ತಂಡಕ್ಕೆ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಟೂರ್ನಿಗೆ ಸಮಯಾವಕಾಶ ಇದ್ದ ಕಾರಣ ಆ ವೇಳೆಗೆ ಸಂಪೂರ್ಣ ಫಿಟ್ನೆಸ್ ಸಾಧಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ವೈದ್ಯರು ಹಾರ್ದಿಕ್‍ಗೆ ಮತ್ತಷ್ಟು ವಿಶ್ರಾಂತಿ ಪಡೆಯಲು ಸೂಚಿಸಿದ ಕಾರಣ ಅನಿವಾರ್ಯವಾಗಿ ಆಯ್ಕೆಯಿಂದ ಕೈಬಿಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *