ಚಿನ್ನಸ್ವಾಮಿಯಲ್ಲಿ ಸಿಕ್ಸರ್, ಬೌಂಡರಿ ಸುರಿಮಳೆ

Public TV
2 Min Read

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಬ್ ಏರ್ ಸೌಲಭ್ಯ ಅಳವಡಿಕೆಯಾದ ನಡೆದ ಮೊದಲ ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾರತ ಬ್ಯಾಟ್ಸ್ ಮನ್‍ಗಳು ರನ್ ಸುರಿಮಳೆಗೈದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಮೂರನೇಯ ಟಿ 20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಆರಂಭದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರೂ ಸುರೇಶ್ ರೈನಾ, ಧೋನಿ ಅರ್ಧಶತಕ, ಕೊನೆಯಲ್ಲಿ ಯುವರಾಜ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿದೆ.

ಎರಡನೇ ಓವರ್‍ನ ಮೊದಲ ಎಸೆತದಲ್ಲಿ ನಾಯಕ ಕೊಹ್ಲಿ ಜೊರ್ಡನ್ ಬೌಲಿಂಗ್‍ನಲ್ಲಿ ರನೌಟ್ ಆದರು. ಆರಂಭದಲ್ಲಿ ಕುಸಿತ ಕಂಡರೂ ಎರಡನೇ ವಿಕೆಟ್‍ಗೆ ರಾಹುಲ್ ಮತ್ತು ರೈನಾ 6.1 ಓವರ್‍ನಲ್ಲಿ 61 ರನ್ ಕಲೆ ಹಾಕಿ ಭದ್ರವಾದ ಇನ್ನಿಂಗ್ಸ್ ಕಟ್ಟಿದರು.

22 ರನ್(18 ಎಸೆತ, 2 ಬೌಂಡರಿ, 1ಸಿಕ್ಸರ್) ಗಳಿಸಿದ್ದ ರಾಹುಲ್ ಔಟಾದಾಗ ತಂಡದ ಮೊತ್ತ 65 ಆಗಿತ್ತು. ಧೋನಿ ಕ್ರೀಸ್‍ಗೆ ಬಂದ ಮೇಲೆ ಸಿಕ್ಸರ್, ಬೌಂಡರಿ ಸಿಡಿಯಲು ಆರಂಭವಾಯಿತು.

ರೈನಾ ಮತ್ತು ಧೋನಿ 37 ಎಸೆತದಲ್ಲಿ 55 ರನ್ ಜೊತೆಯಾಟವಾಡಿದರು. 39 ಎಸೆತದಲ್ಲಿ ಅರ್ಧಶತಕ ಹೊಡೆದ ರೈನಾ ಅಂತಿಮವಾಗಿ 63 ರನ್(45 ಎಸೆತ, 2 ಬೌಂಡರಿ, 5 ಸಿಕ್ಸರ್) ಗಳಿಸಿದ್ದಾಗ ಮೊರ್ಗನ್‍ಗೆ ಕ್ಯಾಚ್ ನೀಡಿ ಹೊರ ನಡೆದರು.

ಯುವರಾಜ್ ಬಂದ ಕೂಡಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಪರಿಣಾಮ ಜೊರ್ಡನ್ ಎಸೆದ 18ನೇ ಓವರ್ ನಲ್ಲಿ ಯುವರಾಜ್ ಮೂರು ಸಿಕ್ಸರ್ ಒಂದು ಬೌಂಡರಿ ಚಚ್ಚಿದರು. ಈ ಓವರ್‍ನಲ್ಲಿ ಧೋನಿ ಮತ್ತು ಯುವಿ 24 ರನ್ ಸೊರೆಗೈದರು. ಉತ್ತಮವಾಗಿ ಆಡುತ್ತಿದ್ದ ಯುವರಾಜ್ ಸಿಂಗ್ 27 ರನ್( 10 ಎಸೆತ, 1 ಬೌಂಡರಿ,1 ಸಿಕ್ಸರ್) ಗಳಿಸಿದ್ದಾಗ ಮಿಲ್ಸ್ ಎಸೆದ ಸ್ಲೋ ಬಾಲಿಗೆ ಕೀಪರ್‍ಗೆ ಕ್ಯಾಚ್ ನೀಡಿ ಹೊರ ನಡೆದರು. ಇವರಿಬ್ಬರು 28 ಎಸೆತದಲ್ಲಿ 57 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 170 ರನ್‍ಗಳ ಗಡಿ ದಾಟಿಸಿದರು.

ಧೋನಿ 56 ರನ್(36 ಎಸೆತ,5 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರೆ, 11 ರನ್(4 ಎಸೆತ, 1 ಸಿಕ್ಸರ್) ಗಳಿಸಿದ್ದ ಹಾರ್ದಿಕ್ ಪಾಂಡ್ಯಾ ಇನ್ನಿಂಗ್ಸ್ ಕೊನೆಯ ಬಾಲ್‍ನಲ್ಲಿ ರನ್ ಔಟಾದರು. ಕೊನೆಯಲ್ಲಿ ರಿಶಬ್ ಪಂತ್ 6 ರನ್ ಗಳಿಸಿ ಔಟಾಗದೇ ಉಳಿದರು.

 12 ಸಿಕ್ಸರ್, 11 ಬೌಂಡರಿ ಸಿಡಿದರೆ, ಇತರೇ ರೂಪದಲ್ಲಿ 15 ರನ್ ಟೀಂ ಇಂಡಿಯಾಗೆ ಬಂತು.

ಭಾರತದ ರನ್ ಏರಿದ್ದು ಹೀಗೆ:
50 ರನ್ – 5.5 ಓವರ್
100 ರನ್ – 12.1 ಓವರ್
150 ರನ್ – 16.5 ಓವರ್
200 ರನ್ – 19.5 ಓವರ್
202 ರನ್ – 20 ಓವರ್

Share This Article
Leave a Comment

Leave a Reply

Your email address will not be published. Required fields are marked *