ವಸಾಹತುಶಾಹಿ ವಿರುದ್ಧ ಕೇಂದ್ರದ ಸಮರ – ಲುಟ್ಯೆನ್ಸ್ ಪ್ರತಿಮೆ ತೆಗೆದು ರಾಜಗೋಪಾಲಾಚಾರಿ ಪುತ್ಥಳಿ ಅನಾವರಣ

4 Min Read

ನವದೆಹಲಿ: ಬ್ರಿಟಿಷ್‌ ಆಡಳಿತವು ಭಾರತೀಯರಲ್ಲಿ ಬೆಳೆಸಿದ್ದ ಗುಲಾಮಗಿರಿ ಮನಸ್ಥಿತಿಯನ್ನು ನಾವು ತೊಡೆದು ಹಾಕುತ್ತೇವೆ ಎನ್ನುತ್ತಿರುವ ಮೋದಿ ಸರ್ಕಾರ (Modi Government) ಈ ನಿಟ್ಟಿನಲ್ಲಿ ಈಗ ರಾಷ್ಟ್ರಪತಿ ಭವನದಲ್ಲಿ ಸ್ವತಂತ್ರ ಭಾರತದ ಮೊದಲ ಗವರ್ನರ್‌ ಸಿ. ರಾಜಗೋಪಾಲಾಚಾರಿ(C Rajagopalachari) ಅವರ ಪ್ರತಿಮೆಯನ್ನು ಅನಾವರಣಗೊಳಿಸಿದೆ.

ಅಶೋಕ್ ಮಂಟಪದ ಬಳಿಯ ಗ್ರ್ಯಾಂಡ್ ಓಪನ್ ಮೆಟ್ಟಿಲುಗಳ ಮೇಲೆ ಇಲ್ಲಿಯವರೆಗೆ ಬ್ರಿಟಿಷ್‌ ವಾಸ್ತುಶಿಲ್ಪಿ ಎಡ್ವಿನ್‌ ಲುಟ್ಯೆನ್ಸ್ (Edwin Lutyens) ಅವರ ಪ್ರತಿಮೆ ಸ್ಥಾಪಿಸಲಾಗಿತ್ತು. ಈಗ ಲುಟೆನ್ಸ್‌ ಅವರ ಪ್ರತಿಮೆಯನ್ನು ಬದಲಾಯಿಸಿ ಆ ಜಾಗದಲ್ಲಿ ಸ್ವತಂತ್ರ ಭಾರತದ ಮೊದಲ ಗವರ್ನರ್‌ ಸಿ. ರಾಜಗೋಪಾಲಾಚಾರಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ರಾಷ್ಟ್ರಪತಿ ಭವನದಲ್ಲಿ(Rashtrapati Bhavan) ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಚಕ್ರವರ್ತಿ ರಾಜಗೋಪಾಲಾಚಾರಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇದನ್ನೂ ಓದಿ: 1947ರ ಬಳಿಕ ಫಸ್ಟ್‌ ಟೈಮ್‌ ಹೊಸ ಕಟ್ಟಡಕ್ಕೆ ಪ್ರಧಾನಿ ಕಚೇರಿ ಶಿಫ್ಟ್‌ – ಸೇವಾ ತೀರ್ಥಕ್ಕೆ ಸ್ಥಳಾಂತರ ಯಾಕೆ?

ವಸಾಹತುಶಾಹಿ ಆಡಳಿತವು ಭಾರತೀಯರಲ್ಲಿ ಬೆಳೆಸಿದ್ದ ಗುಲಾಮಗಿರಿ ಮನಸ್ಥಿತಿ ಸ್ವಾತಂತ್ರ್ಯದ ನಂತರವು ಮುಂದುವರಿದಿದೆ. ಇದು ಬದಲಾಗಬೇಕು ಎಂದು ಹಲವು ಕಾರ್ಯಕ್ರಮಗಳಲ್ಲಿ ಮೋದಿ ಹೇಳುತ್ತಿದ್ದರು. ಅದರಂತೆ ಕೇಂದ್ರ ಸರ್ಕಾರ ಈಗ ಬ್ರಿಟಿಷರ ಕಾಲದ ಹೆಸರುಗಳು ಮತ್ತು ಸ್ಥಳಗಳನ್ನು ಬದಲಾವಣೆ ಮಾಡುತ್ತಿದೆ.

ಇದೇ ಫೆ.13 ರಂದು ಪ್ರಧಾನಿಯವರ ಹೊಸ ಕಚೇರಿ ಲೋಕಾರ್ಪಣೆಗೊಂಡಿತ್ತು.ಈ ಮೊದಲು ಪ್ರಧಾನಿ ಕಚೇರಿ ಸೌತ್‌ ಬ್ಲಾಕ್‌ನಲ್ಲಿತ್ತು. ಈಗ ಇದು ಸೆಂಟ್ರಲ್‌ ವಿಸ್ತಾ ಯೋಜನೆಯ ಅಡಿ ನಿರ್ಮಾಣವಾಗಿರುವ ಸೇವಾ ತೀರ್ಥಕ್ಕೆ ಸ್ಥಳಾಂತರವಾಗಿತ್ತು. ಈ ಮೂಲಕ 1947 ರ ಬಳಿಕಇದೇ ಮೊದಲ ಬಾರಿಗೆ ಪ್ರಧಾನಿಗಳ ಕಚೇರಿ ಬದಲಾವಣೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ರಾಜಗೋಪಾಲಾಚಾರಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದನ್ನು ಮೆಚ್ಚಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ನಮ್ಮ ದೇಶಕ್ಕೆ ದುಡಿದವರನ್ನು ಗೌರವಿಸಲು ಮತ್ತು ವಸಾಹತುಶಾಹಿ ಮನಸ್ಥಿತಿಯ ಅವಶೇಷಗಳನ್ನು ತೆಗೆದುಹಾಕುವ ಭಾರತದ ಸಂಕಲ್ಪವನ್ನು ಪ್ರತಿಬಿಂಬಿಸುವ ಶ್ಲಾಘನೀಯ ಪ್ರಯತ್ನ ಇದು. ರಾಜಾಜಿ ಒಬ್ಬ ಅತ್ಯುನ್ನತ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಚಿಂತಕ ಮತ್ತು ಆಡಳಿತಗಾರರಾಗಿದ್ದರು. ಅವರ ಜೀವನವು ಸಮಗ್ರತೆ, ಬುದ್ಧಿಶಕ್ತಿ ಮತ್ತು ರಾಷ್ಟ್ರಕ್ಕೆ ಅಚಲ ಬದ್ಧತೆಯನ್ನು ಒಳಗೊಂಡಿತ್ತು ಎಂದು ಬರೆದಿದ್ದಾರೆ.

 

 

ಎಡ್ವಿನ್‌ ಲುಟ್ಯೆನ್ಸ್ ಯಾರು?
1869 ರಲ್ಲಿ ಲಂಡನ್‌ನಲ್ಲಿ ಜನಿಸಿದ ಎಡ್ವಿನ್ ಲುಟ್ಯೆನ್ಸ್, ನವದೆಹಲಿಯ ದೊಡ್ಡ ಭಾಗಗಳನ್ನು ವಿನ್ಯಾಸಗೊಳಿಸಿದ ಪ್ರಮುಖ ಬ್ರಿಟಿಷ್ ವಾಸ್ತುಶಿಲ್ಪಿಯಾಗಿದ್ದಾರೆ. ರಾಜಧಾನಿಯನ್ನು ಕೋಲ್ಕತ್ತಾದಿಂದ ನವದೆಹಲಿಗೆ ಸ್ಥಳಾಂತರಿಸಿದ ನಂತರ 1912 ರಲ್ಲಿ ನಗರದ ಪ್ರಮುಖ ಕಟ್ಟಡಗಳನ್ನು ವಿನ್ಯಾಸಗೊಳಿಸುವ ಜವಾಬ್ದಾರಿ ಇವರ ಮೇಲಿತ್ತು. ಮುಖ್ಯವಾಗಿ ರಾಷ್ಟ್ರಪತಿ ಭವನ, ಇಂಡಿಯಾ ಗೇಟ್, ನಾರ್ತ್ ಬ್ಲಾಕ್ ಮತ್ತು ಸೌತ್ ಬ್ಲಾಕ್ ಸೇರಿವೆ. ಇವರು ಹರ್ಬರ್ಟ್ ಬೇಕರ್ ಅವರ ಸಹಯೋಗದೊಂದಿಗೆ ರಾಷ್ಟ್ರಪತಿ ಭವನವನ್ನು ವಿನ್ಯಾಸಗೊಳಿಸಿದ್ದರು.

ನವದೆಹಲಿಯ ರಾಜಧಾನಿಯ ಪಟ್ಟಣ-ಯೋಜನೆಯನ್ನು ಶಾಸ್ತ್ರೀಯ ರೋಮನ್ ಶೈಲಿಯಲ್ಲಿ ಇವರು ನಿರ್ಮಾಣ ಮಾಡಿದ್ದರು. ಈ ಕಾರಣಕ್ಕೆ ದೆಹಲಿಯ ಮಿಂಟೋ ಸೇತುವೆಯ ಬಳಿಯ ಎರಡು ಸಣ್ಣ ರಸ್ತೆಗಳಿಗೆ ಲುಟ್ಯೆನ್ಸ್ ಮತ್ತು ಬೇಕರ್ ಹೆಸರಿಡಲಾಗಿದೆ. ಇದನ್ನೂ ಓದಿ: ಇಂಡಿಯಾ ಗೇಟ್‌ನಲ್ಲಿ ಸುಭಾಷ್‌ ಚಂದ್ರ ಬೋಸ್ ಪ್ರತಿಮೆ ಅನಾವರಣ; ಕರ್ತವ್ಯ ಪಥ ಉದ್ಘಾಟಿಸಿದ ಪ್ರಧಾನಿ ಮೋದಿ

ಸಿ. ರಾಜಗೋಪಾಲಾಚಾರಿ ಯಾರು?
ರಾಜಾಜಿ ಎಂದು ಜನಪ್ರಿಯರಾಗಿದ್ದ ತಮಿಳುನಾಡಿನ ಚಕ್ರವರ್ತಿ ರಾಜಗೋಪಾಲಾಚಾರಿ (1878–1972) ಭಾರತದ ಪ್ರಮುಖ ಭಾರತೀಯ ರಾಜನೀತಿಜ್ಞ, ವಕೀಲ ಮತ್ತು ಬರಹಗಾರರಾಗಿದ್ದರು. ಮಹಾತ್ಮ ಗಾಂಧಿಯವರ ನಿಕಟ ಸಹವರ್ತಿಯಾಗಿದ್ದ ಇವರು ಭಾರತವು ಗಣರಾಜ್ಯವಾಗುವ ಮೊದಲು ಗವರ್ನರ್‌ ಜನರಲ್‌ ಹುದ್ದೆಯನ್ನು ಅಲಂಕರಿಸಿದ್ದರು.

 

ಮದ್ರಾಸ್ ಪ್ರೆಸಿಡೆನ್ಸಿಯ ಮುಖ್ಯಸ್ಥರಾಗಿ (1937–1939) ಮತ್ತು ನಂತರ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಯಾಗಿ (1952–1954) ಸೇವೆ ಸಲ್ಲಿಸಿದರು. 1930 ರಲ್ಲಿ ಅವರು ಗಾಂಧಿಯವರ ದಂಡಿ ಸತ್ಯಾಗ್ರಹದಂತೆ ತಮಿಳುನಾಡಿನಲ್ಲಿ ಉಪ್ಪಿನ ಸತ್ಯಾಗ್ರಹವನ್ನು ನಡೆಸಿದ್ದರು. 1954 ರಲ್ಲಿ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಪುರಸ್ಕರಿಸಿತ್ತು. 1950 ರಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಇವರು 1959 ರಲ್ಲಿ ಅವರು ಸ್ವತಂತ್ರ ಪಕ್ಷವನ್ನು ಸ್ಥಾಪಿಸಿ ನೆಹರೂ ಅವರ ಸಮಾಜವಾದಿ ನೀತಿಗಳನ್ನು ವಿರೋಧಿಸಿದ್ದರು.

ತಮಿಳುನಾಡು ಚುನಾವಣೆಯ ಹತ್ತಿರ ಬರುವಾಗಲೇ ರಾಜಗೋಪಾಲಾಚಾರಿ ಪ್ರತಿಮೆಯನ್ನು ಕೇಂದ್ರ ಸರ್ಕಾರ ಅನಾವರಣ ಮಾಡಿದ್ದು ವಿಶೇಷ.

Share This Article