1 ವರ್ಷ ನನ್ನ ಕೈ, ಕಾಲುಗಳಿಗೆ ಚಿಕಿತ್ಸೆ ಬೇಕಿದೆ: ಉಕ್ರೇನ್‌ನಲ್ಲಿ ಗುಂಡೇಟು ತಿಂದಿದ್ದ ಭಾರತದ ವಿದ್ಯಾರ್ಥಿ

Public TV
1 Min Read

ನವದೆಹಲಿ: ಉಕ್ರೇನ್‌ ಯುದ್ಧದಲ್ಲಿ ಗುಂಡೇಟು ತಗುಲಿ ಗಾಯಗೊಂಡಿದ್ದ ಭಾರತದ ವೈದ್ಯಕೀಯ ವಿದ್ಯಾರ್ಥಿಯು ದೆಹಲಿಯ ಸೇನಾ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾನೆ.

ತನ್ನ ಆರೋಗ್ಯ ಹಾಗೂ ಚಿಕಿತ್ಸೆ ಕುರಿತು ಮಾತನಾಡಿದ ಗಾಯಾಳು ವಿದ್ಯಾರ್ಥಿ ಹರ್ಜೋತ್‌ ಸಿಂಗ್‌, ಸುಮಾರು 1 ವರ್ಷ ನನ್ನ ಕೈ, ಕಾಲುಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ನನ್ನ ಆರ್ಥಿಕ ಸ್ಥಿತಿ ಸರಿಯಿಲ್ಲ. ನನ್ನ ತಂದೆ ನಿವೃತ್ತರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಭಾರತ ಸರ್ಕಾರ ನನಗೆ ಸಹಾಯ ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ವಿದ್ಯಾರ್ಥಿ ಇಂದು ಭಾರತಕ್ಕೆ ವಾಪಸ್‌

ಮಗನ ಆರೋಗ್ಯ ಕುರಿತು ಪ್ರತಿಕ್ರಿಯಿಸಿದ ಕೇಸರ್ ಸಿಂಗ್, ಈಗ ನನ್ನ ಮಗ ಚೇತರಿಸಿಕೊಳ್ಳುತ್ತಿದ್ದಾನೆ. ಚೇತರಿಸಿಕೊಂಡ ನಂತರ ಅವನು ಏನು ಮಾಡಬೇಕೆಂದು ಯೋಚಿಸುತ್ತಾನೆ. ಯಾವುದೇ ದೇಶವು ಒಳ್ಳೆಯದು ಅಥವಾ ಕೆಟ್ಟದ್ದಲ್ಲ. ಇದು ಎರಡು ಅಹಂಕಾರಗಳ ನಡುವಿನ ಹೋರಾಟವೇ ಹೊರತು ದೇಶಗಳ ನಡುವಿನ ಹೋರಾಟವಲ್ಲ. ಅವನಿಗೆ ಮತ್ತೆ ಅವಕಾಶ ಸಿಕ್ಕರೆ, ಅವನು ಖಂಡಿತವಾಗಿಯೂ ಅಧ್ಯಯನಕ್ಕಾಗಿ ಉಕ್ರೇನ್‌ಗೆ ಹೋಗುತ್ತಾನೆ ಎಂದು ತಿಳಿಸಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ವೇಳೆ ಕೀವ್‌ ನಗರದಲ್ಲಿ ಭಾರತದ ವಿದ್ಯಾರ್ಥಿ ಹರ್ಜೋತ್‌ ಸಿಂಗ್‌ಗೆ ಗುಂಡೇಟು ಬಿದ್ದಿತ್ತು. ನಂತರ ಆತನಿಗೆ ಉಕ್ರೇನ್‌ನಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಯುದ್ಧಪೀಡಿತ ರಾಷ್ಟ್ರದಿಂದ ʼಆಪರೇಷನ್‌ ಗಂಗಾʼ ಕಾರ್ಯಾಚರಣೆಯಡಿ ಭಾರತಕ್ಕೆ ವಾಪಸ್‌ ಕರೆಸಿಕೊಳ್ಳಲಾಯಿತು. ಇದನ್ನೂ ಓದಿ: ದಯವಿಟ್ಟು ನನ್ನನ್ನು ಭಾರತಕ್ಕೆ ಕರೆಸಿಕೊಳ್ಳಿ: ಉಕ್ರೇನ್‍ನಲ್ಲಿ ಗುಂಡು ತಗುಲಿದ ವಿದ್ಯಾರ್ಥಿ

ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ವಿದ್ಯಾರ್ಥಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾನೆ. ಆದರೆ ಆತ ಪೂರ್ಣ ಚೇತರಿಸಿಕೊಳ್ಳಲು ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *