ಇಸ್ರೋ ಮಾಜಿ ಅಧ್ಯಕ್ಷ ಯು.ಆರ್.ರಾವ್ ಇನ್ನಿಲ್ಲ- ವಿಜ್ಞಾನಿ ನಿಧನಕ್ಕೆ ಗಣ್ಯರ ಕಂಬನಿ

Public TV
1 Min Read

ಬೆಂಗಳೂರು: ಇಸ್ರೋ ಮಾಜಿ ಅಧ್ಯಕ್ಷ ಯು.ಆರ್.ರಾವ್ ಇಂದು ಬೆಳಗಿನ ಜಾವ ಸುಮಾರು 2.30ರ ಸಮಯದಲ್ಲಿ ಮೃತಪಟ್ಟಿದ್ದಾರೆ. ವಿಜ್ಞಾನಿಯ ನಿಧನಕ್ಕೆ ನಾಡಿನ ಗಣ್ಯರೆಲ್ಲ ಸಂತಾಪ ಸೂಚಿಸಿದ್ದಾರೆ. ರಾವ್ ಭಾರತದ ಮೊದಲ ಕೃತಕ ಉಪಗ್ರಹ ಆರ್ಯಭಟ ದಲ್ಲಿಯೂ ಕೆಲಸ ನಿರ್ವಹಿಸಿದ್ದರು. ಇದೇ ತಿಂಗಳು ಹೃದಯ ಸಂಬಂಧಿ ಕಾಯಿಲೆಗೆ ಸಂಬಂಧಿಸಿದಂತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು.

1984 ಮತ್ತು 1994ರ ಅವಧಿಯಲ್ಲಿ ರಾವ್ ಇಸ್ರೋದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ರಾವ್ ಉಡುಪಿ ಜಿಲ್ಲೆಯ ಆದ್ಮಾಪುರ ಗ್ರಾಮದಲ್ಲಿ ಜನಸಿದ್ದರು. ರಾವ್ ಅವರು ದೇಶದ ಶ್ರೇಷ್ಟ ವಿಜ್ಞಾನಿಗಳಾದ ಸತೀಶ್ ಧವನ್, ವಿಕ್ರಂ ಸಾರಾಭಾಯ್, ಎಂ.ಜಿ.ಕೆಮೆನನ್ ಅವರ ಅನೇಕ ಪ್ರೊಜೆಕ್ಟ್ ನಲ್ಲಿ ಭಾಗಿಯಾಗಿದ್ದರು.

ಇದೇ ವರ್ಷ ರಾವ್ ಅವರಿಗೆ ಭಾರತ ಸರ್ಕಾರದಿಂದ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಶಸ್ತಿ ಬಂದ ವೇಳೆ `ಇದು ನನಗೆ ಮರಣೋತ್ತರವಾಗಿ ನೀಡಲಾಗುತ್ತದೆ ಎಂದು ತಿಳಿದಿದ್ದೆ’ ಎಂದು ರಾವ್ ಜೋಕ್ ಮಾಡಿದ್ದರು.

ರಾವ್ ಅವರು ಮ್ಯಾಸಚೂಸೆಟ್ಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಸಹ ಮುಖ್ಯ ಸ್ಥಾನದಲ್ಲಿದ್ದರು. ಇನ್ನೂ ಪ್ರತಿಷ್ಟಿತ ಇಂಟರ್ ನ್ಯಾಷನಲ್ ಆಸ್ಟ್ರೋನಟಿಕಲ್ ಫೆಡರೇಶನ್ (ಐಎಎಫ್) ನೀಡುವ `ಹಾಲ್ ಆಫ್ ಫೇಮ್’ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ರಾವ್ ಪಾತ್ರವಾಗಿದ್ದಾರೆ.

ಸೈಂಟಿಫಿಕ್ ಆ್ಯಂಡ್ ಟೆಕ್ನಿಕಲ್ ಪೇಪರ್ಸ್ ಕಾಸ್ಮಿಕ್ ರೇಸ್, ಖಗೋಳ ಶಾಸ್ತ್ರ, ಬಾಹ್ಯಾಕಾಶ ಅನ್ವಯಗಳು, ಉಪಗ್ರಹಗಳು ಮತ್ತು ರಾಕೆಟ್ ಎಂಜಿನ್ ತಂತ್ರಜ್ಞಾನ ಸಂಬಂಧಿಸಿದಂತೆ 350ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ರಾವ್ ಅವರಿಗೆ 85 ವರ್ಷ ವಯಸ್ಸಾಗಿತ್ತು.

 

Share This Article
Leave a Comment

Leave a Reply

Your email address will not be published. Required fields are marked *