ಅಮೆರಿಕದ ಎಫ್‌ಬಿಐಗೆ ಗುಜರಾತ್‌ ಮೂಲದ ಕಾಶ್‌ ಪಟೇಲ್‌ ಬಾಸ್‌ – ನೇಮಕವಾದ ಬೆನ್ನಲ್ಲೇ ಬಿಗ್‌ ವಾರ್ನಿಂಗ್‌

Public TV
3 Min Read

ವಾಷಿಂಗ್ಟನ್‌: ಅಮೆರಿಕದ ತನಿಖಾ ಸಂಸ್ಥೆ ಫೆಡರಲ್‌ ಬ್ಯುರೋ ಆಫ್‌ ಇನ್‌ವೆಸ್ಟಿಗೇಷನ್ (FBI) ನಿರ್ದೇಶಕರಾಗಿ ಭಾರತ ಮೂಲದ ಕಾಶ್‌ ಪಟೇಲ್‌ ನೇಮಕಗೊಂಡಿದ್ದಾರೆ. ಎಫ್‌ಬಿಐನ 9ನೇ ನಿರ್ದೇಶಕರಾಗಿ ಕಾಶ್‌ ಪಟೇಲ್‌ ಅವರನ್ನು ನೇಮಕಗೊಳಿಸಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಮಾಹಿತಿಯನ್ನು‌ ಶ್ವೇತಭವನದ ಅಧಿಕಾರಿ ಡಾನ್ ಸ್ಕ್ಯಾವಿನೋ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಆದೇಶದ ಬೆನ್ನಲ್ಲೇ ಭಾರತೀಯ ಮೂಲದ (Indian-origin) ಕಾಶ್‌ ಪಟೇಲ್‌, ಟ್ರಂಪ್‌ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ಎಫ್‌ಬಿಐನ 9ನೇ ನಿರ್ದೇಶಕನಾಗಿದ್ದಕ್ಕೆ ನನಗೆ ಗೌರವವಿದೆ. ನಿಮ್ಮ ಅಚಲವಾದ ವಿಶ್ವಾಸ ಮತ್ತು ಬೆಂಬಲಕ್ಕಾಗಿ‌ ಟ್ರಂಪ್‌ ಹಾಗೂ ಅಟಾರ್ನಿ ಜನರಲ್ ಬೋಂಡಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತುಂಬಾ ಅನ್ಯಾಯ: ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಟ್ರಂಪ್‌ ಅಪಸ್ವರ

ಮುಂದುವರಿದು.. ಎಫ್‌ಬಿಐ ಒಂದು ಪರಂಪರೆಯನ್ನು ಹೊಂದಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ನಮ್ಮ ನ್ಯಾಯ ವ್ಯವಸ್ಥೆಯು ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಂಡಿದೆ, ಈ ಬೆಳವಣಿಗೆ ಇಂದೇ ಕೊನೆಗೊಳ್ಳಬೇಕು. ಅಮೆರಿಕನ್ನರು (American people) ಹೆಮ್ಮೆ ಪಡುವಂತೆ ಎಫ್‌ಬಿಐ ಅನ್ನು ಮರುನಿರ್ಮಾಣ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಂಕಲ್ಪ ಮಾಡೋಣ. ಅಲ್ಲದೇ ಇದನ್ನು ನಮ್ಮ ಎಚ್ಚರಿಕೆ ಎಂದೇ ಭಾವಿಸಿ ಅಮೆರಿಕನ್ನರಿಗೆ ಹಾನಿ ಮಾಡಲು ಬಯಸುವವರು ಯಾವುದೇ ಮೂಲೆಯಲ್ಲಿದ್ದರೂ ಹುಡುಕಿ ಬೇಟೆಯಾಡುತ್ತೇವೆ ಎಂದು ವಾರ್ನಿಂಗ್‌ ಕೊಟ್ಟಿದ್ದಾರೆ.

ಕಾಶ್ ಪಟೇಲ್ ಯಾರು?
ಕಾಶ್ ಪಟೇಲ್ ತಂದೆ-ತಾಯಿ ಗುಜರಾತ್ ಮೂಲದವರು. ಪಟೇಲ್ ಪೋಷಕರು ಅಮೆರಿಕದಲ್ಲಿ ನೆಲೆಸುವುದಕ್ಕಿಂತ ಮೊದಲು ಉಗಾಂಡದಲ್ಲಿದ್ದರು. ಅಲ್ಲಿಂದ ಕೆನಡಾಗೆ ಬಂದರು. ಈ ವೇಳೆ ಕಾಶ್ ಪಟೇಲ್ ತಂದೆಗೆ ಅಮೆರಿಕ ವಿಮಾನಯಾನ ಸಂಸ್ಥೆಯಲ್ಲಿ ಹಣಕಾಸು ಅಧಿಕಾರಿ ಕೆಲಸ ಸಿಕ್ಕಿದ್ದರಿಂದ ಅವರು ಕುಟುಂಬ ಸಮೇತರಾಗಿ ಅಮೆರಿಕಾಗೆ ಬಂದು ನೆಲೆಸಿದರು. ಇದನ್ನೂ ಓದಿ: ಎಫ್‌ಬಿಐ ನಿರ್ದೇಶಕನಾಗಿ ಭಾರತೀಯ ಮೂಲದ ಕಶ್ಯಪ್‌ ನಾಮನಿರ್ದೇಶನ

ನ್ಯೂಯಾರ್ಕ್‌ನ ಗಾರ್ಡನ್ ಸಿಟಿಯಲ್ಲಿ 1980ರಲ್ಲಿ ಕಾಶ್ ಪಟೇಲ್ ಜನಿಸಿದರು. ಇಲ್ಲಿಯೇ ಅವರು ಕಾಲೇಜು ಶಿಕ್ಷಣ ಪಡೆದರು. ನಂತರ ರಿಚ್ಚಂಡ್ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಕ್ರಿಮಿನಲ್ ಜಸ್ಟೀಸ್ ನಲ್ಲಿ ಪದವಿ ಪಡೆದರು. ಸಾರ್ವಜನಿಕ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಅವರು ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳಲ್ಲಿ ಕೆಲಸ ಮಾಡಿದರು.

ಕಾಶ್ ಪಟೇಲ್‌ ಒಬ್ಬ ಪ್ರತಿಭಾವಂತ ವಕೀಲ, ತನಿಖಾಧಿಕಾರಿ ಹಾಗೂ ಅಮೆರಿಕದ ಹೋರಾಟಗಾರ. ಭ್ರಷ್ಟಾಚಾರವನ್ನು ಬಯಲಿಗೆಳೆಯಲು, ನ್ಯಾಯ ರಕ್ಷಿಸಲು ಹಾಗೂ ಅಮೆರಿಕದ ಜನರ ಪರವಾಗಿ ತಮ್ಮ ಜೀವನ ಸವೆಸಿ ಸುದೀರ್ಘ ಹೋರಾಟ ನಡೆಸಿದ್ದಾರೆ. ಪಟೇಲ್‌ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ (ಎನ್‌ಎಸ್‌ಸಿ) ಭಯೋತ್ಪಾದನಾ ನಿಗ್ರಹದ ಹಿರಿಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಹಲವಾರ ಉಗ್ರಗಾಮಿ ಸಂಘಟನೆಗಳ ಭಯೋತ್ಪಾದಕರ ಹತ್ಯೆ ಸೇರಿದಂತೆ ಅಮೆರಿಕದ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿದ್ದಾರೆ. ಇದನ್ನೂ ಓದಿ: ಪನಾಮದಲ್ಲಿ ಬಂಧಿಯಾಗಿರುವ ಭಾರತೀಯ ವಲಸಿಗರು ಸೇಫ್‌ – ರಾಯಭಾರ ಕಚೇರಿ ಮಾಹಿತಿ

ಇದಕ್ಕೂ ಮುನ್ನ ಫ್ಲೋರಿಡಾದಲ್ಲಿ ವಕೀಲರಾಗಿ ಕೆಲಸ ಮಾಡಿದ್ದರು, ರಾಜ್ಯ ಮತ್ತು ಫೆಡರಲ್ ನ್ಯಾಯಾಲಯಗಳಲ್ಲಿ ಗ್ರಾಹಕರನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿದರು. ನಂತರ ನ್ಯಾಯಾಂಗ ಇಲಾಖೆಯ ಪ್ರಾಸಿಕ್ಯೂಟರ್ ಆಗಿ ಸೇರಿಕೊಂಡರು. ಪೂರ್ವ ಆಫ್ರಿಕಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ನಡೆಯುತ್ತಿದ್ದ ಅಂತರರಾಷ್ಟ್ರೀಯ ಭಯೋತ್ಪಾದನೆ ಪ್ರಕರಣಗಳನ್ನು ನಿರ್ವಹಿಸಿದ್ದರು.

Share This Article