12 ಸಾವಿರ ಕ್ರೀಡಾ ವೈದ್ಯರೊಂದಿಗೆ ಕ್ರಿಕೆಟ್ ದಂತಕಥೆ ಸಂವಾದ

Public TV
1 Min Read

– ವೈದ್ಯ ಸಮುದಾಯದ ಸೇವೆಗೆ ಕೃತಜ್ಞರಾಗಿರುವೆ: ಸಚಿನ್

ಮುಂಬೈ: ಕೊರೊನಾ ವೈರಸ್ ಭೀತಿಯಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಸೆಲೆಬ್ರಿಟಿಗಳು, ಕ್ರಿಕೆಟ್ ಆಟಗಾರರು, ಕ್ರೀಡಾಪಟುಗಳು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ಆರೋಗ್ಯ ಹಾಗೂ ಫಿಟ್‍ಸೆಸ್ ಕುರಿತು ಯುವ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು ಕ್ರೀಡಾ ಗಾಯಗಳ ಕುರಿತು ಲೈವ್ ವೆಬ್‌ನಾರ್‌ನಲ್ಲಿ ಶನಿವಾರ ಭಾಗವಹಿಸಿದರು. ಈ ವೇಳೆ ಅವರು ದೇಶಾದ್ಯಂತದ 12 ಸಾವಿರ ಯುವ ವೈದ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಸಚಿನ್ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ತಮ್ಮ ವೃತ್ತಿಜೀವನದ ಅವಧಿಯಲ್ಲಿ ಹಲವಾರು ಆರೋಗ್ಯ ಸಮಸ್ಯೆ, ಗಾಯಗಳಿಂದ ಬಳಲುತ್ತಿದ್ದರು. ಅದರಲ್ಲಿ ಪ್ರಮುಖವಾದುದು ಮೊಣಕೈ ಗಾಯ ಕೂಡ ಒಂದು.

ಈ ಕುರಿತು ಮಾಹಿತಿ ನೀಡಿರುವ ಮೂಳೆ ತಜ್ಞ ಸುಧೀರ್ ವಾರಿಯರ್ ಅವರು, ಲಾಕ್‍ಡೌನ್ ಸಮಯದಲ್ಲಿ ದೇಶಾದ್ಯಂತದ ಅನೇಕ ಯುವ ವೈದ್ಯರು ಸಚಿನ್ ಅವರೊಂದಿಗೆ ಕ್ರೀಡಾ ಸಂಬಂಧಿತ ಗಾಯಗಳ ಬಗ್ಗೆ ಪರಸ್ಪರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕ್ರೀಡಾ ಗಾಯಗಳಿಗೆ ಸಂಬಂಧಿಸಿದಂತೆ ಶನಿವಾರ ಸಂವಾದ ನಡೆಸಲಾಗಿದ್ದು, ಸಚಿನ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಭಾರತದ ಮಾಜಿ ಬ್ಯಾಟ್ಸ್‍ಮನ್, ನಿಮ್ಮ ಸೇವೆಗಾಗಿ ವೈದ್ಯ ಸಮುದಾಯಕ್ಕೆ ಕೃತಜ್ಞರಾಗಿರುತ್ತೇನೆ ಎಂದು ಹೇಳಿದ್ದಾರೆ. ಕಾರ್ಯಕ್ರಮವು ಯುವ ವೈದ್ಯರಿಗೆ ಕಲಿಯಲು ಸಹಾಯ ಮಾಡುತ್ತದೆ ಎಂದು ಸುಧೀರ್ ವಾರಿಯರ್ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಫಿಸಿಯೋ ನಿತಿನ್ ಪಟೇಲ್ ಅವರೊಂದಿಗೆ ಸುಧೀರ್ ವಾರಿಯರ್ ಸಂವಹನ ನಡೆಸಿದರು. ಪಟೇಲ್ ಅವರು ಈ ಹಿಂದೆ ಐಪಿಎಲ್ ತಂಡ ಮುಂಬೈ ಇಂಡಿಯನ್ಸ್ ಜೊತೆ ಕೆಲಸ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *