ಬೆಂಗಳೂರಿನಲ್ಲಿ ಮೊದಲ ಬಾರಿಗೆ ಭಾರತೀಯ ಸೇನಾ ದಿನಾಚರಣೆ

Public TV
3 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Bengaluru) ಮೊದಲ ಬಾರಿಗೆ ಭಾರತೀಯ ಸೇನಾ ದಿನವನ್ನು (Indian Army Day) ಭಾನುವಾರ ಆಚರಿಸಲಾಯಿತು.

ಸ್ವಾತಂತ್ರ‍್ಯಾನಂತರ ಮೊದಲ ಭಾರತೀಯ ಕಮಾಂಡರ್ ಇನ್- ಚೀಫ್ ಕನ್ನಡದ ಕೆಎಂ ಕಾರ್ಯಪ್ಪ ಅವರು ಅಧಿಕೃತವಾಗಿ ಭಾರತೀಯ ಸೇನೆಯ ಮುಖ್ಯಸ್ಥರ ಸ್ಥಾನ ಅಲಂಕರಿಸಿದ್ದರ ನೆನಪಿನಾರ್ಥವಾಗಿ ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ. ಇಲ್ಲಿಯವರೆಗೆ ಈ ಕಾರ್ಯಕ್ರಮ ದೆಹಲಿಯಲ್ಲಿ ನಡೆಯುತ್ತಿತ್ತು. ಆದರೆ ಮೊದಲ ಬಾರಿಗೆ ದೆಹಲಿ ಹೊರಗಡೆ ಈ ಕಾರ್ಯಕ್ರಮ ನಡೆದಿದೆ.

ಹಳೆ ಮದ್ರಾಸ್ ರಸ್ತೆಯ ರಕ್ಷಣಾ ಇಲಾಖೆಯ ಎಎಸ್‌ಸಿ ಸೆಂಟರ್ ಮತ್ತು ಕಾಲೇಜಿನ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಆಗಮಿಸಿದ್ದರು. ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ವೈಸ್ ಚೀಫ್ ಆಫ್ ಆರ್ಮಿ ಸ್ಟಾಫ್ ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಮತ್ತಿತರ ಭಾರತೀಯ ಸೇನೆಯ ಹಿರಿಯ ಶ್ರೇಣಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಭಾರತೀಯ ಸೇನೆಯ ಸಹಾಸ, ಯುದ್ಧದ ಸಂದರ್ಭದಲ್ಲಿನ ಕಾರ್ಯಚರಣೆಯನ್ನು ಅಣುಕು ಪ್ರದರ್ಶನದಂತೆ ಪ್ರದರ್ಶಿಸಲಾಯಿತು. ಅತ್ಯಾಧುನಿಕ ಲಘು ಹೆಲಿಕಾಪ್ಟರ್-ಡಬ್ಲ್ಯುಎಸ್‌ಐ, ಸೇನಾ ವೈಮಾನಿಕ ಹೆಲಿಕಾಪ್ಟರ್‌ಗಳು ಮತ್ತು ಸೇನೆಯ ಸಾಹಸ ವಿಭಾಗದ ಮೈಕ್ರೊಲೈಟ್ ಏರ್‌ಕ್ರಾಫ್ಟ್‌ಗಳ ಆಕರ್ಷಕ ಹಾರಾಟ ನಡೆಯಿತು. ಟೆಂಟ್ ಪೆಗ್ಗಿಂಗ್ ಮತ್ತು ಸಿಕ್ಸ್ ಬಾರ್ ಜಂಪಿಂಗ್ (ಆರು ಅಡೆತಡೆಗಳನ್ನು ಜಂಪ್ ಮಾಡುವುದು) ಸಾಹಸ ಚಟುವಟಿಕೆಗಳ ಪ್ರದರ್ಶನವು ನಡೆಯಿತು.

ಸಾಹಸ ಪ್ರದರ್ಶನ ಚಟುವಟಿಕೆಗಳಲ್ಲಿ, ಸೇನಾ ವಾಯುಯಾನ ಯುದ್ಧ ಪ್ರದರ್ಶನ ಮತ್ತು ಮಿಲಿಟರಿಯ ಕೆಚ್ಚೆದೆಯ ಯೋಧರ ವಿಶೇಷ ತಂಡಗಳ ಕಾರ್ಯಾಚರಣೆಗಳು ಸೇರಿದ್ದವು. ‘ನಾರ್ತ್ ಈಸ್ಟ್ ವಾರಿಯರ್ಸ್’ ಸಮರ ಕಲೆಗಳ ವಿಸ್ಮಯ-ಸ್ಫೂರ್ತಿದಾಯಕ ಪ್ರದರ್ಶನ ನೀಡಿದರೆ, ಡೇರ್‌ಡೆವಿಲ್ ಪ್ಯಾರಾ ತಂಡಗಳು ಸ್ಕೈ ಡೈವಿಂಗ್‌ನೊಂದಿಗೆ ನೆರೆದಿದ್ದವರನ್ನು ರೋಮಾಂಚನಗೊಳಿಸಿದವು. ಮೋಟಾರ್ ಸೈಕಲ್ ಡಿಸ್‌ಪ್ಲೇ, ಟೇಕ್ವಾಂಡೋ ಪ್ರದರ್ಶನ, ಶ್ರೇಷ್ಠ ಪ್ಯಾರಾ ಟ್ರೂಪರ್‌ಗಳಿಂದ ಪ್ಯಾರಾ ಮೋಟಾರು ಪ್ರದರ್ಶನವು ಎಲ್ಲರನ್ನು ಹುಬ್ಬೇರುವಂತೆ ಮಾಡಿತು. ಇದನ್ನೂ ಓದಿ: ಭಾರತಕ್ಕೆ 317 ರನ್‌ಗಳ ಭರ್ಜರಿ ಗೆಲುವು – ವಿಶ್ವದಾಖಲೆಯೊಂದಿಗೆ ಸರಣಿ ಕ್ಲೀನ್‌ ಸ್ವೀಪ್‌

ಸೈನಿಕರ ನಿಸ್ವಾರ್ಥ ಸೇವೆಗೆ ರಕ್ಷಣಾ ಸಚಿವರು ವಂದನೆ ಸಲ್ಲಿಸಿದರು. ವಿಪತ್ತು ಪರಿಸ್ಥಿತಿಗಳನ್ನು ಎದುರಿಸುವಾಗ ಅಪ್ರತಿಮ ಶೌರ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ಸೇನಾ ಸಿಬ್ಬಂದಿಯನ್ನು ಶ್ಲಾಘಿಸಿದರು. ದೇಶದ ಗಡಿಗಳ ಸುರಕ್ಷತೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಭಾರತೀಯ ಸೇನೆಯ ಪಾತ್ರವನ್ನು ಅವರು ಪ್ರಶಂಸಿಸಿದರು.

ನಮ್ಮ ರಕ್ಷಣಾ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಸುರಕ್ಷತೆಯ ಸವಾಲು ನಮಗೆ ಸಾಕಷ್ಟಿತ್ತು. ಅದನ್ನು ಸಮೃದ್ಧವಾಗಿಸಿದ್ದೇವೆ. ಇವತ್ತು ಪ್ರಪಂಚದಲ್ಲಿ ಅಂಡರ್ ವಾಟರ್ ಡ್ರೋನ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಲಗೊಂಡಿದೆ. ನಮ್ಮ ರಕ್ಷಣಾ ವ್ಯವಸ್ಥೆ ಬಲಿಷ್ಠವಾಗಿದೆ. ನಮ್ಮ ಸೇನೆ ಶೌರ್ಯದಿಂದ ಶತ್ರುಗಳ ಎದೆ ನಡುಗಿದೆ. ನಮ್ಮ ಸೇನೆ ಸಾಹಸ ಪ್ರದರ್ಶನ ಕಾರ್ಗಿಲ್ ಯುದ್ಧದಲ್ಲಿ ಸಬಲತೆ ತೋರಿಸಿದೆ. ನಮ್ಮ ಸುರಕ್ಷತಾ ಹಾಗೂ ರಾಷ್ಟ್ರ ಪ್ರಗತಿಯಲ್ಲಿ ಸೇನೆ ಮುಂದಿದೆ. ರಕ್ಷಣಾ ವ್ಯವಸ್ಥೆಯಲ್ಲಿ ಭದ್ರತೆ, ಸುರಕ್ಷತೆಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ ಎಂದರು.

ಆರ್ಥಿಕವಾಗಿ ಭಾರತ ಮೊದಲ 3 ಸ್ಥಾನದಲ್ಲಿರಲಿದೆ. ಭಾರತ ಎಲ್ಲಾ ಕ್ಷೇತ್ರದಲ್ಲೂ ಪ್ರಗತಿ ಹೊಂದಿರಲಿದೆ. ನಮ್ಮ ದೇಶದ ಸುರಕ್ಷತಾ ವ್ಯವಸ್ಥೆ ನೋಡಿ ವಿದೇಶಿ ಕಂಪನಿಗಳು ಉದ್ಯಮ ಆರಂಭಿಸುತ್ತಿವೆ. ಭವಿಷ್ಯಕ್ಕಾಗಿ ಭಾರತೀಯ ಸೇನೆ ಸಿದ್ಧವಾಗಿದೆ ಎಂದು ಇತರೆ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಹಾಕಿ ವಿಶ್ವಕಪ್‌ – ಭಾರತ, ಇಂಗ್ಲೆಂಡ್‌ ಪಂದ್ಯ ಡ್ರಾನಲ್ಲಿ ಅಂತ್ಯ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *