ವಿಮಾನ ನಾಪತ್ತೆಯಾಗಿ 7 ದಿನ-ಸುಳಿವು ನೀಡಿದವರಿಗೆ ಬಹುಮಾನ

Public TV
2 Min Read

ನವದೆಹಲಿ: ಕಳೆದ ಏಳು ದಿನದಿಂದ ನಾಪತ್ತೆಯಾಗಿರುವ ವಾಯುಸೇನೆಯ ಎಎನ್-32 ವಿಮಾನ ಇದುವರೆಗೂ ಪತ್ತೆಯಾಗಿಲ್ಲ. ಈ ಸಂಬಂಧ ವಿಮಾನದ ಸುಳಿವು ನೀಡಿ ದವರಿಗೆ 5 ಲಕ್ಷ ರೂ. ಹಣವನ್ನು ಬಹುಮಾನವಾಗಿ ನೀಡಲಾಗುವುದು ಎಂದು ಏರ್ ಮಾರ್ಷಲ್ ಆರ್.ಡಿ. ಮಾಥೂರ್ ಘೋಷಣೆ ಮಾಡಿದ್ದಾರೆ.

ಎಎನ್-32 ಜೂನ್ 3ರಂದು ಅಸ್ಸಾಂನ ಜೋರಹಾಟ್ ವಾಯುನೆಲೆಯಿಂದ ಟೇಕಾಫ್ ಆಗಿತ್ತು. ಅರುಣಾಚಲ ಪ್ರದೇಶದ ಮೆನಚುಕಾ ಏರ್ ಫೀಲ್ಡ್ ನಿಂದ ಎತ್ತರಕ್ಕೆ ಹಾರುತ್ತಿದ್ದಂತೆ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ನೆರೆಯ ಚೀನಾ ಗಡಿ ಸಮೀಪವೇ ವಿಮಾನ ಸಂಪರ್ಕ ಕಳೆದುಕೊಂಡಿದ್ದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಂಪರ್ಕ ಕಳೆದುಕೊಂಡಿರುವ ವಿಮಾನದಲ್ಲಿ ಎಂಟು ಜನ ಸಿಬ್ಬಂದಿ ಸೇರಿದಂತೆ ಐವರು ಪ್ರಯಾಣಿಸುತ್ತಿದ್ದರು.

ವಿಮಾನದ ಸುಳಿವು ನೀಡಿದ ವ್ಯಕ್ತಿ ಅಥವಾ ತಂಡಕ್ಕೆ 5 ಲಕ್ಷ ರೂ. ಬಹುಮಾನ ಸಿಗಲಿದೆ. ಸುಳಿವು ಸಿಕ್ಕಲ್ಲಿ 0378-3222164, 9436499477, 9402077267, 9402132477 ಈ ನಂಬರ್ ಗಳಿಗೆ ಸಂಪರ್ಕಿಸಬೇಕು. ವಾತಾವರಣದ ಏರುಪೇರು ನಡುವೆಯೂ ಭೂ ಸೇನೆ, ವಾಯು ಸೇನೆ, ಸಿ-130ಜೆ, ಹೆಲಿಕಾಪ್ಟರ್ ಸಹಾಯದೊಂದಿಗೆ ಕಾಣೆಯಾಗಿರುವ ವಿಮಾನಕ್ಕಾಗಿ ಹುಡುಕಾಟ ನಡೆಸಿದ್ದೇವೆ. ಸಿಯಾಂಗ್ ಜಿಲ್ಲೆಯ ಸುಮಾರು 2500 ಕಿ.ಮೀ. ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ವಾಯುಸೇನೆಯ ವಕ್ತಾರ ವಿಂಗ್ ಕಮಾಂಡರ್ ರತ್ನಾಕರ್ ಸಿಂಗ್ ತಿಳಿಸಿದ್ದಾರೆ.

ಭೂ ಮಾರ್ಗದಲ್ಲಿ ಹುಡುಕಾಟ ನಡೆಸುತ್ತಿರುವ ಸಿಬ್ಬಂದಿ ವಿಮಾನ ಪತನ ಹೊಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಇದುವರೆಗೂ ಸಿಬ್ಬಂದಿಗೆ ವಿಮಾನದ ಅವಶೇಷಗಳು ಲಭ್ಯವಾಗಿಲ್ಲ. ಹೀಗಾಗಿ ವಿಮಾನ ಹುಡುಕಾಟದ ಕಾರ್ಯ ಮುಂದುವರಿದಿದೆ. ಉಪಗ್ರಹಗಳ ಮೂಲಕ ಕಾರ್ಯಾಚರಣೆ ನಡೆದಿದೆ ಎಂದು ವರದಿಯಾಗಿದೆ.

ಎಎನ್ 32 ರಷ್ಯಾದ ಟ್ವಿನ್ ಟರ್ಬೋಪ್ರೊಪ್ ಎಂಜಿನ್ ಹೊಂದಿದ್ದು, 1983 ರಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡಿತ್ತು. ನಾಪತ್ತೆಯಾದ ವಿಮಾನದ ದಾರಿ ಬಹಳ ಕಠಿಣವಾಗಿದ್ದು, ಬೆಟ್ಟ ಗುಡ್ಡ ಮತ್ತು ಭಾರೀ ಅರಣ್ಯವಿದೆ. ಮೆಚುಕಾ ವಾಯುನೆಲೆಯಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡುವುದು ಬಹಳ ಕಷ್ಟ ಎಂದು ವರದಿಯಾಗಿದೆ.

2016ರಲ್ಲಿ ವಾಯುಸೇನೆ ಎಎನ್ 32 ವಿಮಾನ ಪತನಗೊಂಡಿತ್ತು. ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ತೆರಳಲು ಚೆನ್ನೈ ನಿಂದ ಟೇಕಾಫ್ ಆಗಿದ್ದ ವಿಮಾನ ನಾಪತ್ತೆಯಾಗಿತ್ತು. ಬಂಗಾಳ ಕೊಲ್ಲಿಯಲ್ಲಿ ವಿಮಾನ ಹುಡುಕುವ ಕಾರ್ಯಾಚರಣೆ ನಡೆದರೂ ಯಾವುದೇ ಅವಶೇಷ ಸಿಕ್ಕಿರಲಿಲ್ಲ. ವಿಮಾನದಲ್ಲಿದ್ದ ಎಲ್ಲ 29 ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *