ಮುಂಬೈ: ಭಾರತ ನನ್ನ ಸ್ಫೂರ್ತಿ, ತವರು. ಆದರೆ ಕೆಲವೊಮ್ಮೆ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಲ್ಪಡಬಹುದು ಎಂದು ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ (AR Rahman) ತಮ್ಮ ಹೇಳಿಕೆಗಳ ಕುರಿತು ಕೇಳಿಬಂದಿದ್ದ ಟೀಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಂಗೀತ ಯಾವಾಗಲೂ ನಮ್ಮ ಸಂಸ್ಕೃತಿಯನ್ನು ಆಚರಿಸಲು ಹಾಗೂ ಗೌರವಿಸಲು ಒಂದು ಮಾರ್ಗ. ಅದರಂತೆ ನನ್ನ ಬದುಕಿನಲ್ಲಿ ಸಂಗೀತ ಯಾವಾಗಲೂ ಶಕ್ತಿಯಂತೆ ನನಗೆ ಬೆನ್ನೆಲುಬಾಗಿ ನಿಂತಿದೆ. ಭಾರತ ನನ್ನ ಸ್ಫೂರ್ತಿ, ನನ್ನ ಶಿಕ್ಷಕಿ ಮತ್ತು ನನ್ನ ತವರು, ಆದರೆ ಕೆಲವೊಮ್ಮೆ ನನ್ನ ಹೇಳಿಕೆಯ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಲ್ಪಡಬಹುದು. ನಿಜಕ್ಕೂ ನನ್ನ ಉದ್ದೇಶ ಯಾವಾಗಲೂ ಸಂಗೀತದ ಮೂಲಕ ದೇಶಕ್ಕೆ ಸೇವೆ ಸಲ್ಲಿಸುವುದಾಗಿದೆ. ನಾನು ಎಂದಿಗೂ ನೋವನ್ನುಂಟು ಮಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ..ಇದನ್ನೂ ಓದಿ:8 ವರ್ಷಗಳಿಂದ ಬಾಲಿವುಡ್ನಲ್ಲಿ ಅವಕಾಶ ಸಿಕ್ಕಿಲ್ಲ, ಇದಕ್ಕೆ ಕೋಮುವಾದಿ ಮನಸ್ಥಿತಿ ಕಾರಣವಿರಬಹುದು: ಎ.ಆರ್ ರೆಹಮಾನ್
ಜೊತೆಗೆ ನನ್ನ ಕಲಾತ್ಮಕ ಯೋಜನೆಗಳ ಮೂಲಕ ಭಾರತದ ವೈವಿಧ್ಯತೆಯನ್ನು ಸಂಭ್ರಮಿಸಿ, ಅದನ್ನು ಉಳಿಸುವ ಕೆಲಸ ಮಾಡುವುದಾಗಿ, ದೇಶಕ್ಕೆ ಕೃತಜ್ಞತೆ ಸಲ್ಲಿಸಿ, ಸಂಗೀತದ ಮೂಲಕ ಭಾರತದ ಘನತೆಯನ್ನು ಗೌರವಿಸುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಬಾಲಿವುಡ್ನಲ್ಲಿ ತಾರತಮ್ಯದ ಬಗ್ಗೆ ತಾವು ನೀಡಿದ್ದ ಹೇಳಿಕೆಗಳು ಟೀಕೆಗೆ ಎಡೆ ಮಾಡಿಕೊಟ್ಟಿದ್ದವು. ಇದೀಗ ಈ ಹೇಳಿಕೆಯ ಕುರಿತು ತಮ್ಮ ನಿಲುವನ್ನು ವಿವರಿಸಿದ್ದಾರೆ.
ಏನಿದು ವಿವಾದ?
ಆಸ್ಕರ್ ಅವಾರ್ಡ್ ಗೆದ್ದಿರುವ ಸಂಗೀತ ಮಾಂತ್ರಿಕ, ಎ.ಆರ್. ರೆಹಮಾನ್ ಅವರ ಒಂದೇ ಒಂದು ಒಂದು ಹೇಳಿಕೆ ಬಾಲಿವುಡ್ನಲ್ಲಿ ವಿವಾದದ ಅಲೆ ಎಬ್ಬಿಸಿದೆ. ಬಾಲಿವುಡ್ನಲ್ಲಿ ನನಗೆ 8 ವರ್ಷಗಳಿಂದ ಅವಕಾಶ ಸಿಗ್ತಿಲ್ಲ. ಕೋಮುವಾದಿ ಮನಸ್ಥಿತಿಯೂ ಇದಕ್ಕೆ ಕಾರಣವಿರಬಹುದು ಎಂದು ಹೇಳಿದ್ದರು.
ಸಂದರ್ಶನದಲ್ಲಿ ಮಾತಾಡಿರುವ ರೆಹಮಾನ್, ನಾನು ಕೆಲಸ ಹುಡುಕಿ ಹೋಗಲ್ಲ. ನನ್ನನ್ನ ಅರಸಿ ಬರುವ ಕೆಲಸವನ್ನು ಅತ್ಯಂತ ಶ್ರದ್ಧೆ, ಪ್ರಾಮಾಣಿಕವಾಗಿ ಮಾಡ್ತೇನೆ. 90ರ ದಶಕದಲ್ಲಿ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಈ ರೀತಿಯ ಯಾವುದೇ ಪೂರ್ವಾಗ್ರಹ ಪಕ್ಷಪಾತ ಇರಲಿಲ್ಲ. ಈಗ ನನ್ನ ಕಿವಿಗೆ ಬಿದ್ದಿದೆ. ಮ್ಯೂಸಿಕ್ಕಂಪನಿಯೊಂದು ನಿಮ್ಮನ್ನು ಬದಿಗೊತ್ತಿ ಐವರು ಸಂಗೀತ ನಿರ್ದೇಶಕರ ಜೊತೆ ಒಪ್ಪಂದ ಮಾಡಿಕೊಂಡಿದೆ ಅಂದಿದ್ದರು.
ಹೌದಾ.. ಗ್ರೇಟ್.. ಹಾಗಾದರೆ ನಾನು ನನ್ನ ಕುಟುಂಬದ ಜೊತೆ ಸಮಯ ಕಳೀಬೋದು ಅಂದಿದ್ದೆ. ಆದರೆ, ಕಳೆದ 8 ವರ್ಷಗಳಲ್ಲಿ ಅಧಿಕಾರ ಬದಲಾವಣೆ ಆಗಿದ್ದು, ಸೃಜನಶೀಲತೆ ಇಲ್ಲದವರು ಈಗ ಎಲ್ಲವನ್ನೂ ನಿರ್ಣಯಿಸ್ತಿದ್ದಾರೆ. ಇದು ಮತೀಯವಾದವೂ ಇರಬಹುದು ಅಂದಿದ್ದಾರೆ. ರೋಜಾ, ಬಾಂಬೆ, ದಿಲ್ಸೇ, ತಾಲ್ ಚಿತ್ರಗಳಂಥ ಎವರ್ಗ್ರೀನ್ ಹಾಡು-ಸಂಗೀತ ಕೊಟ್ಟಿದ್ದರೂ ಈಗಲೂ ಅಲ್ಲಿ ನಾನು ಹೊರಗಿನವನಾಗಿದ್ದೇನೆ. ಸಂಗೀತ ದಂತಕಥೆ ಇಳಯರಾಜಾ ಅವರ ಸ್ಥಿತಿಯೂ ಹಾಗೇ ಆಗಿದೆ ಎಂದು ಹೇಳಿದ್ದರು.ಇದನ್ನೂ ಓದಿ: ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಶಿಕ್ಷೆಯಾಗಲೇಬೇಕು, ‘ಮಹಾ ಜಂಗಲ್ ರಾಜ್’ ಯುಗ ಕೊನೆಗೊಳಿಸಬೇಕು: ಮೋದಿ ಕರೆ

