ಕೇಂದ್ರ, ರಾಜ್ಯ ಸರ್ಕಾರ ಯಾವುದೇ ಆಡಳಿತವಾಗಲಿ ಕಾಲಕ್ಕೆ ತಕ್ಕಂತೆ ಕೆಲಸ ಮಾಡಬೇಕು: ಮೋದಿ

Public TV
2 Min Read

ನವದೆಹಲಿ: ದೇಶದ ಎಲ್ಲ ಭಾಗದಲ್ಲೂ ಒಂದಲ್ಲ ಒಂದು ರೂಪದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ವಿಶ್ವದ ಮೂಲೆ ಮೂಲೆಯಲ್ಲಿರುವ ಭಾರತೀಯರು ಧ್ವಜಾರೋಹಣ ಮಾಡುತ್ತಿದ್ದಾರೆ. ಅನಿವಾಸಿ ಭಾರತೀಯರಿಗೂ ನಾನು ಶುಭಾಶಯ ಕೋರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

ಇಂದು ಬೆಳಗ್ಗೆ ರಾಜಘಾಟ್ ಗೆ ಆಗಮಿಸಿ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ ಬಳಿಕ ಕೆಂಪುಕೋಟೆಗೆ ತೆರಳಿ ಮಾತನಾಡಿದ ಅವರು, ಕೇಂದ್ರ, ರಾಜ್ಯ ಸರ್ಕಾರ, ಯಾವುದೇ ಆಡಳಿತವಾಗಲಿ ಕಾಲಕ್ಕೆ ತಕ್ಕಂತೆ ಕೆಲಸ ಮಾಡಬೇಕು. ದೇಶದ ಅಭಿವೃದ್ಧಿಗೆ ತಕ್ಕಂತೆ ಕೆಲಸ ಮಾಡಬೇಕು. ದೇಶದ ಜನರನ್ನು ಕಾಯಿಸಲು ಸಾಧ್ಯವಿಲ್ಲ ಎಂದರು.

ಗುಲಾಮಿತನದ ವಿರುದ್ಧ ಸಾಕಷ್ಟು ಜನರು ಹೋರಾಟ ಮಾಡುತ್ತಿದ್ದಾರೆ. ಜೈಲು ಶಿಕ್ಷೆ ಅನುಭವಿಸಿದ್ದಾರೆ, ಯುದ್ಧ ಮಾಡಿದ್ದಾರೆ, ಪ್ರಾಣ ತ್ಯಾಗ ಮಾಡಿದ್ದಾರೆ. ಅಂತಹ ಮಹನೀಯರ ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಜೊತೆಗೆ ಅವರ ಕನಸುಗಳನ್ನು ಈಡೇರಿಸಬೇಕಿದೆ. ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವಾರು ಮಹಿಳೆಯರು ದೇಶ ಮಹಿಳೆಯ ಶಕ್ತಿ ಏನು ಎನ್ನುವುದು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್, ನೆಹರೂ, ಸರ್ದಾರ್ ಪಟೇಲ್ ಸೇರಿ ಹಲವಾರು ನಾಯಕರು ಸ್ವಾತಂತ್ರ್ಯ ಭಾರತವನ್ನು ಕಟ್ಟಿದ್ದಾರೆ. ನಾವು ಅವರಿಗೂ ನಮನಗಳನ್ನು ಸಲ್ಲಿಸಬೇಕು. ದೇಶದಲ್ಲಿ ಲಕ್ಷಾಂತರ ಕಾರ್ಯಕ್ರಮಗಳು ನಡೆದಿವೆ. ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ನಡೆದಿದೆ. ಏಕ ಉದ್ದೇಶದ ಇಂತಹ ಕಾರ್ಯಕ್ರಮ ನಡೆದಿರುವುದು ಇದೇ ಮೊದಲು. ಈ ಮೂಲಕ ಮಹನೀಯರ ನೆನಪು ಮಾಡಿಕೊಳ್ಳುವ ಪ್ರಯತ್ನ ಆಗಿದೆ. ಅವರಿಗೆ ಗೌರವ ಸಲ್ಲಿಸುವ ಕೆಲಸವೂ ಆಗಿದೆ. ನಿನ್ನೆ ಭಾರತ ಇಬ್ಭಾಗವಾದ ದಿನವನ್ನು ಆಚರಿಸಿದೆ ಎಂದು ತಿಳಿಸಿದರು.

75 ವರ್ಷದ ಈ ಯಾತ್ರೆ ಹಲವು ಏಳು ಬೀಳು ಕಂಡಿದೆ. ಸುಖ-ದುಃಖಗಳನ್ನು ಕಂಡಿದೆ. ಇವುಗಳ ನಡುವೆ ಭಾರತವನ್ನು ಕಟ್ಟಿದೆ. ಎಲ್ಲೂ ಸೋಲನ್ನು ಒಪ್ಪಿಕೊಂಡಿಲ್ಲ. ಸ್ವಾತಂತ್ರ್ಯಕ್ಕೂ ಮುನ್ನ ಸಾಕಷ್ಟು ಕುತಂತ್ರಗಳನ್ನು ಮಾಡಲಾಯ್ತು. ಬ್ರಿಟಿಷ್‍ರು ಭಾರತ ಬಿಟ್ಟು ಹೋದರೇ ಭಾರತ ಒಡೆದು ಹೋಗುತ್ತದೆ. ನಾಗರಿಕ ಯುದ್ಧವಾಗುತ್ತೆ ಎಂದು ಭಯ ಹುಟ್ಟಿಸಿದರು. ಆದರೆ ಇದು ಹಿಂದೂಸ್ತಾನ್, ಇಲ್ಲಿ ಯಾವುದು ಆಗಲಿಲ್ಲ ಎಂದು ಮೋದಿ ನುಡಿದರು.

ಸ್ವಾತಂತ್ರ್ಯದ ಬಳಿಕ ಸಾಕಷ್ಟು ಸಂಕಷ್ಟ ಎದುರಿಸಿದೆ. ಕೆಲವೊಮ್ಮೆ ಅನ್ನದ ಸಮಸ್ಯೆ, ಇನ್ನು ಕೆಲವೊಮ್ಮೆ ಯುದ್ಧ ಹೀಗೆ ಹಲವು ಸಂಕಷ್ಟಗಳ ನಡುವೆ ದೇಶ ಎದ್ದು ನಿಂತಿದೆ. ವಿವಿಧತೆಯಲ್ಲಿ ಏಕತೆ ಹೊಂದಿದೆ. ಪ್ರಜಾಪ್ರಭುತ್ವದ ತಾಯಿಯಾಗಿದೆ. ಸ್ವತಂತ್ರ ಸಿಕ್ಕಿದ ನಂತರ ಜನಿಸಿ ಪ್ರಧಾನಿಯಾದ ಮೊದಲ ವ್ಯಕ್ತಿ ನಾನು. ದೇಶದ ಜನರು ನನಗೆ ಆರ್ಶೀವಾದ ಮಾಡಿದರು. ದೇಶದ ನಿರೀಕ್ಷೆಗಳನ್ನು ಅರಿತು ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲ ವರ್ಗದ ಜನರ ಬಗ್ಗೆ ಚಿಂತಿಸುತ್ತಿದ್ದೇನೆ. ಮಹಾತ್ಮಾ ಗಾಂಧಿಅವರ ಚಿಂತನೆಯಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿ ಬಗ್ಗೆ ಚಿಂತಿಸಿದ್ದೇನೆ ಎಂದು ತಿಳಿಸಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *