ಪಾಕಿಸ್ತಾನದ ಆಹ್ವಾನವನ್ನು ತಿರಸ್ಕರಿಸಿದ ಭಾರತ

Public TV
2 Min Read

ನವದೆಹಲಿ: ಸಾರ್ಕ್ ಶೃಂಗ ಸಭೆಯ ಆಹ್ವಾನವನ್ನು ನೀಡಿದ್ದ ಪಾಕ್ ಗೆ ಭಾರತ ತಿರುಗೇಟು ನೀಡಿದ್ದು, ಯಾವುದೇ ಕಾರಣಕ್ಕೂ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಹೇಳಿದೆ.

ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳದಿರುವ ನಿಲುವನ್ನು ಭಾರತ ಬದಲಾಯಿಸುವ ಸಾಧ್ಯತೆಯೇ ಇಲ್ಲ. ಅಲ್ಲದೇ ಇಸ್ಲಾಮಾಬಾದ್ ನಲ್ಲಿ ನಡೆಯುವ ಸಾರ್ಕ್ ಶೃಂಗಸಭೆಯಲ್ಲಿ ಭಾರತ ಪಾಲ್ಗೊಳ್ಳುವ ಸಾಧ್ಯತೆ ಇಲ್ಲವೆಂದು ತಿಳಿದುಬಂದಿದೆ.

ಶೃಂಗಸಭೆ ಕುರಿತು ಪಾಕ್ ಆಹ್ವಾನಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್, ಭಯೋತ್ಪಾದನೆ ಮತ್ತು ಮಾತಕತೆ ಒಟ್ಟಿಗೆ ಸಾಗಲು ಸಾಧ್ಯವಿಲ್ಲ. ಈ ಬಗ್ಗೆ ಭಾರತ ತನ್ನ ನಿರ್ಧಾರಕ್ಕೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಕರ್ತಾರ್‍ಪುರ್ ಕಾರಿಡಾರ್ ಬಗ್ಗೆ ಮಾತನಾಡಿದ ಅವರು, ಕಾರಿಡಾರ್ ಬಗ್ಗೆ ಭಾರತ ಸರ್ಕಾರ ಅನೇಕ ಬಾರಿ ಪಾಕಿಸ್ತಾನದ ಬಳಿ ಕೇಳಿಕೊಂಡಿತ್ತು. ಆದರೆ ಪಾಕ್ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಈಗ ಪಾಕ್ ಈ ಬಗ್ಗೆ ಧನಾತ್ಮಕವಾಗಿ ಸ್ಪಂದಿಸಿದೆ. ಆದರೆ ಈ ಮೂಲಕ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆಗಳು ಆರಂಭವಾಗುತ್ತವೆಂದು ಹೇಳಲಾಗುವುದಿಲ್ಲ. ಹೀಗಾಗಿ ಭಯೋತ್ಪಾದನೆ ಮತ್ತು ಮಾತುಕತೆಗಳು ಜೊತೆಗ ಸಾಗಲಾರವು ಎಂದು ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಾಕ್ ವಿದೇಶಾಂಗ ವಕ್ತಾರ ಡಾ. ಮೊಹಮ್ಮದ್ ಫೈಸಲ್, ಸಾರ್ಕ್ ಶೃಂಗಸಭೆಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗುವುದು. ಅಲ್ಲದೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಮೊದಲ ಭಾಷಣದಲ್ಲಿ ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ಮಾತುಕತೆಯ ವಿಚಾರದಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ, ಪಾಕ್ ಎರಡು ಹೆಜ್ಜೆ ಮುಂದಿಡುತ್ತದೆ ಎನ್ನುವ ವಿಚಾರವನ್ನೂ ಸಹ ಪ್ರಸ್ತಾಪಿಸಿದ್ದರು.

ಸಾರ್ಕ್ ಶೃಂಗ ಸಭೆ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತವೆ. 2014ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಮೋದಿಯವರು ಪಾಲ್ಗೊಂಡಿದ್ದರು. ಆದರೆ 2016ರಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆಯಬೇಕಿದ್ದ ಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿರಲಿಲ್ಲ. ಏಕೆಂದರೆ 2016ರ ಸೆಪ್ಟೆಂಬರ್ 18 ರಂದು ಪಾಕ್ ಉಗ್ರಗಾಮಿಗಳು ಜಮ್ಮು ಕಾಶ್ಮೀರದ ಉರಿ ಪ್ರದೇಶದಲ್ಲಿನ ಭಾರತೀಯ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ, 19 ಯೋಧರನ್ನು ಬಲಿ ಪಡೆದುಕೊಂಡಿದ್ದರು. ಹೀಗಾಗಿ ದಾಳಿಯನ್ನು ಖಂಡಿಸಿ ಭಾರತ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವುದು ಅಸಾಧ್ಯವೆಂದು ತಿಳಿಸಿತ್ತು.

ಉಗ್ರ ದಾಳಿಯಿಂದಾಗಿ ಭಾರತ ಶೃಂಗ ಸಭೆಗೆ ಹಿಂದೆ ಸರಿದ ಬೆನ್ನಲ್ಲೇ, ಸಾರ್ಕ್ ಸದಸ್ಯ ರಾಷ್ಟ್ರಗಳಾದ ಬಾಂಗ್ಲಾದೇಶ, ಭೂತಾನ್ ಹಾಗೂ ಅಪ್ಘಾನಿಸ್ತಾನ ದೇಶಗಳು ಕೂಡ ಸಭೆಗೆ ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಪಾಕಿಸ್ತಾನ ಅನಿವಾರ್ಯವಾಗಿ ಶೃಂಗಸಭೆಯನ್ನು ಮುಂದೂಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಪಾಕ್ ವಿದೇಶಾಂಗ ಇಲಾಖೆ, ಶೃಂಗಸಭೆಯನ್ನು ಮುಂದೂಡಿದ್ದರೂ ಭವಿಷ್ಯದಲ್ಲಿ ಮತ್ತೆ ಸಭೆಯ ಆತಿಥ್ಯವನ್ನು ನಾವೇ ವಹಿಸುತ್ತೇವೆ ಎಂದು ಹೇಳಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *