ಸಂವಿಧಾನ ಮೌಲ್ಯಗಳಿಗೆ ಬದ್ಧವಾದ ಪಕ್ಷಗಳಿಗೆ ಸ್ವಾಗತ: ‘ಇಂಡಿಯಾ’ ಮೈತ್ರಿಕೂಟಕ್ಕೆ ಖರ್ಗೆ ಆಹ್ವಾನ

Public TV
1 Min Read

ನವದೆಹಲಿ: ಮೋದಿಗೆ (Narendra Modi) ದೊಡ್ಡ ರಾಜಕೀಯ ನಷ್ಟವಾಗಿದೆ ಎಂದು ಜನಾದೇಶ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮಾತನಾಡಿದ್ದಾರೆ.

ಫಲಿತಾಂಶ ಕುರಿತು ಚರ್ಚೆಗೆ ಖರ್ಗೆ ನಿವಾಸದಲ್ಲಿ ಇಂದು ಇಂಡಿಯಾ ಮೈತ್ರಿಕೂಟದ (INDIA Bloc) ನಾಯಕರು ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಖರ್ಗೆ, ನಾವು ಉತ್ತಮವಾಗಿ ಹೋರಾಡಿದ್ದೇವೆ. ಒಗ್ಗಟ್ಟಿನಿಂದ ಹೋರಾಡಿದ್ದೇವೆ, ದೃಢವಾಗಿ ಹೋರಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿಯೇ ಪ್ರಧಾನಿಯಾಗಲಿ: ಎನ್‌ಡಿಎ ಸಭೆಯಲ್ಲಿ ‘ನಮೋ’ ನಾಯಕತ್ವಕ್ಕೆ ಬಹುಪರಾಕ್‌

ನಮ್ಮ ಸಂವಿಧಾನ ಮತ್ತು ಅದರ ಮುನ್ನುಡಿಯಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ತನ್ನ ಮೂಲಭೂತ ಬದ್ಧತೆಯನ್ನು ಹಂಚಿಕೊಳ್ಳುವ ಎಲ್ಲಾ ಪಕ್ಷಗಳನ್ನು ಇಂಡಿಯಾ ಒಕ್ಕೂಟವು ಸ್ವಾಗತಿಸುತ್ತದೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯಕ್ಕಾಗಿ ಹೋರಾಡಿದ್ದೆವು. ಜನಾದೇಶವು ನಿರ್ಣಾಯಕವಾಗಿದೆ ಎಂದರು.

ಮೋದಿ ವಿರುದ್ಧ ಮತ್ತು ಅವರ ರಾಜಕೀಯದ ಶೈಲಿಗೆ ಸ್ಪಷ್ಟವಾದ ನೈತಿಕ ಸೋಲು ಇದು. ಇದರ ಹೊರತಾಗಿ ಮೋದಿಗೆ ದೊಡ್ಡ ರಾಜಕೀಯ ನಷ್ಟವಾಗಿದೆ. ಅವರು ಜನರ ಇಚ್ಛೆಯನ್ನು ಬುಡಮೇಲು ಮಾಡಲು ನಿರ್ಧರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಕನ್ನಡಿಗ ಪ್ರವಾಸಿಗರ ನಾಪತ್ತೆ ಪ್ರಕರಣ- ಸರ್ಕಾರಕ್ಕೆ ವಿಜಯೇಂದ್ರ ಆಗ್ರಹ

ಇಂಡಿಯಾ ಒಕ್ಕೂಟದ ನಾಯಕರ ಸಭೆಯಲ್ಲಿ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ, ನಾಯಕ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌, ಕೆ.ಸಿ.ವೇಣುಗೋಪಾಲ್‌, ಶರದ್‌ ಪವಾರ್‌, ಸುಪ್ರಿಯಾ ಸುಳೆ, ಟಿ.ಆರ್‌.ಬಾಲು, ಅಖಿಲೇಶ್‌ ಯಾದವ್‌, ರಾಮಗೋಪಾಲ್‌ ಯಾದವ್‌, ಅರವಿಂದ್‌ ಸಾವಂತ್‌, ಅಭಿಷೇಕ್‌ ಬ್ಯಾನರ್ಜಿ, ಸಂಜಯ್‌ ಯಾದವ್‌, ಸಂಜಯ್‌ ರಾವತ್‌, ಚಂಪೈ ಸೊರೇನ್‌, ಓಮರ್‌ ಅಬ್ದುಲ್ಲಾ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.

Share This Article