ವಿಶ್ವಕಪ್‍ನಿಂದ ವಿಜಯ್ ಶಂಕರ್ ಔಟ್ – ಕನ್ನಡಿಗ ಮಯಾಂಕ್ ಆಯ್ಕೆ ಸಾಧ್ಯತೆ

Public TV
2 Min Read

ನವದೆಹಲಿ: ವಿಶ್ವಕಪ್‍ನಲ್ಲಿ ಭಾರತಕ್ಕೆ ಸಾಲು ಸಾಲು ಗಾಯದ ಸಮಸ್ಯೆ ಕಾಡುತ್ತಿದ್ದು, ಆರಂಭಿಕ ಆಟಗಾರ ಶಿಖರ್ ಧವನ್ ಅವರು ಗಾಯದ ಸಮಸ್ಯೆಯಿಂದ ಹೊರಹೋಗಿದ್ದರು. ಈಗ ಭಾರತಕ್ಕೆ ಮತ್ತೊಂದು ಹೊಡೆತ ಬಿದ್ದಿದ್ದು ಆಲ್‍ರೌಂಡರ್ ವಿಜಯ್ ಶಂಕರ್ ಕೂಡ ಹೊರಹೋಗಿದ್ದಾರೆ. ಅವರ ಸ್ಥಾನಕ್ಕೆ ಕನ್ನಡಿಗ ಮಯಾಂಕ್  ಅಗರ್ವಾಲ್‍ಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನೆಟ್‍ನಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ಅಭ್ಯಾಸ ನಡೆಸುತ್ತಿದ್ದ ವಿಜಯ್ ಶಂಕರ್ ಅವರ ಕಾಲಿನ ಬೆರಳಿಗೆ ಚೆಂಡು ಬಡಿದಿತ್ತು. ನಂತರ ಅವರು ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು ಆದರೆ ಮತ್ತೆ ಆ ಗಾಯದ ಸಮಸ್ಯೆ ಹೆಚ್ಚು ಉಲ್ಬಣವಾಗಿರುವ ಕಾರಣ ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ.

ಈಗ ವಿಚಾರವಾಗಿ ಮಾತನಾಡಿರುವ ಬಿಸಿಸಿಐನ ಅಧಿಕಾರಿಯೊಬ್ಬರು, ಜಸ್ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ಅಭ್ಯಾಸ ನಡೆಸುತ್ತಿದ್ದ ವಿಜಯ್ ಶಂಕರ್ ಅವರ ಕಾಲಿನ ಬೆರಳಿಗೆ ಚೆಂಡು ಬಡಿದಿತ್ತು. ಇದರಿಂದ ಈಗ ಅವರ ಗಾಯದ ಪರಿಸ್ಥಿತಿ ಉತ್ತಮವಾಗಿಲ್ಲ ಮತ್ತು ಅವರು ಮುಂದಿನ ಪಂದ್ಯಗಳನ್ನು ಆಡಲು ಆಗುವುದಿಲ್ಲ. ಅವರನ್ನು ಭಾರತಕ್ಕೆ ವಾಪಸ್ ಕಳಿಸುತ್ತೇವೆ ಎಂದು ಹೇಳಿದ್ದಾರೆ.

ವಿಶ್ವಕಪ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ವಿಜಯ್ ಶಂಕರ್ ಅವರು ಪಾಕಿಸ್ತಾನ ವಿರುದ್ಧದ ತನ್ನ ಮೊದಲ ಪಂದ್ಯದ ಮೊದಲನೇ ಎಸೆತದಲ್ಲಿ ವಿಕೆಟ್ ಕಿತ್ತು ಮಿಂಚಿದ್ದರು. ವಿಶ್ವಕಪ್‍ನಲ್ಲಿ ಭಾರತದ ಪರ ಎರಡು ಪಂದ್ಯಗಳನ್ನು ಆಡಿದ ವಿಜಯ್ ಶಂಕರ್ 58 ರನ್ ಗಳಿಸಿ 2 ವಿಕೆಟ್ ಪಡೆದಿದ್ದರು.

ಈಗ ವಿಜಯ್ ಶಂಕರ್ ಅವರ ಸ್ಥಾನಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಬದಲಿ ಆಟಗಾರನಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಒಂದು ವೇಳೆ ಮುಂದಿನ ಪಂದ್ಯಗಳಲ್ಲಿ ರಿಷಬ್ ಪಂತ್ ವಿಫಲವಾದರೆ ಕೆ.ಎಲ್ ರಾಹುಲ್ ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸಿ ಮಯಾಂಕ್  ಅಗರ್ವಾಲ್ ಅವರನ್ನು ಆರಂಭಿಕನಾಗಿ ಆಡಿಸಲು ಟೀಂ ಇಂಡಿಯಾ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದ ಟಾಸ್ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಆಲ್‍ರೌಂಡರ್ ವಿಜಯ್ ಶಂಕರ್ ಅವರು ಕಾಲಿನ ಬೆರಳಿಗೆ ಪೆಟ್ಟಗಿದೆ ಅವರ ಬದಲು ರಿಷಬ್ ಪಂತ್ ಅವರನ್ನು ಆಡಿಸಲಾಗುತ್ತಿದೆ ಎಂದು ಹೇಳಿದ್ದರು. ಈಗ ವಿಶ್ವಕಪ್‍ನಿಂದಲೇ ಹೊರಹೋಗಿರುವ ವಿಜಯ್ ಶಂಕರ್ ಅವರ ಬದಲು ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಕರ್ನಾಟಕದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರು ಸ್ಥಾನ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *