ಕೇಶವ್ ಮಹಾರಾಜ್ ಎಂಟ್ರಿಗೆ `ರಾಮ್ ಸಿಯಾ ರಾಮ್’ ಹಾಡು – ಕ್ರಿಕೆಟ್ ಅಂಗಳದಲ್ಲಿ ಮತ್ತೆ ಶ್ರೀರಾಮನ ಸದ್ದು

Public TV
3 Min Read

– ಕೇಶವ್ ಜೊತೆಗೆ ಕೆ.ಎಲ್ ರಾಹುಲ್ ಸಂಭಾಷಣೆ ವೈರಲ್
– ಅಪ್ಪಟ ರಾಮ-ಹನುಮನ ಭಕ್ತ ಕೇಶವ್ ಮಹಾರಾಜ್

ಪರ್ಲ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಹರಿಣರ ತಂಡದ ಕೇಶವ್ ಮಹಾರಾಜ್ (Keshav Maharaj) ಕ್ರೀಸ್‌ಗೆ ಬಂದ ವೇಳೆ ಟೀಂ ಇಂಡಿಯಾ ನಾಯಕ ಕೆ.ಎಲ್ ರಾಹುಲ್ (KL Rahul) ನಡೆಸಿದ ಸಣ್ಣ ಸಂಭಾಷಣೆಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕೇಶವ್ ಮಹಾರಾಜ್ ಕ್ರೀಸ್‌ಗೆ ಬಂದಕೂಡಲೇ `ರಾಮ್ ಸಿಯಾ ರಾಮ್ (Ram Siya Ram), ಜೈ ಜೈ ರಾಮ್, ಸೀತಾರಾಮ್’ ಗೀತೆಯನ್ನು ನುಡಿಸಲಾಗಿತ್ತು. ಇದನ್ನೂ ಓದಿ: ಸಂಜು ಸ್ಯಾಮ್ಸನ್ ಚೊಚ್ಚಲ ಶತಕ – ಸಂಭ್ರಮದಲ್ಲಿ ತೋಳ್ಬಲ ಪ್ರದರ್ಶನ!

ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South Africa) ಚೇಸಿಂಗ್ ವೇಳೆ, 33.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿದ್ದಾಗ ಆಲ್‌ರೌಂಡರ್ ಕೇಶವ್ ಮಹಾರಾಜ್ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದರು. ಕೇಶವ್ ಬರುತ್ತಿದ್ದಂತೆ ಪರ್ಲ್‌ನ ಬೋಲ್ಯಾಂಡ್ ಪಾರ್ಕ್ ಸ್ಪೀಕರ್‌ಗಳಲ್ಲಿ `ರಾಮ್ ಸಿಯಾ ರಾಮ್’ ಹಾಡು ಮೊಳಗಿತು. ಭಾರತ ಮೂಲದವರೇ ಆದ ಕೇಶವ್ ಮಹಾರಾಜ್ ದೈವಭಕ್ತ ಎಂಬುದು ಹೊಸ ವಿಷಯವೇನಲ್ಲ. ಇದಕ್ಕೆ ಪುಷ್ಠಿ ನೀಡುವಂತೆ ಅವರಿಗೊಪ್ಪುವ ಹಾಡನ್ನೇ ಅವರ ಎಂಟ್ರಿ ವೇಳೆ ಪ್ರಸಾರ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ವಿಕೆಟ್ ಕೀಪರ್ ಆಗಿದ್ದ ಟೀಂ ಇಂಡಿಯಾ ನಾಯಕ ಕೆ.ಎಲ್ ರಾಹುಲ್, ಈ ಹಾಡನ್ನು ಆಲಿಸಿ ವಿಷಯವೊಂದನ್ನು ಗಮನಿಸಿದ್ದಾರೆ. ಕೇಶವ್ ಮಹಾರಾಜ್ ಪ್ರತಿ ಬಾರಿ ಬ್ಯಾಟಿಂಗ್‌ಗೆ ಕಾಲಿಟ್ಟಾಗಲೆಲ್ಲಾ ಈ ಹಾಡನ್ನೇ ನುಡಿಸುತ್ತಾರೆ ಎಂಬುದು ಅವರಿಗೆ ಗೊತ್ತಾಗಿದೆ. ಹೀಗಾಗಿ ರಾಹುಲ್ ಮುಗುಳ್ನಗುವಿನೊಂದಿಗೆ ಕೇಶವ್ ಮಹಾರಾಜ್ ಬಳಿಯೇ ಈ ಪ್ರಶ್ನೆ ಕೇಳಿದ್ದಾರೆ. ಕೇಶವ್ ಕೂಡ ನಗುತ್ತಲೇ ಹೌದು. ಪ್ರತಿಬಾರಿ ಕ್ರೀಸ್‌ಗೆ ಬರುವಾಗ ಈ ಗೀತೆಯನ್ನ ಪ್ರಸಾರ ಮಾಡಲಾಗುತ್ತೆ ಎಂಬುದನ್ನ ಒಪ್ಪಿಕೊಂಡಿದ್ದಾರೆ. ಸದ್ಯ ಈ ಕುರಿತ ವೀಡಿಯೋ ತುಣುಕು ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

2023ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ 1 ವಿಕೆಟ್ ಜಯ ಸಾಧಿಸಲು ಕೇಶವ್ ಮಹಾರಾಜ್ ದಕ್ಷಿಣ ಆಫ್ರಿಕಾಗೆ ನೆರವಾಗಿದ್ದರು. ಆಗಲೂ ಆ ಗೆಲುವನ್ನ ರಾಮನ ಭಕ್ತ ಹನುಮಾನ್‌ಗೆ ಅರ್ಪಿಸಿದ್ದರು. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಗೆಲುವಿನ ಕ್ಷಣಗಳ ಫೋಟೋ ಹಂಚಿಕೊಂಡು `ಜೈ ಶ್ರೀ ಹನುಮಾನ್’ ಅಂತಲೂ ಬರೆದುಕೊಂಡಿದ್ದರು.

ಭಾರತೀಯ ಮೂಲದ ಕೇಶವ ಮಹರಾಜ್ ಫೆಬ್ರವರಿ 7, 1990 ರಂದು ಡರ್ಬನ್‌ನಲ್ಲಿ ಜನಿಸಿದರು. ಆಂಜನೇಯ ಸ್ವಾಮಿ ಹೆಚ್ಚು ಪೂಜಿಸುವ ಮಹಾರಾಜ್ ತಮ್ಮ ಇನ್‌ಸ್ಟಾಗ್ರಾಮ್ ಬಯೋದಲ್ಲೂ `ಜೈ ಶ್ರೀರಾಮ್, ಜೈ ಶ್ರೀ ಹನುಮಾನ್’ ಎಂದು ಬರೆದುಕೊಂಡಿರುವುದು ವಿಶೇಷ. ಇದನ್ನೂ ಓದಿ: ಈಗಲೂ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದೇವೆ, ನಮ್ಮ ದುಃಖ ಯಾರಿಗೆ ಹೇಳೋಣ? – ನಿಲ್ಲದ ಕುಸ್ತಿಪಟುಗಳ ವೇದನೆ

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯವು ಹಲವು ವಿಶೇಷ ಬೆಳವಣಿಗೆ ಮತ್ತು ದಾಖಲೆಗೆ ಸಾಕ್ಷಿಯಾಯಿತು. ಕೇರಳ ಮೂಲದ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದರು. 2-1 ಅಂತರದಲ್ಲಿ ಸರಣಿ ಗೆಲ್ಲುವ ಮೂಲಕ ಕೆ.ಎಲ್ ರಾಹುಲ್ ದಕ್ಷಿಣ ಆಫ್ರಿಕಾದಲ್ಲಿ ವಿರಾಟ್ ಕೊಹ್ಲಿ ಬಳಿಕ ಸರಣಿ ಗೆದ್ದ 2ನೇ ನಾಯಕ ಎಂಬ ಖ್ಯಾತಿ ವಿಶೇಷ ಸಾಧನೆ ಮಾಡಿದರು. ವೇಗಿ ಅರ್ಷ್ದೀಪ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಕೆ.ಎಲ್ ರಾಹುಲ್ ಸೈನ್ಯ ಸಂಜು ಸ್ಯಾಮ್ಸನ್ ಶತಕ, ತಿಲಕ್ ವರ್ಮಾ ಅರ್ಧಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತ್ತು. 297 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಹರಿಣರ ಬಳಗ 218 ರನ್‌ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಹರಿಣರ ಬೇಟೆಯಾಡಿ ಸರಣಿ ಗೆದ್ದ ಭಾರತ – ಧೋನಿ ಟ್ರೆಂಡ್‌ ಮುಂದುವರಿಸಿದ ಕೆ.ಎಲ್‌ ರಾಹುಲ್‌

Share This Article