ಮ್ಯಾಂಚೆಸ್ಟರ್: ಇಂಗ್ಲೆಂಡ್ ಮತ್ತು ಭಾರತ (Eng vs Ind) ನಡುವಿನ 4ನೇ ಟೆಸ್ಟ್ ಪಂದ್ಯಕ್ಕೆ ಐತಿಹಾಸಿಕ ಮ್ಯಾಂಚೆಸ್ಟರ್ (Manchester) ಕ್ರೀಡಾಂಗಣ ಸಜ್ಜಾಗಿದ್ದು, ಉಭಯ ತಂಡಗಳು ಹಲವು ಬದಲಾವಣೆ ಮಾಡಿಕೊಂಡಿವೆ.
ಹೌದು. ಇದೀಗ ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ (Anderson–Tendulkar Trophy) ಆತಿಥೇಯ ಇಂಗ್ಲೆಂಡ್ ತಂಡವು 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ಸರಣಿ ಗೆಲ್ಲಲು ಇನ್ನೊಂದು ಗೆಲುವಿನ ಅಗತ್ಯವಿದೆ. ಆದ್ರೆ ಭಾರತ ಸರಣಿ ಗೆಲ್ಲಲು ಇನ್ನುಳಿದ ಎರಡೂ ಪಂದ್ಯಗಳನ್ನೂ ಗೆಲ್ಲಬೇಕಾದ ಅನಿವಾರ್ಯತೆ ಇದೆ. 4ನೇ ಟೆಸ್ಟ್ ಪಂದ್ಯ ಇಂದಿನಿಂದ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಧ್ಯಾಹ್ನ 3:30ಕ್ಕೆ ಪಂದ್ಯ ಶುರುವಾಗಲಿದೆ. ಇದನ್ನೂ ಓದಿ: WTC Final | 2031ರ ವರೆಗೆ ಇಂಗ್ಲೆಂಡ್ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯ
ಬೌಲಿಂಗ್ ಪಡೆಗೆ ಬುಮ್ರಾ ಸಾರಥ್ಯ
ಮ್ಯಾಂಚೆಸ್ಟರ್ ಪಂದ್ಯಕ್ಕೆ ಟೀಂ ಇಂಡಿಯಾದ ಮೂವರು ಆಟಗಾರರು ಅಲಭ್ಯರಾಗಿದ್ದಾರೆ. 3ನೇ ಟೆಸ್ಟ್ (Test Cricket) ಪಂದ್ಯದ ಬಳಿಕ ನಡೆದ ಅಭ್ಯಾಸದ ವೇಳೆ ಟೀಮ್ ಇಂಡಿಯಾದ ಎಡಗೈ ವೇಗಿ ಅರ್ಷ್ದೀಪ್ ಸಿಂಗ್ ಅವರ ಕೈಗೆ ಗಾಯವಾಗಿದ್ದು, ಹೀಗಾಗಿ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲೂ ಅವರು ಕಾಣಿಸಿಕೊಳ್ಳುವುದಿಲ್ಲ. ಇನ್ನೂ ಎಜ್ಬಾಸ್ಟನ್ನಲ್ಲಿ ಐತಿಹಾಸಿಕ ಗೆಲುವಿಗೆ ಕಾರಣವಾಗಿದ್ದ ವೇಗಿ ಆಕಾಶ್ ದೀಪ್ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲಾರ್ಡ್ಸ್ ಟೆಸ್ಟ್ ಪಂದ್ಯದ 4ನೇ ದಿನದಾಟದಂದು ತೊಡೆಸಂದು ಗಾಯದ ಸಮಸ್ಯೆಗೆ ಒಳಗಾಗಿದ್ದ ಆಕಾಶ್ ದೀಪ್ ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 8 ಓವರ್ಗಳನ್ನು ಮಾತ್ರ ಎಸೆದಿದ್ದರು ಎಂದು ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ತಿಳಿಸಿದ್ದಾರೆ. ಹೀಗಾಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಟೀಂ ಇಂಡಿಯಾ ಬೌಲಿಂಗ್ ಪಡೆಯನ್ನ ಮುನ್ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೇ ಟೀಮ್ ಇಂಡಿಯಾದ ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy) ಕೂಡ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಜಿಮ್ನಲ್ಲಿನ ತರಬೇತಿ ವೇಳೆ ಅವರ ಮೊಣಕಾಲಿಗೆ ಗಾಯವಾಗಿದ್ದು, ಹೀಗಾಗಿ ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಅವರು ಹೊರಬಿದ್ದಿದ್ದಾರೆ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ನಿತೀಶ್ ಕುಮಾರ್ ಬದಲಿಗೆ ಅನ್ಶುಲ್ ಕಾಂಬೋಜ್ ಅವರನ್ನು ಕಣಕ್ಕಿಳಿಸಲಿದೆ ಭಾರತ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪಾಕಿಗೆ ಮತ್ತೆ ಶಾಕ್, ಹಿಂದೆ ಸರಿದ ಟೀಂ ಇಂಡಿಯಾ – ಇಂದಿನ ಪಂದ್ಯವೇ ರದ್ದು
8 ವರ್ಷಗಳ ಬಳಿಕ ಸ್ಪಿನ್ನರ್ ಕಣಕ್ಕಿಳಿಸಲಿದೆ ಆಂಗ್ಲ ಪಡೆ
ಇನ್ನೂ ಸರಣಿ ಗೆಲ್ಲುವ ತವಕದಲ್ಲಿರುವ ಇಂಗ್ಲೆಂಡ್ ತಂಡ ಪ್ಲೇಯಿಂಗ್ 11 ಬಳಗವನ್ನ ಪ್ರಕಟಿಸಿದ್ದು, ಒಂದೇ ಒಂದು ಬದಲಾವಣೆ ಮಾಡಿಕೊಂಡಿದೆ. ಗಾಯಗೊಂಡಿರುವ ಸ್ಪಿನ್ನರ್ ಶೋಯೆಬ್ ಬಶೀರ್ ಬದಲಿಗೆ ಲಿಯಾಮ್ ಡಾಸನ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಬರೋಬ್ಬರಿ 8 ವರ್ಷಗಳ ಬಳಿಕ ಡಾಸನ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಲಿದ್ದಾರೆ. ಇದನ್ನೂ ಓದಿ:BCCI ಅಕೌಂಟ್ನಲ್ಲಿದೆ 30,000 ಕೋಟಿ ಹಣ – IPLನಿಂದಲೇ ಅತೀ ಹೆಚ್ಚು ಗಳಿಕೆ!
ಬಶೀರ್ಗೆ ಏನಾಗಿತ್ತು?
ಶೋಯೆಬ್ ಬಶೀರ್ ಅವರು ಲಾರ್ಡ್ಸ್ ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ವೇಳೆ ಎಡಗೈ ಬೆರಳಿಗೆ ಗಾಯ ಮಾಡಿಕೊಂಡರು. ಭಾರತದ ಎಡಗೈ ಬ್ಯಾಟರ್ ರವೀಂದ್ರ ಜಡೇಜಾ ಅವರ ಬಲವಾದ ಹೊಡೆತ ತಡೆಯಲು ಹೋಗಿ ಬೆರಳು ಮುರಿತಕ್ಕೆ ಒಳಗಾಯಿತು. ಹೀಗಾಗಿ ಅವರು ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿಯಬೇಕಾಗಿ ಬಂತು. ನಂತರ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಬಶೀರ್ 3ನೇ ಟೆಸ್ಟ್ ಪಂದ್ಯದಲ್ಲಿ ಕೊನೆಯ ವಿಕೆಟ್ ಪಡೆದು ಇಂಗ್ಲೆಂಡ್ಗೆ 22 ರನ್ಗಳ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.