ದಾಳಿ ನಡೆದಿರುವುದು ಸಚಿವ ಡಿಕೆಶಿ ಮೇಲೆ ಮಾತ್ರ, ಗುಜರಾತ್ ಶಾಸಕರಿಗೂ ಇದಕ್ಕೂ ಸಂಬಂಧವಿಲ್ಲ: ಐಟಿ

Public TV
3 Min Read

ಬೆಂಗಳೂರು: ಬೆಳ್ಳಂಬೆಳಗ್ಗೆ ನಗರದಲ್ಲಿ ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಇಂಧನ ಸಚಿವ ಡಿಕೆ ಶಿವಕುಮಾರ್ ಹಾಗೂ ಗುಜರಾತ್ ಶಾಸಕರು ತಂಗಿರುವ ಈಗಲ್‍ಟನ್ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದಾರೆ. ಆದ್ರೆ ಈ ದಾಳಿ ಸಚಿವರ ಮೇಲೆ ಮಾತ್ರ, ಗುಜರಾತ್ ಶಾಸಕರಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಕರ್ನಾಟಕದ ಸಚಿವರಿಗೆ ಸಂಬಂಧಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಕರ್ನಾಟಕ ತನಿಖಾ ತಂಡ ಶೋಧ ನಡೆಸುತ್ತಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 132 ಅಡಿ ನಡೆಯುತ್ತಿರುವ ಈ ಶೋಧ ಸಾಕ್ಷಿ ಸಂಗ್ರಹದ ಪ್ರಕ್ರಿಯೆಯಾಗಿದೆ. ನಿರ್ದಿಷ್ಟ ಸಮಯದಿಂದ ಚಾಲ್ತಿಯಲ್ಲಿರುವ ತನಿಖೆಯ ಮುಂದುವರಿದ ಭಾಗವಾಗಿ ಈ ದಾಳಿ ನಡೆಸಲಾಗಿದೆ ಎಂದು ಹೇಳಿದೆ.

ದಾಳಿಯ ಸಮಯವನ್ನ ಈ ಹಿಂದೆಯೇ ನಿಗದಿಪಡಿಸಲಾಗಿತ್ತು. ಬೇರೆ ರಾಜ್ಯದ ಶಾಸಕರನ್ನ ಕರ್ನಾಟಕಕ್ಕೆ ಕರೆತಂದಿರುವುದು ಅನಿರೀಕ್ಷಿತ ಅಷ್ಟೇ. ದಾಳಿ ನಡೆಸಲಾಗಿರುವ ಸಚಿವರು ಬೆಂಗಳೂರಿನ ರೆಸಾರ್ಟ್‍ನಲ್ಲಿ ಇದ್ದು, ಅದೇ ರೆಸಾರ್ಟ್‍ನಲ್ಲಿ ಬೇರೆ ರಾಜ್ಯದ ಶಾಸಕರನ್ನ ಇರಿಸಲಾಗಿದೆ. ಹೀಗಾಗಿ ಸಚಿವರ ರೂಮನ್ನು ಮಾತ್ರ ಪರಿಶೀಲನೆ ಮಾಡಲಾಗ್ತಿದೆ. ದಾಳಿ ತಂಡಕ್ಕೂ ಬೇರೆ ರಾಜ್ಯದ ಶಾಸಕರಿಗೂ ಯಾವುದೇ ಸಂಬಂಧವಿಲ್ಲ, ಸಂಪರ್ಕವೂ ಇಲ್ಲ. ಓರ್ವ ಕರ್ನಾಟಕ ಸಚಿವರ ಮೇಲೆ ಮಾತ್ರ ಈ ದಾಳಿ ನಡೆದಿದೆ ಎಂದು ಇಲಾಖೆ ಸ್ಪಷ್ಟವಾಗಿ ಹೇಳಿದೆ.

ಮಂಗಳವಾರ ರಾತ್ರಿ ದೆಹಲಿಯಿಂದ ಡಿಕೆ ಶಿವಕುಮಾರ್ ಈಗಲ್‍ಟನ್ ರೆಸಾರ್ಟ್‍ಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಐಟಿ ದಾಳಿ ಹಿನ್ನಲೆಯಲ್ಲಿ ಡಿಕೆಶಿ ರೆಸಾರ್ಟ್ ನಲ್ಲೇ ಉಳಿದಿದ್ದಾರೆ.

ಡಿಕೆ ಶಿವಕುಮಾರ್ ಆಪ್ತ ಬಾಲಾಜಿ ಯಲಹಂಕ ನಿವಾಸದ ಮೇಲೆ ಹಾಗೂ ಡಿಕೆಶಿ ಆಪ್ತ ದ್ವಾರಕನಾಥ್ ಗುರೂಜಿ ಮನೆ ಮೇಲೂ ದಾಳಿ ನಡೆದಿದೆ. ಬೆಂಗಳೂರಿನ ಆರ್‍ಟಿ ನಗರದಲ್ಲಿ ವಾಸವಿರುವ ದ್ವಾರಕನಾಥ್ ಗುರೂಜಿ ಹಾಗೂ ಡಿಕೆಶಿ ನಡುವೆ 30 ವರ್ಷಗಳ ಒಡನಾಟವಿದೆ. ಯಾವುದೇ ಶುಭ ಕಾರ್ಯ ಮಾಡುವ ಮುನ್ನ ಗುರೂಜಿ ಸಲಹೆ ಸೂಚನೆ ಪಡೆಯುತ್ತಿದ್ದರು ಡಿಕೆಶಿ.

ಬೆಂಗಳೂರು, ಕನಕಪುರ, ಈಗಲ್ಟನ್ ರೆಸಾರ್ಟ್, ಡಿಕೆಶಿ ಒಡೆತನದ ಕಂಪನಿಗಳು ಹಾಗೂ ಕಾಲೇಜುಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ.

ಐಟಿ ದಾಳಿ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಸಿಎಂ ಸಿದ್ದರಾಮಯ್ಯಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಹೈಕಮಾಂಡ್ ಜತೆ ಸಿಎಂ 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ರೆಸಾರ್ಟ್‍ನಲ್ಲಿ ಗುಜರಾತ್ ಶಾಸಕರ ಪ್ರತಿಕ್ರಿಯೆ ಬಗ್ಗೆ ಮತ್ತು ಐಟಿ ದಾಳಿ ಬಗ್ಗೆ ಅಹಮದ್ ಪಟೇಲ್ ಮಾಹಿತಿ ಪಡೆದಿದ್ದಾರೆ. ಅಹಮದ್ ಪಟೇಲ್ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ.

ಈಗ ಬಂದಿರುವ ಮಾಹಿತಿಯ ಪ್ರಕಾರ ಇಬ್ಬರು ಐಟಿ ಅಧಿಕಾರಿಗಳು ಡಿಕೆಶಿ ಮನೆಯಿಂದ ನಿರ್ಗಮಿಸಿದ್ದಾರೆ. ಮಹತ್ವದ ದಾಖಲೆಗಳು ಪಡೆದು ಒಂದು ತಂಡ ಹೊರಟಿದೆ. ಡಿಕೆಶಿ ಮನೆಯಿಂದ ಅಧಿಕಾರಿಗಳು ಫೈಲ್ ತೆಗೆದುಕೊಂಡು ಹೋಗಿದ್ದಾರೆ. ಸದಾಶಿವನಗರ ಮನೆಯಲ್ಲಿ ಅಪಾರ ಮೌಲ್ಯದ ದಾಖಲಾತಿಗಳನ್ನ ವಶಪಡಿಸಿಕೊಂಡಿದ್ದಾರೆ. ಲಾಕರ್‍ಗಳನ್ನು ತೆರೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಡಿಕೆಶಿಯನ್ನು ಐಟಿ ಅಧಿಕಾರಿಗಳು ಕರೆತರುತ್ತಿದ್ದಾರೆ. ಮನೆಗೆ ಬರೋದಕ್ಕೆ ಪದೇ ಪದೇ ಡಿಕೆಶಿ ಸತಾಯಿಸಿದ್ದು, ತನಿಖೆಗೆ ಸಹಕರಿಸದ ಸಚಿವರ ಮೇಲೆ ಐಟಿ ಅಧಿಕಾರಿಗಳು ಗರಂ ಆಗಿದ್ದಾರೆ. ನನ್ನ ಬಳಿ ಏನಿಲ್ಲ, ಮನೆಯಲ್ಲೂ ಏನಿಲ್ಲ ಎಂದು ಡಿಕೆಶಿ ಹೇಳಿದ್ದು, ನೀವು ಮೊದ್ಲು ಲಾಕರ್‍ಗಳನ್ನು ಓಪನ್ ಮಾಡಿ, ಆಮೇಲೆ ಏನಿದೆ? ಏನಿಲ್ಲ? ಚೆಕ್ ಮಾಡ್ತೀವಿ ಎಂದು ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ದ್ವಾರಕನಾಥ್ ಗುರೂಜಿ

Share This Article
Leave a Comment

Leave a Reply

Your email address will not be published. Required fields are marked *