ಬೆಂಗಳೂರು: ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಆಗುತ್ತಿದ್ದಂತೆ ಸಂಪುಟ ರಚನೆ ವಿಚಾರದಲ್ಲಿ ಜೆಡಿಎಸ್ ಗೆ ಕಾಂಗ್ರೆಸ್ ಆಘಾತ ನೀಡಿತಾ ಎನ್ನುವ ಪ್ರಶ್ನೆ ಈಗ ಎದ್ದಿದೆ.
ಸಚಿವ ಸ್ಥಾನಗಳ ಹಂಚಿಕೆ ಬಗ್ಗೆ ಒಮ್ಮತ ಮೂಡಿದ್ದರೂ ಖಾತೆ ಹಂಚಿಕೆ ವಿಚಾರದಲ್ಲಿ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಜೆಡಿಎಸ್ ನಡುವೆ ಕಿತ್ತಾಟ ನಡೆಯುತ್ತಿದೆ ಎನ್ನಲಾಗಿದೆ.
ಹಣಕಾಸು ಸೇರಿದಂತೆ ಇಂಧನ, ಲೋಕೋಪಯೋಗಿ, ಜಲಸಂಪನ್ಮೂಲ, ಕೈಗಾರಿಕೆ ಖಾತೆಗಳಿಗೆ ಕಾಂಗ್ರೆಸ್ ಪಟ್ಟು ಹಿಡಿದಿದೆ. ಹಣಕಾಸು ಬಿಟ್ಟುಕೊಟ್ಟರೂ ಇತರ ಖಾತೆಗಳನ್ನು ನಮಗೆ ನೀಡುವಂತೆ ಕಾಂಗ್ರೆಸ್ ನಾಯಕರು ಬೇಡಿಕೆ ಇಟ್ಟಿದ್ದಾರೆ.
ಹಿಂದಿನ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಮುಖ್ಯಮಂತ್ರಿ ಸ್ಥಾನವನ್ನು ಇಟ್ಟುಕೊಂಡು ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಖಾತೆಯನ್ನು ಬಿಟ್ಟುಕೊಟ್ಟಿದ್ದೇವೆ. ಹೀಗಾಗಿ ಈ ಬಾರಿ ನಮಗೆ ಈ ಖಾತೆಗಳನ್ನು ನೀಡಿ ಎನ್ನುವ ವಾದವನ್ನು ಕಾಂಗ್ರೆಸ್ ನಾಯಕರು ಮುಂದಿಟ್ಟಿದ್ದಾರೆ.
ರಾಹುಲ್ ಗಾಂಧಿಯವರು ಕಾಂಗ್ರೆಸ್ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿ ಗುಲಾಂ ನಬೀ ಆಜಾದ್ ಅವರಿಗೆ ನೇತೃತ್ವ ವಹಿಸಿ ವಿದೇಶಕ್ಕೆ ತೆರೆಳಿದ್ದಾರೆ. ಎರಡೂ ಪಕ್ಷಗಳ ನಡುವೆ ಖಾತೆ ಹಂಚಿಕೆಯಲ್ಲಿ ಇಂದು ಒಮ್ಮತ ಮೂಡಿದರೆ ಸಂಪುಟ ರಚನೆ ತಕ್ಷಣ ಆಗಲಿದೆ. ಇಲ್ಲ ಅಂದಲ್ಲಿ ರಾಹುಲ್ ಗಾಂಧಿ ಬರುವವರೆಗೂ ಮುಂದೂಡಿಕೆ ಆಗುವ ಸಾಧ್ಯತೆಯಿದೆ.ಇದನ್ನೂ ಓದಿ:ಸಚಿವ ಸಂಪುಟ, ಖಾತೆ ಸಂಪುಟ ವಿಸ್ತರಣೆ- ದೆಹಲಿಯಲ್ಲಿ ಮಹತ್ವದ ಮಾತುಕತೆ