ಗದಗ: ಪಂಚಮಿ ಹಬ್ಬದಲ್ಲಿ ನಾಗದೇವರಿಗೆ ಹಾಲೆರೆಯೋದು ಸಂಪ್ರದಾಯ. ಆದರೆ ಈ ಊರಲ್ಲಿ ಹಾಲಿನ ಬದಲು ರಕ್ತದ ಅಭಿಷೇಕ ಮಾಡ್ತಾರೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಅನೇಕ ಕುಂಚಿಕೊರಮ ಬುಡಕಟ್ಟು ಜನಾಂಗದವರಿದ್ದಾರೆ. ಇವರು ಕಾಡನ್ನೇ ನಂಬಿದ ಜನ. ಬಿದಿರು ಕಡಿಯುವುದು ಹಾಗೂ ದನಕರುಗಳ ಸಾಕಣೆ ಮಾಡುತ್ತಾ ಜೀವನ ಸಾಗಿಸುತ್ತಾರೆ. ಇವರ ಆರಾಧ್ಯ ದೈವ ಕಾಡಿನ ರಾಜ ನಾಗದೇವ. ಹೀಗಾಗಿ ಕೊರಮ ಜನಾಂಗದವರು ನಾಗದೇವರನ್ನ ವಿಶಿಷ್ಟವಾದ ರೀತಿಯಲ್ಲಿ ಪೂಜೆ ಮಾಡ್ತಾರೆ. ನಾಗರ ಪಂಚಮಿ ಹಬ್ಬದಂದು ನಾಗನಿಗೆ ಹಾಲೆರೆಯುವ ಬದಲು ಕೋಳಿ ಬಲಿಕೊಡುವ ಮೂಲಕ ರಕ್ತದ ನೈವೇದ್ಯ ಮಾಡ್ತಾರೆ. ಇಲ್ಲಿ ನೂರಾರು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ.
ತಮ್ಮ ಕಾಲೋನಿಯಲ್ಲಿಯೇ ನಾಗದೇವರ ಗುಡಿ ನಿರ್ಮಿಸಿದ್ದಾರೆ. ಈ ಗುಡಿ ಪೂಜಾರಿಗೆ ದೇವರು ಮೈಮೇಲೆ ಬಂದಾಗ ಇಲ್ಲಿ ಹುಂಜ ಬಲಿಕೊಡುತ್ತಾರೆ. ಕಾಡು ಅಲೆದು ಹುತ್ತಕ್ಕೆ ಪೂಜೆ ಮಾಡುತ್ತಾರೆ. ಈ ಜನಾಂಗದವರಿಗೆ ಹಾವು ಕಚ್ಚಲ್ಲ ಎಂಬ ನಂಬಿಕೆ ಕೂಡಾ ಇದೆ.
ದಿಟನಾಗರ ಕಂಡರೆ ಹೊಡೆಯುವರು, ಕಲ್ಲುನಾಗರ ಕಂಡರೆ ಹಾಲೆರೆಯುವರು ಎಂಬ ಮಾತಿದೆ. ಆದರೆ ಈ ಊರಿನ ಜನ ರಕ್ತಾಭೀಷೇಕ ಮಾಡೋದು ಸೋಜಿಗವೇ ಸರಿ.