ಅಜ್ಞಾತ ಸ್ಥಳದತ್ತ ಶಶಿಕಲಾ ಬೆಂಬಲಿಗರು: ನಿನ್ನೆ ರಾತ್ರಿಯಿಂದ ಇಲ್ಲಿಯವರೆಗಿನ ಟೈಂ ಲೈನ್ ಇಲ್ಲಿದೆ

Public TV
4 Min Read

ಚೆನ್ನೈ: ತಮಿಳುನಾಡಲ್ಲಿ ಯಾರೂ ನಿರೀಕ್ಷಿಸದ ಮಟ್ಟಕ್ಕೆ ಕ್ಷಿಪ್ರ ರಾಜಕೀಯ ಕ್ರಾಂತಿ ಆಗ್ತಿದೆ. ಮಂಗಳವಾರ ರಾತ್ರಿ ಜಯಯಲಿತಾ ಸಮಾಧಿ ಮುಂದೆ ಪನ್ನೀರ್ ಸೆಲ್ವಂ ಧ್ಯಾನಕ್ಕೆ ಇಳಿದು ನಂತರ ನೀಡಿದ ಹೇಳಿಕೆ ಬಳಿಕ ರಾಜಕೀಯದ ಚದುರಂಗದಾಟ ಶುರುವಾಗಿದೆ.

ನಾನು ಯಾವುದೇ ಕಾರಣಕ್ಕೂ ಸುಮ್ಮನಿರಲ್ಲ. ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಸುತ್ತೇನೆ. ಜನ ಬಯಸಿದ್ದರೆ ಮತ್ತೆ ರಾಜೀನಾಮೆ ವಾಪಾಸ್ ಪಡೆಯುತ್ತೇನೆ. ಶಶಿಕಲಾರನ್ನ ಸಿಎಂ ಆಗೋಕೆ ಬಿಡಲ್ಲ ಅಂತಾ ಪನ್ನೀರ್ ಸೆಲ್ವಂ ರಣಕಹಳೆ ಊದಿದ್ದಾರೆ. ರಾಜ್ಯಪಾಲರ ಭೇಟಿಗೂ ಸಮಯ ಕೇಳಿದ್ದಾರೆ.

ಆದರೆ ಯಾವುದೇ ಕಾರಣಕ್ಕೂ ಕುರ್ಚಿ ಬಿಡಲು ಶಶಿಕಲಾ ನಟರಾಜನ್ ಕೂಡಾ ರೆಡಿಯಿಲ್ಲ. ಶಶಿಕಲಾ ಶಾಸಕಾಂಗ ಪಕ್ಷದ ಸಭೆ ಕೂಡಾ ನಡೆಸಿದ್ದಾರೆ. ನಾನು ಕದ್ದುಮುಚ್ಚಿ ಶಾಸಕಾಂಗ ಸಭೆ ನಡೆಸಿಲ್ಲ. ಪನ್ನೀರ್ ಸೆಲ್ವಂ ಒಬ್ಬ ನಯವಂಚಕ. ಜಯಲಲಿತಾ ವಿರೋಧಿಗಳ ಜೊತೆಯೇ ಸೇರಿಕೊಂಡಿದ್ದಾರೆ ಅಂತಾ ಆರೋಪಿಸಿದ್ರು. ಪಕ್ಷದ ಒಗ್ಗಟ್ಟು ಒಡೆಯಲು ಯಾರಿಗೂ ಸಾಧ್ಯವಿಲ್ಲ. ಅಮ್ಮನನ್ನು ಪ್ರೀತಿಸುವವರೆಲ್ಲರೂ ನನಗೆ ಬೆಂಬಲಿಸುತ್ತೀರಿ ಎಂದು ನಂಬಿದ್ದೇನೆ ಅಂತ ಹೇಳಿದ್ರು.

ಈಗಾಗಲೇ 134 ಶಾಸಕರಲ್ಲಿ 131 ಮಂದಿ ಶಾಸಕರನ್ನು ಒಟ್ಟುಮಾಡಿಕೊಂಡಿರುವ ಶಶಿಕಲಾ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ನಾಳೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡುವ ಸಾಧ್ಯತೆಯಿದೆ. ಅಲ್ಲದೇ ಪ್ರಮಾಣ ವಚನಕ್ಕೆ ಬಾರದ ರಾಜ್ಯಪಾಲರ ವಿರುದ್ಧವೂ ದೂರು ನೀಡಲಿದ್ದಾರೆ. ರಾಜ್ಯಪಾಲ ವಿದ್ಯಾಸಾಗರ್ ರಾವ್ ಇನ್ನೂ ಚೆನ್ನೈಗೆ ಬಂದಿಲ್ಲ. ರಾಜ್ಯಪಾಲರು ಎಲ್ಲಿಯವರೆಗೆ ವಿಳಂಬ ಮಾಡುತ್ತಾರೋ ಅಲ್ಲಿಯವರೆಗೆ ಪನ್ನೀರ್ ಸೆಲ್ವಂಗೆ ಶಶಿಕಲಾ ವಿರುದ್ಧ ರಣತಂತ್ರ ಹೆಣೆಯಲು ಅವಕಾಶವಿದೆ.

ನಿನ್ನೆ ರಾತ್ರಿಯಿಂದ ಏನಾಯ್ತು?
* ರಾತ್ರಿ 9.09 – ಚೆನ್ನೈನ ಮರೀನಾ ಬೀಚ್‍ನ ಜಯಾ ಸಮಾಧಿಗೆ ಸೆಲ್ವಂ ಭೇಟಿ
* ರಾತ್ರಿ 9.10 – ಜಯಾ ಸಮಾಧಿ ಮುಂದೆ ಸೆಲ್ವಂ ಧ್ಯಾನ ಆರಂಭ (ಧ್ಯಾನದ ಮಧ್ಯೆ ಕಣ್ಣೀರು ಹಾಕಿದ ಓಪಿಎಸ್)
* ರಾತ್ರಿ 9.45 – ಸಮಾಧಿ ಮುಂದೆ ಧ್ಯಾನ ಅಂತ್ಯ
* ರಾತ್ರಿ 9.54 – ಮಾಧ್ಯಮಗಳಿಗೆ ಸೆಲ್ವಂ ಪ್ರತಿಕ್ರಿಯೆ

* ರಾತ್ರಿ 9.57 – ಶಶಿಕಲಾ ವಿರುದ್ಧ ಬಂಡಾಯದ ಕಹಳೆ
* ರಾತ್ರಿ 10 ಗಂಟೆ – ಜಯಾ ಸ್ಮಾರಕದ ಬಳಿ ಪನ್ನೀರ್ ಸೆಲ್ವಂಗೆ ಜನಬೆಂಬಲ
* ರಾತ್ರಿ 10.30 – ನಿವಾಸಕ್ಕೆ ಮರಳಿದ ಪನ್ನೀರ್ ಸೆಲ್ವಂ
* ರಾತ್ರಿ 10.45 – ಸೆಲ್ವಂ ನಿವಾಸದ ಮುಂದೆ ಜನಸ್ತೋಮ

* ರಾತ್ರಿ 10.45 – ಅತ್ತ ಪೋಯಸ್ ಗಾರ್ಡನ್ ಮುಂದೆ ಶಶಿಕಲಾ ಅಭಿಮಾನಿಗಳ ಜಮಾವಣೆ
* ರಾತ್ರಿ 11 – ಎಐಎಡಿಎಂಕೆ ಶಾಸಕರು, ಸಚಿವರಿಗೆ ಶಶಿಕಲಾ ತುರ್ತು ಬುಲಾವ್
* ಮಧ್ಯರಾತ್ರಿ 11.30 – ಶಶಿಕಲಾ ಮನೆಯಲ್ಲಿ 20 ಸಚಿವರು 80 ಶಾಸಕರು ಹಾಜರು
* ಮಧ್ಯರಾತ್ರಿ 12 – ಪೋಯಸ್ ಗಾರ್ಡನ್ ನಿವಾಸದಲ್ಲಿ ಅಣ್ಣಾಡಿಎಂಕೆ ಪಕ್ಷದ ಸಭೆ
* ಮಧ್ಯರಾತ್ರಿ 12.45 – ಪಕ್ಷದ ಖಜಾಂಚಿ ಹುದ್ದೆಯಿಂದ ಪನ್ನೀರ್ ಸೆಲ್ವಂ ಔಟ್

* ಮಧ್ಯರಾತ್ರಿ 1 ಗಂಟೆ – ಶಶಿಕಲಾ ನಾಯಕತ್ವದಲ್ಲಿ ಪಕ್ಷ ಅಧಿಕಾರ ನಡೆಸುತ್ತೆ – ಎಐಎಡಿಎಂಕೆ
* ಮಧ್ಯರಾತ್ರಿ 1.13 – ಪೋಯಸ್ ಗಾರ್ಡನ್ ನಿವಾಸದಿಂದ ಹೊರಬಂದ ಶಶಿಕಲಾ
* ಮಧ್ಯರಾತ್ರಿ 1.16 – ನಾವೆಲ್ಲಾ ಒಂದೇ ಕುಟುಂಬ. ಎಲ್ಲಾ 134 ಶಾಸಕರು ಒಗ್ಗಟ್ಟಾಗಿದ್ದೇವೆ – ಶಶಿಕಲಾ
* ಮಧ್ಯರಾತ್ರಿ 1.17 – ಇದರ ಹಿಂದೆ ಡಿಎಂಕೆ ಕೈವಾಡ ಇದೆ. ಸೆಲ್ವಂರನ್ನ ಪಕ್ಷದಿಂದ ಉಚ್ಚಾಟಿಸ್ತೇವೆ -ಶಶಿಕಲಾ
* ಮಧ್ಯರಾತ್ರಿ 1.20 – ಶಶಿಕಲಾ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡಬೇಕು – ತಂಬಿದೊರೈ
* ಮಧ್ಯರಾತ್ರಿ 1.40 – ನಾನು ಪಕ್ಷದ ನಿಷ್ಠಾವಂತ. ನನ್ನನ್ನ ಯಾರೂ ಹೊರಹಾಕೋಕೆ ಆಗಲ್ಲ – ಸೆಲ್ವಂ

* ಬೆಳಗ್ಗೆ 9.08 – ಡಿಎಂಕೆಗೂ ಇದಕ್ಕೂ ಸಂಬಂಧವಿಲ್ಲ – ಡಿಎಂಕೆಯ ಟಿಕೆಎಸ್ ಇಳಂಗೋವನ್ ಹೇಳಿಕೆ
* ಬೆಳಗ್ಗೆ 9.17 – ತಮಿಳುನಾಡು ರಾಜಕೀಯ ಅಸ್ಥಿರತೆಗೆ ಕೇಂದ್ರ ಕಾರಣ – ಕಾಂಗ್ರೆಸ್ ಆರೋಪ
* ಬೆಳಗ್ಗೆ 9.27 – ಅಮ್ಮಾ ಭೇಟಿ ಮಾಡಲು ಶಶಿಕಲಾ ಅವಕಾಶ ಕೊಡಲಿಲ್ಲ – ಸೆಲ್ವಂ ಆರೋಪ
* ಬೆಳಗ್ಗೆ 10.15 – ಶಶಿಕಲಾ ಪರ ಸುಬ್ರಮಣಿಯನ್ ಸ್ವಾಮಿ ಬ್ಯಾಟಿಂಗ್
* ಬೆಳಗ್ಗೆ 10.16 – ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲ್ಲ. ರಾಜ್ಯಪಾಲರಿಂದ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಎಂದ ವೆಂಕಯ್ಯ ನಾಯ್ಡು

* ಬೆಳಗ್ಗೆ 10.36 – ಸೆಲ್ವಂಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ರಾಜ್ಯಸಭಾ ಸದಸ್ಯ ಮೈತ್ರೆಯನ್
* ಬೆಳಗ್ಗೆ 10.47 – ಪನ್ನೀರ್ ಸೆಲ್ವಂ – ಪಾಂಡಿಯನ್ ಸುದ್ದಿಗೋಷ್ಠಿ – ವಿಧಾನಸಭೆಯಲ್ಲಿ ನನ್ನ ಬಲ ಏನೆಂದು ತೋರಿಸುವೆ. ಜಯಾ ಸಾವಿನ ಬಗ್ಗೆ ತನಿಖೆಗೆ ಆದೇಶ
* ಬೆಳಗ್ಗೆ 11.37 – ಅಣ್ಣಾಡಿಎಂಕೆ ಕಚೇರಿಯಲ್ಲಿ ಶಶಿಕಲಾ ನೇತೃತ್ವದಲ್ಲಿ ಶಾಸಕರ ಸಭೆ. 130 ಶಾಸಕರು ಹಾಜರು
* ಬೆಳಗ್ಗೆ 11.44 – ಇವತ್ತು ಮುಂಬೈನಲ್ಲೇ ಉಳಿಯಲು ರಾಜ್ಯಪಾಲ ವಿದ್ಯಾಸಾಗರ್ ರಾವ್ ನಿರ್ಧಾರ

* ಮಧ್ಯಾಹ್ನ 12.10 – ಶಶಿಕಲಾಗೆ ಚುನಾವಣಾ ಆಯೋಗಕ್ಕೆ ಶಾಕ್. ಜನೆರಲ್ ಸೆಕ್ರೆಟರಿಯಾಗಿ ಆಯ್ಕೆಯಾದ ಬಗ್ಗೆ ವಿವರ ಕೋರಿ ನೋಟೀಸ್
* ಮಧ್ಯಾಹ್ನ 1.10 – ಶಾಸಕರ ಸಭೆ ಬಳಿಕ ಶಶಿಕಲಾ ಸುದ್ದಿಗೋಷ್ಠಿ. ಪನ್ನೀರ್ ಸೆಲ್ವಂ ಒಬ್ಬ ವಂಚಕ. ಡಿಎಂಕೆ ಜೊತೆ ಸೇರಿದ್ದಾರೆ ಎಂದು ವಾಗ್ದಾಳಿ
* ಮಧ್ಯಾಹ್ನ 1.37 – ಶಶಿಕಲಾ ಆರೋಪ ತಳ್ಳಿಹಾಕಿದ ಎಂ ಕೆ ಸ್ಟಾಲಿನ್
* ಮಧ್ಯಾಹ್ನ 2.15 – ರಾಷ್ಟ್ರಪತಿಗಳ ಮುಂದೆ ಬಲಪ್ರದರ್ಶನ ಮಾಡಲು ಶಶಿಕಲಾ ಅಂಡ್ ಟೀಂ ಚಿಂತನೆ
* ಮಧ್ಯಾಹ್ನ 3.20 – 130 ಶಾಸಕರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಶಶಿಕಲಾ

Share This Article
Leave a Comment

Leave a Reply

Your email address will not be published. Required fields are marked *